‘ಹೂಬಿಟ್ಟ ಕಣ್ಣು’ ಕಾಲದ ಬಿಕ್ಕಟ್ಟು, ಬವಣೆ ಮತ್ತು ಭರವಸೆ

Update: 2018-12-30 07:17 GMT

ಈಪುಸ್ತಕದ ಲೇಖನಗಳನ್ನು ಓದುತ್ತಾ ಓದುತ್ತಾ ನನಗೆ ಮತ್ತೆ ಮತ್ತೆ ಖಾತರಿಯಾದದ್ದು ದೇವನೂರ ಮಹಾದೇವ ಅವರು ಜನಜನಿತಗೊಳಿಸಿದ ಮಾತು-ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಾದರೊಂದು ದಿನ ಫಲ ಕೊಡುವುದು. ಎದೆಗೆ ಬಿದ್ದ ಅಕ್ಷರ ಫಲ ಕೊಡುವುದು ಎಂದರೆ ಏನು ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡರೆ ಅದಕ್ಕೆ ಉತ್ತರವಾಗಿ ಈ ಪುಸ್ತಕದ ಬರಹಗಳು ನಿಲ್ಲುತ್ತವೆ. ಕಾವ್ಯ, ನಾಟಕ, ಸಿನೆಮಾ, ಬದುಕಿನ ಅನುಭವ, ಸಾಮಾಜಿಕ ಹೋರಾಟ, ವ್ಯಕ್ತಿ ಚಿತ್ರ... ಹೀಗೇ ನಾನಾ ವಿಷಯಗಳ ಸುತ್ತ ನಡೆಸಿದ ಸಂಕಥನ ಈ ಲೇಖನಗಳಲ್ಲಿದೆ. ಹೌದು ಈ ಬರಹಗಳ ಮೂಲಕ ಗೆಳೆಯ ಹುಲಿಕುಂಟೆ ಮೂರ್ತಿ ಒಂದು ಡಿಸ್ಕೋರ್ಸ್ ನಡೆಸಿದ್ದಾರೆ. ಈ ಕಾಲದ ಬದುಕಿನ ಬಿಕ್ಕಟ್ಟು, ಬವಣೆ, ವಿರೋಧಾಭಾಸಗಳು, ಭರವಸೆ ಎಲ್ಲವೂ ಇಲ್ಲಿ ಕಾಣುತ್ತವೆ.

ನಾವಿರುವ ಈ ಕಾಲ ಅನೇಕ ಸಂಕೀರ್ಣತೆಗಳನ್ನು, ಡೋಲಾಯಮಾನ ಪರಿಸ್ಥಿತಿಗಳನ್ನು ನಿರ್ಮಿಸಿದೆ. 70-80 ದಶಕದಲ್ಲಿ ಯಾರಾದರೂ ತಮಗೆ ಬೇಕಾದ ಒಂದು ನೆಲೆಯನ್ನು ಸ್ಪಷ್ಟವಾಗಿ ಆರಿಸಿಕೊಂಡು ನಿಂತು ಬಿಡಬಹುದಿತ್ತು. ಬರವಣಿಗೆ, ಹೋರಾಟ, ರಾಜಕಾರಣ ಎಲ್ಲವೂ ಆಯಾ ನೆಲೆಯಲ್ಲಿ ಸಾಧ್ಯವಿತ್ತು. ಆದರೆ ನಾವಿರುವ ಈ ಕಾಲದ ವಿಶೇಷತೆ ಬೇರೆ. ಇಲ್ಲಿ ಬದುಕಿನ ಸಂಕೀರ್ಣತೆಗಳು ಸಾಹಿತ್ಯ, ಸಿದ್ಧಾಂತ, ಚಳವಳಿ, ರಾಜಕಾರಣ ಎಲ್ಲವನ್ನೂ ಪ್ರವೇಶಿಸಿದೆ. ಈ ಕಾರಣದಿಂದಲೇ ಇಲ್ಲಿನ ಬರಹಗಳಲ್ಲಿ ಸರಳ ರೇಖಾತ್ಮಕ ನಿರೂಪಣೆ ಸಿಗದು. ಹಾಗಂತ ಈ ಬರಹಗಳಲ್ಲಿ ತಾತ್ವಿಕತೆ ಇಲ್ಲವೆಂದು ಅಲ್ಲವೇ ಅಲ್ಲ. ನಿಸ್ಸಂಶಯವಾಗಿ ಈ ಬರಹಗಳು ಗಟ್ಟಿಯಾದ ತಾತ್ವಿಕ ತಳಹದಿಯನ್ನೇ ಹೊಂದಿವೆ. ಇಲ್ಲಿನ ಎಲ್ಲ ಬರಹಗಳಲ್ಲಿ ಅಂತರ್ಗಾಮಿಯಾಗಿ ಪ್ರವಹಿಸುವ ಜೀವ ಕಾರುಣ್ಯವಿದೆ. ಈ ಸಂಕಲನದಲ್ಲಿನ ಬಹುತೇಕ ಬರಹಗಳು ಕಣ್ಣೆದುರಿನ ಸಂಗತಿಗಳಿಗೆ ತಕ್ಷಣದ ಸ್ಪಂದನೆಗಳಾಗಿವೆ.

ಹಲವಾರು ವ್ಯಕ್ತಿಗಳ ಬಗ್ಗೆ ಬರೆಯುವಾಗ ಮೂರ್ತಿ ಸ್ವಲ್ಪ ಹೆಚ್ಚೇ ಭಾವುಕರಾಗುತ್ತಾರೆ ಅನಿಸಿದೆ. ಈ ಭಾವುಕತೆ ನಾಟಕೀಯವಾದುದಲ್ಲ. ಮಿದುಳಿನಿಂದ ಯೋಚಿಸದೇ ಹೃದಯದಿಂದಲೇ ಯೋಚಿಸುವುದರಿಂದ ಬರುವ ಈ ಭಾವುಕತೆ ಶೋಷಣೆ, ಅಪಮಾನಗಳನ್ನು ತಲೆಮಾರುಗಳಿಂದ ಅನುಭವಿಸಿಕೊಂಡು ಬಂದ ದಲಿತ ಸಮುದಾಯಗಳು ಲೆಕ್ಕವಿಲ್ಲದಷ್ಟು ಸಲ ನೆಲಕ್ಕೆ ಬಿದ್ದರೂ ಮನುಷ್ಯರಲ್ಲಿ ನಂಬಿಕೆ ಉಳಿಸಿಕೊಳ್ಳಲು ನಡೆಸುವ ಪ್ರಯತ್ನದ ಭಾಗವೂ ಇದ್ದೀತು. ಆದರೆ ಕೆಲವೊಮ್ಮೆ ಈ ಭಾವುಕತೆ ಆರಾಧನೆಯಾಗಿ ಬಿಡುವ ಬಗ್ಗೆಯಾಗಲೀ ಅಥವಾ ಭ್ರಮನಿರಸನಕ್ಕೂ ಕಾರಣವಾಗಿಬಿಡುವ ಬಗ್ಗೆ ಮೂರ್ತಿ ಅಷ್ಟಾಗಿ ತಲೆ ಕೆಡಿಸಿಕೊಳ್ಳುವವರಲ್ಲ. ಆ ಕ್ಷಣ ಎದೆಯ ದನಿ ಏನು ಹೇಳುವುದೋ ಅದನ್ನು ಒಲಿಸಿಕೊಂಡು ಅಕ್ಷರವಾಗುವ ಈ ಬರಹಗಳು ನೀಡುವ ಅನುಭೂತಿ ವಿಶೇಷವಾದುದು.

ಸ್ವತಃ ನಾಟಕಕಾರರೂ ಆಗಿರುವ ಮೂರ್ತಿ ಇಲ್ಲಿ ನಾಟಕಗಳ ಬಗ್ಗೆ ಬರೆದಿರುವ ಲೇಖನಗಳು ಸೊಗಸಾಗಿವೆ. ಮೆಕ್ಕಾ ದಾರಿ, ಕೋರೆಗಾಂವ್, ಸಣ್ತಿಮ್ಮಿ, ಕುರಿತ ಬರೆಹಗಳು ನಮ್ಮ ಕಾಲದ ಅತ್ಯುತ್ತಮ ರಂಗ ಪ್ರಯೋಗ, ಸಾಧ್ಯತೆಗಳ ಕುರಿತು ನಡೆಸಿರುವ ಸಾಂಸ್ಕೃತಿಕ ಅನುಸಂಧಾನಗಳು.

ಇಲ್ಲಿನ ಬರಹಗಳಲ್ಲಿ ಬಳಸಿರುವ ಭಾಷೆ ಮತ್ತು ಶೈಲಿಗಳು ನಮ್ಮನ್ನು ಮುದಗೊಳಿಸುತ್ತವೆ. ಅದು ಎದೆಯ ಒಳಗಿನ ಗಾಯಗಳ ನೆನಪು ತಂದುಕೊಳ್ಳುವುದಿರಲಿ, ಓದಿದ ಕವಿತೆ, ನೋಡಿದ ನಾಟಕ, ಒಡನಾಡಿದ ವ್ಯಕ್ತಿ.... ಯಾವುದರ ಬಗ್ಗೆ ಆರಂಭಿಸಿದರೂ ಸರಿ ಅದು ಹಾಗೇ ನಮ್ಮನ್ನು ತನ್ನೊಳಗೆ ತಲ್ಲೀನಗೊಳಿಸಿಕೊಂಡುಬಿಡುತ್ತವೆ. ಅವರಿಗೆ ತಾವು ಬರೆಯುತ್ತಿರುವುದು ಗದ್ಯ ಎಂಬ ತಿಳಿದಿದ್ದರೂ ತಾವು ಕವಿಯಾಗಿಯೇ ಬರೆಯುವುದೇ ಇವುಗಳ ವಿಶೇಷತೆ. ಹೀಗೆ ಬರೆಯುವುದು ಬರಹಕ್ಕೆ ಕೆಲವು ಲಾಭವನ್ನು ನೀಡುವುದರ ಜೊತೆಗೆ ಕೆಲವು ಅನನುಕೂಲತೆಯನ್ನು ಸಹ ಉಂಟು ಮಾಡುತ್ತದೆ. ಓದುವಾಗ ಸಿಗುವ ಖುಷಿ ಅದರ ಲಾಭವಾದರೆ ಬರೆಯುವಾಗ ಕೆಲವೊಮ್ಮೆ ವಸ್ತುನಿಷ್ಠತೆಯಿಂದ ಜಾರುವುದು ಬರೆಯುವವನಿಗೆ ಆಗುವ ನಷ್ಟ.

ಈ ಬರಹಗಳಲ್ಲಿ ಒಂದು ತಾದ್ಯಾತ್ಮವಿದೆ, ಮನಸ್ಸನ್ನು ತಟ್ಟುವ ಆರ್ದ್ರತೆಯಿದೆ, ಗಟ್ಟಿಯಾದ ತಾತ್ವಿಕತೆ ಇದೆ... ಎಲ್ಲಕ್ಕಿಂತ ಮುಖ್ಯವಾಗಿ ನೆಲದ ಮೂಲ ಸಂಸ್ಕೃತಿಯ ಘಮವಿದೆ, ಸತ್ವವಿದೆ.

ಹಿರಿಯರಾದವರಿಗೆ ಕಿರಿಯರಲ್ಲಿ ಕಾಣುವ ಪುಳಕಗಳೂ ಕಿರಿಯರಾದವರಿಗೆ ಹಿರಿಯರಲ್ಲಿ ಸಿಗುವ ಪ್ರಜ್ಞೆಯೂ ಸಮವಾಗಿ ಬೆಸೆದ ಬರಹಗಳು ಇವು. ಎಲ್ಲಕ್ಕಿಂತ ಮುಖ್ಯವಾಗಿ ಈ ಬರಹಗಳೆಲ್ಲವೂ ನಾವಿರುವ ಈ ಕಾಲ ಮತ್ತು ದೇಶದೊಂದಿಗೆ ಮುಖಾಮುಖಿಯಾಗಿ ನಡೆಸುತ್ತಿರುವ ಅನುಸಂಧಾನಗಳು.

Writer - ಹರ್ಷಕುಮಾರ್ ಕುಗ್ವೆ

contributor

Editor - ಹರ್ಷಕುಮಾರ್ ಕುಗ್ವೆ

contributor

Similar News