ಮೃತ ಪ್ರಶಿಕ್ಷಣಾರ್ಥಿ ಪಿಎಸ್ಸೈಗೆ ನೆರವು: ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಅಭಿನಂದನೆ

Update: 2019-01-07 16:27 GMT

ಬೆಂಗಳೂರು,ಜ. 7: ಕಲಬರಗಿ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿ ಬಸವರಾಜ ಶಂಕರಪ್ಪಮಂಚನೂರು ಅವರ ಆಕಸ್ಮಿಕ ನಿಧನ ಅತ್ಯಂತ ನೋವಿನ ಸಂಗತಿ. ಆದರೆ, ಅವರ 590 ಸಹ ಪ್ರಶಿಕ್ಷಣಾರ್ಥಿಗಳು ತಲಾ 10ಸಾವಿರ ರೂ.ನಂತೆ ಮೃತರ ಕುಟುಂಬಕ್ಕೆ ನೆರವು ನೀಡಲು ಮುಂದಾಗಿರುವುದು ಅಭಿನಂದನೀಯ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳು ಬಸವರಾಜ ಮಂಚನೂರು ಅವರು ಆಕಸ್ಮಿಕ ನಿಧನರಾದ ಹಿನ್ನೆಲೆಯಲ್ಲಿ ತಮ್ಮ ಗೆಳೆಯನಿಗೆ ನೆರವಾಗಲು ಮುಂದೆ ಬಂದಿರುವ ವಿಷಯ ತಿಳಿದು ಹೃದಯ ತುಂಬಿ ಬಂತು. ಅವರ ಔದಾರ್ಯ ಇತರರಿಗೆ ಮಾದರಿಯಾದುದು. ಇದಕ್ಕೆ ಪ್ರೇರಣೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಹಾಗೂ ತಮ್ಮ ಗೆಳೆಯ ಸಾವಿಗೆ ಮನಮಿಡಿದು ಸ್ಪಂದಿಸಿದ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಸಿಎಂ ಕುಮಾರಸ್ವಾಮಿ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

ರಾಜ್ಯ ಸರಕಾರವು ನಿಯಮಾನುಸಾರ ಬಸವರಾಜ ಅವರಿಗೆ ನೀಡಬೇಕಾದ ಪರಿಹಾರಗಳನ್ನು ತ್ವರಿತವಾಗಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News