ರಾಜೀನಾಮೆ ನೀಡುತ್ತೇನೆಂದ ರಮೇಶ್ ಜಾರಕಿಹೊಳಿ: ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್
Update: 2018-12-24 13:30 GMT
ಬೆಂಗಳೂರು, ಡಿ.24: ಶಾಸಕ ರಮೇಶ್ ಜಾರಕಿಹೊಳಿ ಆವೇಶದಲ್ಲಿ ಮಾತನಾಡಿದ್ದಾರೆ. ನಾನು ಅವರ ಬಳಿ ಚರ್ಚಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡ ಈ ಹಿಂದೆ ಸಚಿವ ಸ್ಥಾನ ಸಿಗದೆ, ಏಳೆಂಟು ತಿಂಗಳು ಖಾಲಿ ಇದ್ದೆ. ಧರ್ಮಸಿಂಗ್ ಅವಧಿಯಲ್ಲೂ ನನ್ನನ್ನು ಹೊರಗೆ ಇಟ್ಟಿದ್ದರು. ಯಾವ ನಾಯಕರೂ ನನ್ನ ಪರ ಮಾತನಾಡಲು ಬರಲಿಲ್ಲ. ಅದಾದ, ಬಳಿಕ ಹೈಕಮಾಂಡ್ ಕರೆದು ಸಚಿವ ಸ್ಥಾನ ಕೊಟ್ಟಿತು ಎಂದು ಹೇಳಿದರು.
ಪ್ರಸ್ತುತ ಸಚಿವ ಸಂಪುಟದಲ್ಲಿ ಅವಕಾಶ ನೀಡಿದವರಿಗೆ ಎರಡು ವರ್ಷಕ್ಕೆ ಮಾತ್ರ ಎಂದು ಹೇಳಲಾಗಿದ್ದು, ಆ ಬಳಿಕ ಮತ್ತೆ ಪುನರ್ ರಚನೆ ಮಾಡುತ್ತೇವೆ ಎಂದ ಅವರು ಎಲ್ಲರಿಗೂ ಆಸೆ ಇರುತ್ತದೆ. ಅದೇನು ತಪ್ಪಲ್ಲ ಎಂದರು.