ಮುಶಿರುಲ್ ಹಸನ್: ಸೆಕ್ಯುಲರಿಸಂ ಅನ್ನು ಪುನಾರಚಿಸಿದ ಇತಿಹಾಸಕಾರ, ಶಿಕ್ಷಣತಜ್ಞ

Update: 2018-12-22 18:21 GMT

ಸಹೋದ್ಯೋಗಿಗಳು, ಸ್ನೇಹಿತರು ಹಸನ್ ಸಾಬ್ ಅವರನ್ನು ಪ್ರೀತಿಯಿಂದ ‘‘ಶಹಜಹಾ ಆಫ್ ಜಾಮಿಯ’’ ಎಂದು ಕರೆಯುತ್ತಿದ್ದರು. ಇಂದು ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯ ಈ ಮಟ್ಟಕ್ಕೆ ತಲುಪಲು ಹಸನ್ ಅವರ ಶ್ರಮ ಬಲು ಮುಖ್ಯ ಕಾರಣ. ಇಂದು ರಾಷ್ಟ್ರೀಯತೆಯ, ಧರ್ಮದ ಹೆಸರಿನಲ್ಲಿ ವಿಶ್ವವಿದ್ಯಾನಿಲಯಗಳನ್ನು ಧ್ವಂಸಗೊಳಿಸುತ್ತಿರುವುದನ್ನು ಕಂಡಾಗ ಮುಶಿರುಲ್ ಹಸನ್ ಅವರ ಬದುಕು, ಸೆಕ್ಯುಲರಿಸಂ ಮತ್ತು ಮಾನವತಾವಾದ ಮತ್ತೆ ಮತ್ತೆ ಕಾಡುತ್ತದೆ.

10, ಡಿಸೆಂಬರ್ 2018ರಂದು ಅನಾರೋಗ್ಯದ ಕಾರಣದಿಂದ ನಿಧನರಾದ ಇತಿಹಾಸಕಾರ, ಮಾಜಿ ಉಪಕುಲಪತಿ ಮುಶಿರುಲ್ ಹಸನ್ ಅವರು ವಿಶಿಷ್ಟ ಮಾದರಿಯ ಇತಿಹಾಸಕಾರ, ಶಿಕ್ಷಣ ತಜ್ಞರಾಗಿದ್ದರು ಮತ್ತು ಮಹಾನ್ ಮಾನವತಾವಾದಿಯಾಗಿದ್ದರು. 2004-2009ರ ಅವಧಿಯಲ್ಲಿ ಜಾಮಿಯ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಗಳಾಗಿದ್ದರು. ಈ ಅವಧಿಯಲ್ಲಿ ಶಿಕ್ಷಣ ಮತ್ತು ಕಲಿಕೆಗೆ ಹೊಸ ಸ್ವರೂಪವನ್ನು ತಂದುಕೊಟ್ಟರು. ದೇಶವಿದೇಶಗಳಿಂದ ವಿದ್ವಾಂಸರನ್ನು ಆಹ್ವಾನಿಸಿ ಅಧ್ಯಯನ ಮತ್ತು ಸಂಶೋಧನೆಗೆ ವಿಭಿನ್ನ ಮಾದರಿಗಳನ್ನು ಪರಿಚಯಿಸಿದರು. ಇವರ ಕಾಲಘಟ್ಟದಲ್ಲಿ ದಲಿತ ಅಧ್ಯಯನ, ತುಲನಾತ್ಮಕ ಧರ್ಮ, ನೆಲ್ಸನ್ ಮಂಡೇಲ ಶಾಂತಿ ಕೇಂದ್ರ ಒಳಗೊಂಡಂತೆ ಮೌಲಿಕವಾದ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿದರು ಹಾಗೂ ಬೆಳೆಸಿದರು. ಅದಕ್ಕೂ ಮುಂಚೆ ದಶಕಗಳ ಕಾಲ ಇತಿಹಾಸವನ್ನು ಬೋಧಿಸಿದ್ದರು. ಯುಜಿಸಿ ಮತ್ತು ಐಸಿಎಚ್‌ಆರ್ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದರು. ಜವಹರ್‌ಲಾಲ್ ನೆಹರೂ ಸ್ಮಾರಕ ಸಂಸ್ಥೆಯಲ್ಲಿ ಕ್ರಿಯಾಶೀಲರಾಗಿದ್ದರು. ಇವೆಲ್ಲಕ್ಕೂ ಮಿಗಿಲಾಗಿ ಅಧ್ಯಯನ ಮತ್ತು ಸಂಶೋಧನೆಯ ಕುರಿತಾದ ಅಚಲ ನಿಷ್ಠೆ ಮತ್ತು ಸೂಕ್ಷ್ಮ ಸಂವೇದನೆಯ ಮೂಲಕ ಇತಿಹಾಸ ಕಲಿಕೆಗೆ ವಿಭಿನ್ನ ಆಯಾಮಗಳನ್ನು ರೂಪಿಸಿದರು. ಹಸನ್ ಸಾಬ್ ಮಾರ್ಕ್ಸ್‌ವಾದಿಯಾಗಿರಲಿಲ್ಲ, ನವ ಎಡಪಂಥೀಯರಾಗಿರಲಿಲ್ಲ, ಇವೆಲ್ಲವನ್ನೂ ಪಕ್ಕಕ್ಕೆ ಸರಿಸಿ ತಾವು ಕಂಡುಕೊಂಡ ಲಿಬರಲ್ ಪ್ರಜಾತಾಂತ್ರಿಕ ಮಾರ್ಗದಲ್ಲಿ ಚಿಂತಿಸಿದರು ಮತ್ತು ಅದೆ ರೀತಿ ಬದುಕಿದರು

 

ಜಾಮಿಯ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಬೋಧಿಸುತ್ತಿರುವ ಮುಕುಲ್ ಕೇಶವನ್ ಅವರು ‘‘ಹಸನ್ ಅವರು ಗಣರಾಜ್ಯದ ಇತಿಹಾಸ ಮತ್ತು ಅದರ ಬಹುಮುಖ್ಯ ಅಲ್ಪಸಂಖ್ಯಾತರ ಇತಿಹಾಸದ ಕಲಿಕೆ, ಬೋಧನೆಯನ್ನು ಮಾರ್ಪಡಿಸಿದರು’’ ಎಂದು ಹೇಳುತ್ತಾರೆ. ಪ್ರೊ. ಹರಿಶಂಕರ್ ವಾಸುದೇವನ್ ಅವರು ‘‘ತನ್ನ ಧ್ಯೆಯ ಮತ್ತು ಉದ್ದೇಶಗಳ ಕುರಿತು ಹಸನ್ ಅವರಿಗೆ ಬದ್ಧತೆ ಇತ್ತು, ಅವುಗಳ ಮೌಲ್ಯ ಮತ್ತು ಗುಣಾತ್ಮಕತೆ ಬಗ್ಗೆ ಸಂವೇದನೆ, ಸೂಕ್ಷ್ಮತೆ ಹೊಂದಿದ್ದರು. ತನ್ನ ಪತ್ನಿ ಜೋಯ ಹಸನ್ ಜೊತೆಗಿನ ಬೌದ್ಧ್ದಿಕ ಸಂವಾದ ಮತ್ತು ಕಾಮ್ರೇಡ್‌ತನಗಳು ಅವರ ಚಿಂತನೆಗಳಿಗೆ ಮತ್ತಷ್ಟು ಹೊಳಪು ನೀಡಿದ್ದವು’’ ಎಂದು ಬರೆಯುತ್ತಾರೆ

 

ಅಲಿಗಡ, ಕೇಂಬ್ರಿಜ್ ವಿವಿಗಳಲ್ಲಿ ವ್ಯಾಸಂಗ ಮಾಡಿದ್ದ ಹಸನ್ ಅವರು ಕಲೋನಿಯಲಿಸಂ ಸಂದರ್ಭದಲ್ಲಿ ಮುಸ್ಲಿಮರು ಮತ್ತು ಸ್ವಾತಂತ್ರೋತ್ತರ ಭಾರತದಲ್ಲಿ ಮುಸ್ಲಿಮರ ಕುರಿತು ತುಲನಾತ್ಮಕವಾಗಿ ಮತ್ತು ಪ್ರತ್ಯೇಕವಾಗಿ ನಡೆಸಿದ ಸಂಶೋಧನೆ, ಪ್ರಬಂಧಗಳು ಇಂದಿಗೂ ಅತ್ಯುತ್ತಮ ಪಠ್ಯಗಳಾಗಿವೆ. ಕಲಿಕಾ ಮಾರ್ಗಗಳಾಗಿವೆ. ಪ್ರೊ. ಸುಶ್ಮಿತ ಅವರು ‘‘ಮುಶಿರುಲ್ ಅವರು ತಮ್ಮ ಮುಸ್ಲಿಂ ಬುದ್ಧಿಜೀವಿಗಳು, ಸಂಸ್ಥೆಗಳು ಮತ್ತು ಕಲೋನಿಯಲೋತ್ತರ ಅಪಾಯಗಳು ಎನ್ನುವ ಪ್ರಬಂಧದಲ್ಲಿ ಅಕಡಮಿಕ್ ಮತ್ತು ಇತರ ವಲಯಗಳಲ್ಲಿ ಮುಸ್ಲಿಮರನ್ನು ವಸ್ತುಗಳಾಗಿ ನಿರೂಪಿಸಿದರು ಎಂದು ಟೀಕಿಸಿದರು. ಹಸನ್ ಅವರು ಹೇಳುತ್ತಾರೆ ‘ಸ್ವಾತಂತ್ರಾ ನಂತರದಲ್ಲಿ ಬ್ರಿಟಿಷರು ಉದ್ದೇಶಪೂರ್ವಕವಾಗಿಯೆ ಹಾಕಿಕೊಟ್ಟ ಮತ್ತು ಕೆಲ ರಾಷ್ಟ್ರೀಯವಾದಿ ಲೇಖಕರು ಪ್ರತಿಪಾದಿಸಿದ ಚೌಕಟ್ಟಿನಲ್ಲಿ ಮುಸ್ಲಿಂ ಸಮುದಾಯದ ಮೇಲಿನ ಸಂಶೋಧನೆ ಮಾಡಲಾಗುತ್ತಿದೆ. ಮುಸ್ಲಿಮರನ್ನು ವಿವರಿಸಲು ಬಳಸಿದ ಪ್ರವರ್ಗಗಳನ್ನು ಪ್ರಶ್ನಿಸಿದ್ದಾರೆ ಆದರೆ ಬದಲಾಯಿಸಿಲ್ಲ. ಈಗಲೂ ಮುಸ್ಲಿಂ ಮನಸ್ಥಿತಿ, ಮುಸ್ಲಿಂ ದೃಷ್ಟಿಕೋನ, ಇಸ್ಲಾಂ ಸುತ್ತ ಮುಸ್ಲಿಂ ಅಸ್ಮಿತೆಯನ್ನು ಕಟ್ಟುವ ಪ್ರಯತ್ನ ಮಾಡಲಾಗಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಮೇಲೆ ಒಂದು ಬಗೆಯ ಅನ್ಯತೆಯನ್ನು ಆರೋಪಿಸುವ ಪ್ರಜ್ಞೆಯೂ ಇಲ್ಲಿ ಕೆಲಸ ಮಾಡಿದೆ. ಮುದ್ರಣ ಮಾಧ್ಯಮಗಳಲ್ಲಿ, ಸಿನೆಮಾಗಳಲ್ಲಿ, ಸಾಹಿತ್ಯದಲ್ಲಿ ಮುಸ್ಲಿಮರನ್ನು ಇತರರು ಎಂದೇ ಚಿತ್ರಿಸಲಾಗಿದೆ’. ಆದರೆ ಕೇವಲ ಹುಟ್ಟಿನ ಕಾರಣಕ್ಕಾಗಿ, ಧರ್ಮದ ಕಾರಣಕ್ಕಾಗಿ ಮಾತ್ರವಲ್ಲದೆ ಅವರ ಅಸ್ತಿತ್ವ, ಕಸುಬು ಮತ್ತು ಬದುಕಿನ ಆಧಾರದ ಮೇಲೆ ಅಸ್ಮಿತೆಯನ್ನು ಗುರುತಿಸಬೇಕಾಗಿದೆ ಎಂದು ಹಸನ್ ಪ್ರತಿಪಾದಿಸುತ್ತಿದ್ದರು’’ ಎಂದು ವಿವರಿಸುತ್ತಾರೆ. ಮುಸ್ಲಿಂ ಮತ್ತು ಇಸ್ಲಾಂ ಅನ್ನು ಈಗಾಗಲೇ ಒಂದು ಪಡಿಯಚ್ಚು ಚೌಕಟ್ಟಿನಲ್ಲಿ ಕಲ್ಪಿಸಿಕೊಳ್ಳಲಾಗಿದೆ. ಆದರೆ ಹಸನ್ ಅವರು ಈ ಏಕರೂಪಿ ಗ್ರಹಿಕೆಯನ್ನು ಮುರಿಯಲು ಶ್ರಮಿಸಿದರು. ಇದಕ್ಕಾಗಿ ವಿದಾನ ಶಾಸ್ತ್ರವನ್ನು ಅಷ್ಟಾಗಿ ಬಳಸಲು ಒಲವು ತೋರುತ್ತಿರಲಿಲ್ಲ. ಬದಲಿಗೆ ತಮ್ಮ ವಿಶ್ಲೇಷಣಾತ್ಮಕ ಅಧ್ಯಯನದ ಮೂಲಕ ಹಳ್ಳಿ, ಹೋಬಳಿಗಳಲ್ಲಿನ ಬದುಕು, ವ್ಯವಸ್ಥೆಯ ಮೂಲಕ ಇತಿಹಾಸವನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದರು. ಉರ್ದು ಭಾಷೆಯನ್ನು ಇತಿಹಾಸ ನಿರೂಪಣೆ ಮತ್ತು ಕಲಿಕೆಗೆ ಸಮರ್ಥವಾಗಿ ಬಳಸಿಕೊಂಡರು. ಈ ಮೂಲಕ ಇತಿಹಾಸದ ಅಧ್ಯಯನದ ಸ್ವರೂಪವನ್ನೆ ಬದಲಿಸಿದರು. ಇಸ್ಲಾಂ ಕುರಿತಾದ ಮಿಥ್ಯೆಗಳನ್ನು ಎಳೆಎಳೆಯಾಗಿ ವಿವರಿಸಿದರು. ಇದು ಹಸನ್ ಅವರ ಮಹತ್ವದ ಕೊಡುಗೆ.

‘‘ಭಾವೈಕ್ಯತೆ ಮತ್ತು ಅಸ್ಮಿತೆಯ ಹುಡುಕಾಟ: ಸ್ವಾತಂತ್ರಾ ನಂತರದ ಭಾರತೀಯ ಮುಸ್ಲಿಮರು’’ (1988) ಎನ್ನುವ ದೀರ್ಘ ಲೇಖನದಲ್ಲಿ ಸೆಕ್ಯುಲರ್ ಪ್ರಯೋಗಗಳನ್ನು ಮತ್ತೆ ಮತ್ತೆ ಪುನವಿಮರ್ಶೆಗೆ ಒಳಪಡಿಸಬೇಕೆಂದು ಹೇಳುತ್ತಾರೆ. ಭಾರತದಲ್ಲಿನ ಕೋಮುವಾದಕ್ಕೆ ಇಂದಿಗೂ ನೆಹರೂ ಅವರ ಸೆಕ್ಯುಲರ್ ಮಾದರಿ ಮತ್ತು ಬಹು-ರಾಷ್ಟ್ರೀಯ ಭಾವೈಕ್ಯತೆ ಪ್ರಸ್ತುತವಾಗಿದೆ ಎಂದು ನಲವತ್ತು ವಷರ್ಗಳ ಹಿಂದೆ ಅಭಿಪ್ರಾಯಪಡುತ್ತಾರೆ. ಇತ್ತೀಚಿನವರೆಗೂ ಈ ನಿಲುವಿನಲ್ಲಿ ಬದಲಾವಣೆ ಆಗಿರಲಿಲ್ಲ ಎಂದು ಕಾಣುತ್ತದೆ. ಮತಾಂಧ ರಾಷ್ಟ್ರೀಯವಾದಿ ಮತ್ತು ಬದ್ಧತೆಯುಳ್ಳ ಸೆಕ್ಯುಲರ್ ಚಿಂತಕರ ನಡುವಿನ ಭೇದ ಮತ್ತು ಅಂತರಗಳನ್ನು ಗುರುತಿಸುತ್ತ ಮುಖ್ಯವಾಹಿನಿ ರಾಷ್ಟ್ರೀಯತೆಯು ಈ ಅಂತರವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂದು ಅಭಿಪ್ರಾಯಪಡುತ್ತಾರೆ. ಈ ಕಾರಣಕ್ಕಾಗಿಯೇ ಸ್ವಾತಂತ್ರಾ ನಂತರ ಪಾಕಿಸ್ತಾನ ಇಸ್ಲಾಂ ರಾಷ್ಟ್ರವಾಯಿತು. ಆದರೆ ಭಾರತವು ಪ್ರಜಾಪ್ರಭುತ್ವ ಗಣರಾಜ್ಯವಾಗಿ ಕಟ್ಟಲ್ಪಟ್ಟಿತು ಎಂದು ಉದಾಹರಿಸುತ್ತಾರೆ. ಅಸ್ತಿತ್ವದ ಕಾರಣವಾಗಿ ಮುಸ್ಲಿಮರಿಗೆ ಸ್ವತಃ ಮುಸ್ಲಿಮರಾಗಿ ಸೆಕ್ಯುಲರ್ ಇಂಡಿಯಾದಲ್ಲಿ ರಾಜಕಾರಣ ಮಾಡುವುದು ಇಂದು ಅನಿವಾರ್ಯತೆಯಾಗಿ ಉಳಿದಿಲ್ಲ. ಮುಸ್ಲಿಂ ಲೀಗ್ ದುರ್ಬಲಗೊಂಡು ಇತರ ಮುಸ್ಲಿಂ ಸಂಘಟನೆಗಳು ಅಗೋಚರವಾಗಿರುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಜಾಪ್ರಭುತ್ವ ಮತ್ತು ಸೆಕ್ಯುಲರ್ ಚೌಕಟ್ಟಿನಲ್ಲಿಯೇ ರಾಜಕಾರಣ ಮಾಡಬೇಕಾಗಿದೆ ಎಂದು ಪ್ರತಿಪಾದಿಸುತ್ತಾರೆ. ಅಂದರೆ ಐಡೆಂಟಿಟಿ ರಾಜಕಾರಣವು ಇಂದು ತನ್ನ ಪ್ರಸ್ತುತತೆ ಕಳೆದುಕೊಂಡಿದೆ ಎನ್ನುವ ಅವರ ಅಭಿಪ್ರಾಯವು ಸಹ ಸಂಕೀರ್ಣವಾಗಿದೆ. ಏಕೆಂದರೆ ಇಂದು ಐಡೆಂಟಿಟಿ ರಾಜಕಾರಣವನ್ನು ಹಸನ್ ಅವರ ದೃಷ್ಟಿಕೋನದಲ್ಲಿ ಏಕಪಕ್ಷೀಯವಾಗಿ ನೋಡಲು ಸಾಧ್ಯವಿಲ್ಲವೇನೋ. ‘‘ಬಹುತ್ವದಿಂದ ಪ್ರತ್ಯೇಕತೆಯವರೆಗೆ: ಕಲೋನಿಯಲ್ ಭಾರತದಲ್ಲಿ ಕಸಬಾಸ್’’ (2003) ಮುಶಿರುಲ್ ಹಸನ್ ಅವರ ಮತ್ತೊಂದು ಮಹತ್ವದ ಪುಸ್ತಕ. ಕಲೋನಿಯಲ್ ಕಾಲದ ಅವಧ್‌ನಲ್ಲಿ ಕಸಬಾಸ್‌ನ ಬಹುಸಂಸ್ಕೃತಿ ಮತ್ತು ಬಹುತ್ವದ ಕುರಿತು ಆಳವಾಗಿ ಚರ್ಚಿಸುತ್ತಾರೆ. ಸ್ಥಳೀಯ ಇತಿಹಾಸವನ್ನು ರಾಷ್ಟ್ರದೊಂದಿಗೆ ಸಮೀಕರಿಸುತ್ತ ಕಲೋನಿಯಲ್ ಉತ್ತರ ಭಾರತದಲ್ಲಿ ಸಮಾಜೊ-ಸಾಂಸ್ಕೃತಿಕ ಚಹರೆಗಳು ಬದಲಾಗುತ್ತ ಹೋಗುವುದನ್ನು ವಿವರಿಸುತ್ತಾರೆ. ‘‘ನೈತಿಕತೆಯ ಗುರುತಿಸುವಿಕೆ : 19ನೆ ಶತಮಾನದ ದಿಲ್ಲಿಯಲ್ಲಿ ಮುಸ್ಲಿಂ ಬುದ್ಧಿಜೀವಿಗಳು’’ (2005) ಪುಸ್ತಕದಲ್ಲಿ 19ನೆ ಶತಮಾನದ ಅತ್ಯಂತ ಪ್ರಮುಖ ಮುಸ್ಲಿಂ ಬುದ್ಧಿಜೀವಿಗಳು, ದಾರ್ಶನಿಕರಾದ ಮುಹಮ್ಮದ್ ಝಕಾವುಲ್ಲ, ನಝೀರ್ ಅಹ್ಮದ್, ಸೈಯದ್ ಅಹ್ಮದ್ ಖಾನ್, ಮಿರ್ಝಾ ಗಾಲಿಬ್, ಖ್ವಾಜಾ ಅಲ್ತಾಫ್ ಹುಸೇನ್ ಹಾಲಿಯವರ ಬದುಕು, ವರ್ತನೆ ಕಲೋನಿಯಲ್ ಸಾಮ್ರಾಜ್ಯಕ್ಕೆ ಅವರ ಪ್ರತಿಕ್ರಿಯೆ, ಅವರ ಸಾಂಸ್ಕೃತಿಕ ಐಡೆಂಟಿಟಿ ಮತ್ತು ತಮ್ಮ ನಡೆಗಳ ಮೂಲಕ ಮುಸ್ಲಿಂ ಸಮುದಾಯವನ್ನು ರೂಪಿಸಿದ್ದರ ಕುರಿತು ವಿವರಿಸುತ್ತಾರೆ.

ನವೆಂಬರ್ 2014ರಲ್ಲಿ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಮಶಿರುಲ್ ಹಸನ್ ಅವರು ನಂತರ ಚೇತರಿಸಿಕೊಳ್ಳಲಿಲ್ಲ. ದಿನದಿಕ್ಕೂ ದೈಹಿಕವಾಗಿ ಕುಸಿಯುತ್ತ ಹೋದರು. ಪ್ರಭಾತ್ ಪಟ್ನಾಯಕ್ ಅವರು ‘‘ಹಸನ್ ಅವರು ಸಂಸ್ಥೆಯ ಕಟ್ಟಿದ ಕಟ್ಟಕಡೆಯ ವ್ಯಕ್ತಿ. ಇಂದು ನಮ್ಮ ವಿಶ್ವವಿದ್ಯಾನಿಲಯಗಳು ಎದುರಿಸುತ್ತಿರುವ ಕಷ್ಟದ ದಿನಗಳಿಂದ ಹೊರಬಂದರೂ ಮರಳಿ ಹಸನ್‌ರಂತಹ ವ್ಯಕ್ತಿ ದೊರಕುವುದಿಲ್ಲ. ಅವರು ಅಸ್ತಿತ್ವಕ್ಕೆ ಒಂದು ಘನತೆ, ಉದಾತ್ತತೆಯನ್ನು ತಂದುಕೊಟ್ಟರು’’ ಎಂದು ವಿವರಿಸುತ್ತಾರೆ. ಸಲ್ಮಾನ್ ರಶ್ದಿಯ ಸಟಾನಿಕ್ ವರ್ಸಸ್ ಪುಸ್ತಕವನ್ನು ಮೂಲಭೂತವಾದಿಗಳ ಬೆದರಿಕೆಗೆ ಮಣಿದು ರಾಜೀವ್ ಗಾಂಧಿ ಸರಕಾರ ನಿಷೇಧಿಸಿದಾಗ ಇದನ್ನು ಮುಶಿರುಲ್ ಹಸನ್ ವಿರೋಧಿಸುತ್ತಾರೆ. ಸಟಾನಿಕ್ ವರ್ಸಸ್ ಪುಸ್ತಕವನ್ನು ಓದಿ ಚರ್ಚಿಸಬೇಕು ಎಂದು ಹೇಳುವುದರ ಮೂಲಕ ಮೂಲಭೂತವಾದಿಗಳ ಕೋಪಕ್ಕೆ ಗುರಿಯಾಗುತ್ತಾರೆ. ಅವರನ್ನು ಜಾಮಿಯ ಮಿಲ್ಲಿಯಾ ವಿವಿಯಿಂದ ಬಹಿಷ್ಕರಿಸಬೇಕು ಎನ್ನುವ ಒತ್ತಡ ಹೇರಲಾಗುತ್ತದೆ. ಆದರೆ ಇದಾವುದಕ್ಕೂ ಹಸನ್ ಸಾಬ್ ಕ್ಯಾರೇ ಮಾಡುವುದಿಲ್ಲ. ಮುಶಿರುಲ್ ಹಸನ್ ಬರೆಯುತ್ತಾರೆ ‘‘ಫ್ರೆಂಚ್ ಕ್ರಾಂತಿಯ ಇತಿಹಾಸಕಾರ ಅಲ್ಫ್ರಡ್ ಗೊಬ್ಬನ್ ಐತಿಹಾಸಿಕ ನಿರ್ವಚನೆಯ ಕುರಿತು ಹೇಳುತ್ತ ಅದು ತನ್ನ ಸಾಕ್ಷಿಯ ಸ್ಥಿರತೆಯೊಂದಿಗೆ ಜೊತೆಗಿರಬೇಕಾಗುತ್ತದೆ ಅಥವ ಬಿಟ್ಟುಕೊಡಬೇಕಾಗುತ್ತದೆ ಎನ್ನುತ್ತಾನೆ. ಕಥಾವಸ್ತುವೊಂದಕ್ಕೆ ತನ್ನ ಮನಸ್ಸನ್ನು ಕೊಟ್ಟುಕೊಂಡವರಿಗೆ ಮತ್ತಷ್ಟು ಸರಕನ್ನು ಪೂರೈಸುತ್ತಿರುವಂತೆ ಇತಿಹಾಸವನ್ನು ಪ್ರಭಾವಿಸಬಹುದು. ದಿನನಿತ್ಯದ ಬದುಕಿನಲ್ಲಿ ಧರ್ಮವು ಅತ್ಯಂತ ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸುವ ಸಮಾಜದಲ್ಲಿ ಸೆಕ್ಯುಲರಿಸಂ ಅನ್ನು ಕಟ್ಟುವುದು ಇತಿಹಾಸಕಾರನ ಕರ್ತವ್ಯ ಮತ್ತು ದೇಶದ ಭವಿಷ್ಯಕ್ಕಾಗಿ ಸೆಕ್ಯುಲಸಂನ ಜೀವಂತಿಕೆಯನ್ನು ಮತ್ತು ಅದರ ಸಿಂಧುತ್ವವನ್ನ್ನು ನಿರಂತರವಾಗಿ ಕಾಪಾಡಿಕೊಂಡು ಬರುವುದು ಇತಿಹಾಸಕಾರನ ಹೊಣೆಗಾರಿಕೆಯಾಗಿದೆ. ಇಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವುದೆಂದರೆ ದೇಶವನ್ನು ಅಪಾಯದ ಅಂಚಿಗೆ ತಳ್ಳಿದಂತೆ’’.

ಅವರ ಸಹೋದ್ಯೋಗಿಗಳು, ಸ್ನೇಹಿತರು ಹಸನ್ ಸಾಬ್ ಅವರನ್ನು ಪ್ರೀತಿಯಿಂದ ‘‘ಶಹಜಹಾ ಆಫ್ ಜಾಮಿಯ’’ ಎಂದು ಕರೆಯುತ್ತಿದ್ದರು. ಇಂದು ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯ ಈ ಮಟ್ಟಕ್ಕೆ ತಲುಪಲು ಹಸನ್ ಅವರ ಶ್ರಮ ಬಲು ಮುಖ್ಯ ಕಾರಣ ಎಂದು ವಿವಿಯಲ್ಲಿ ಅವರ ಸಹಾಯಕ ಮುಹಮ್ಮದ್ ಶಕೀರ್ ಹೇಳುತ್ತಾರೆ. ಇಂದು ರಾಷ್ಟ್ರೀಯತೆಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ವಿಶ್ವವಿದ್ಯಾನಿಲಯಗಳನ್ನು ಧ್ವಂಸಗೊಳಿಸುತ್ತಿರುವುದನ್ನು ಕಂಡಾಗ ಮುಶಿರುಲ್ ಹಸನ್ ಅವರ ಬದುಕು, ಸೆಕ್ಯುಲರಿಸಂ ಮತ್ತು ಮಾನವತಾವಾದ ಮತ್ತೆ ಮತ್ತೆ ಕಾಡುತ್ತದೆ. ಎಪ್ರಿಲ್ 2014ರಲ್ಲಿ ರಾಬಿನ್ ಜೆಫ್ರಿ ಸಂಪಾದಕತ್ವದಲ್ಲಿನ ‘ದಕ್ಷಿಣ ಭಾರತದಲ್ಲಿ ಒಬ್ಬ ಮುಸ್ಲಿಮನಾಗಿ’ ಎನ್ನುವ ಪುಸ್ತಕದ ಬಿಡುಗಡೆ ಮಾಡುತ್ತಾ ಹಸನ್ ಅವರು ‘‘ಮೇ 16ರ ನಂತರ ಒಬ್ಬ ಮುಸ್ಲಿಂ ಆಗಿ ಬದುಕುವುದು ತುಂಬಾ ಕಷ್ಟವಾಗುತ್ತದೆ’’ ಎಂದು ವ್ಯಥೆಪಟ್ಟಿದ್ದರು. ಇಂದು ಆ ಆತಂಕ ನಿಜವಾಗಿದೆ. ಅವರ ನಿರ್ಗಮನದಿಂದ ಉಂಟಾದ ಶೂನ್ಯತೆಯನ್ನು ತುಂಬುವುದು ತ್ರಾಸದಾಯಕ

ಆದರೂ ಯೆ ಹಿ ಝಿಂದಗೀ ಹೈ, ಅಲ್ವಿದ ಮುಶಿರುಲ್ ಸಾಬ್.

Writer - ಬಿ. ಶೀಪಾದ ಭಟ್

contributor

Editor - ಬಿ. ಶೀಪಾದ ಭಟ್

contributor

Similar News