×
Ad

ಹೊಸ ವರ್ಷಾಚರಣೆ ಹಿನ್ನೆಲೆ: ಬೆಂಗಳೂರಿನಾದ್ಯಂತ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ

Update: 2018-12-27 22:03 IST

ಬೆಂಗಳೂರು, ಡಿ.27: ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ನಗರದಾದ್ಯಂತ 20ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಹೊಸ ವರ್ಷದ ಹಿನ್ನೆಲೆಯಲ್ಲಿ ಡಿ.31 ರಂದು ರಾತ್ರಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ, ಮಲ್ಲೇಶ್ವರಂ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮದಲ್ಲಿ ತೊಡಗಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಸೂಕ್ತವಾದ ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಭದ್ರತೆಯ ನಿಗಾವಹಿಸಲು ಐವರು ಹೆಚ್ಚುವರಿ ಪೊಲೀಸ್ ಆಯುಕ್ತರು, ಓರ್ವ ಜಂಟಿ ಪೊಲೀಸ್ ಆಯುಕ್ತ, 15 ಮಂದಿ ಡಿಸಿಪಿಗಳು, 45 ಮಂದಿ ಎಸಿಪಿಗಳನ್ನು ನಿಯೋಜನೆ ಮಾಡಲಾಗಿದೆ. 220 ಇನ್ಸ್‌ಪೆಕ್ಟರ್‌ಗಳು, 430 ಸಬ್‌ಇನ್ಸ್‌ಪೆಕ್ಟರ್‌ಗಳು, 800 ಎಎಸ್‌ಐಗಳು, 10 ಸಾವಿರ ಮುಖ್ಯಪೇದೆಗಳು, ಒಂದೂವರೆ ಸಾವಿರ ಗೃಹ ರಕ್ಷಕ ಸಿಬ್ಬಂದಿ, 1 ಸಾವಿರ ಸಿವಿಲ್ ಡಿಫೆನ್ಸ್, ಗರುಡಾ ಫೋರ್ಸ್‌ನ 1 ತುಕಡಿ, 2 ಕ್ಯುಆರ್‌ಟಿ ತುಕಡಿಗಳು, 2 ವಾಟರ್ ಜೆಟ್‌ಗಳು, ಕೆಎಸ್‌ಆರ್‌ಪಿಯ 50 ಹಾಗೂ ಸಿಎಆರ್‌ನ 30 ತುಕಡಿಗಳನ್ನು ನಿಯೋಜನೆ ಮಾಡಿ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.

ರೇವ್ ಪಾರ್ಟಿಗಳು, ಹೊಟೇಲ್-ರೆಸ್ಟೋರೆಂಟ್‌ಗಳ ಬಳಿ ಪೊಲೀಸರು ಭದ್ರತೆ ಕೈಗೊಳ್ಳಲಿದ್ದು, ಸಂಭ್ರಮಾಚರಣೆ ವೇಳೆ ಹೆಚ್ಚಿನ ಜನ ಸೇರುವ ಸ್ಥಳಗಳಲ್ಲಿ ಸಿಸಿಟಿ ಕ್ಯಾಮರಾಗಳು, ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುವುದು. ಹೆಣ್ಣು ಮಕ್ಕಳ ರಕ್ಷಣೆಗಾಗಿ ವಿಶೇಷ ಸ್ಕ್ವಾಡ್ ನಿಯೋಜನೆಗೆ ಕ್ರಮ ವಹಿಸಲಾಗಿದೆ. ಡಿ. 31ರ ರಾತ್ರಿ 8 ರಿಂದ ಬೆಳಗ್ಗೆವರೆಗೆ ಜನಸಂದಣಿ ರಸ್ತೆಗಳಲ್ಲಿ ಸಂಚಾರ ನಿಷೇಧ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಪಬ್‌ಗಳ ಮಾಲಕರು ಅವರವರ ಸ್ಥಳಗಳಲ್ಲಿ ಹೆಣ್ಣುಮಕ್ಕಳಿಗಾಗಿ ವಿಶೇಷ ರಕ್ಷಣಾ ವ್ಯವಸ್ಥೆಯನ್ನು ಏರ್ಪಡಿಸಿಕೊಳ್ಳಬೇಕು. ಪಬ್-ರೆಸ್ಟೋರೆಂಟ್‌ಗಳ ಒಳಗೆ ಹಾಗೂ ಮುಂಭಾಗದಲ್ಲಿ ಆಗುವ ಗಲಾಟೆಗಳಿಗೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಅಲ್ಲದೆ, ಅಪ್ರಾಪ್ರ ವಯಸ್ಸಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮದ್ಯ ಸರಬರಾಜು ಮಾಡಬಾರದು. ರೇವ್ ಪಾರ್ಟಿಗಳು ಪಬ್‌ಗಳ ಬಳಿ ಗಾಂಜಾ ಇನ್ನಿತರ ಮಾದಕ ವಸ್ತು ಮಾರಾಟ ಸೇವನೆ ಬಗ್ಗೆ ಸಿಸಿಬಿ ಪೊಲೀಸರು ನಿಗಾವಹಿಸಲಿದ್ದಾರೆ ಎಂದು ತಿಳಿಸಿದರು.

ಮೆಟ್ರೋಗೆ ಮನವಿ: ನಗರದಲ್ಲಿ ಡಿ. 31ರ ಮಧ್ಯರಾತ್ರಿ 2ರವರೆಗೆ ಮೆಟ್ರೋ ರೈಲು ಸಂಚಾರ ವಿಸ್ತರಿಸುವಂತೆ ಹಾಗೂ ಬಿಎಂಟಿಸಿ ಬಸ್ ಸಂಚಾರವನ್ನು ನಡೆಸುವಂತೆ ಮನವಿ ಮಾಡಲಾಗುತ್ತದೆ. ಇನ್ನುಳಿದಂತೆ ಓಲಾ, ಊಬರ್, ಟ್ಯಾಕ್ಸಿ ಸಂಸ್ಥೆಗಳನ್ನು ಸಂಪರ್ಕ ಮಾಡಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗುತ್ತದೆ. ಅಲ್ಲದೆ, ಆಟೋಗಳ ಸಂಚಾರವನ್ನು ಮುಂಜಾನೆವರೆಗೂ ನಡೆಸಲು ಮನವಿ ಮಾಡಲಾಗುತ್ತದೆ ಎಂದು ಹೇಳಿದರು.

ಕುಡಿದು ಗಲಾಟೆ ಮಾಡುವುದು, ಮಹಿಳೆಯರಿಗೆ ಕೀಟಲೆ ಮಾಡುವವರನ್ನು ಸ್ಥಳದಲ್ಲೆ ಬಂಧಿಸಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುವುದು. 270 ಹೊಯ್ಸಳ, 1200 ಚೀತಾ, ಇತರ ವಾಹನಗಳನ್ನು ಬಳಸಿ ಪೆಟ್ರೋಲಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಸುನೀಲ್ ಕುಮಾರ್ ವಿವರಿಸಿದರು.

ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಡಿ.31 ರಂದು ರಾತ್ರಿ ವೇಳೆ ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸುವವರ ತಪಾಸಣೆ ನಡೆಸಲಾಗುತ್ತದೆ. ಅಲ್ಲದೆ, ಸಾರ್ವಜನಿಕ ಪಾದಚಾರಿ ಮಾರ್ಗಗಳ ಮೇಲೆ ವಾಹನ ಸಂಚಾರ, ಡ್ರಾಗ್ ರೇಸಿಂಗ್, ವ್ಹೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

-ಹರಿಶೇಖರನ್, ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News