ನೂತನ ತಂತ್ರಜ್ಞಾನ ಬಳಸಿ ಮೇಲ್ಸೇತುವೆ ಡಾಂಬರೀಕರಣ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಜ.8: ನಗರದ ಕೆ.ಆರ್.ಮಾರುಕಟ್ಟೆಯಿಂದ ಆರಂಭವಾಗುವ ಸಿರ್ಸಿ ವೃತ್ತದ ಮೇಲ್ಸೇತುವೆಯ ಡಾಂಬರೀಕರಣ ಕಾಮಗಾರಿಯನ್ನು ಹೊಸ ತಂತ್ರಜ್ಞಾನ ಬಳಸಿ ಮಾಡಲಾಗುತ್ತಿದ್ದು, ಮುಂದಿನ ಒಂದು ತಿಂಗಳೊಳಗೆ ಕಾಮಗಾರಿ ಪೂರ್ತಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಸಿರ್ಸಿ ವೃತ್ತದ ಮೇಲ್ಸೇತುವೆ ಡಾಂಬರೀಕರಣ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿರ್ಸಿ ವೃತ್ತದ 2.5 ಕಿ.ಮೀ. ಮೇಲ್ಸೇತುವೆಯ ಒಂದು ಭಾಗದಲ್ಲಿ ಮಿನಿರಲ್ ಆಧಾರಿತ ಆಸ್ಫಾಲ್ಟಿಕೋ ಸೀಲ್ನ ಶೀಟನ್ನು ಹಾಕಲಾಗುತ್ತಿದೆ. ಈ ತಂತ್ರಜ್ಞಾನದ ಮೂಲಕ ಸೇತುವೆ ಮೇಲೆ ನೀರು ನಿಲ್ಲುವುದು ಅಥವಾ ರಸ್ತೆ ಗುಂಡಿ ಬೀಳುವ ಪ್ರಮೇಯ ಬರುವುದಿಲ್ಲ ಎಂದರು.
ಸೇತುವೆಯ ಮೇಲೆ ಅಳವಡಿಸುವ ಶೀಟನ್ನು 140 ಡಿಗ್ರಿ ಉಷ್ಣಾಂಶದಲ್ಲಿ ಬಿಸಿ ಮಾಡಿ ಅದನ್ನು ರಸ್ತೆಗೆ ಹಾಕಿ, ಅದರ ಮೇಲೆ ಡಾಂಬರೀಕರಣ ಮಾಡಲಾಗುತ್ತದೆ. 4.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಮುಂದಿನ ಒಂದು ತಿಂಗಳೊಳಗೆ ಕಾಮಗಾರಿಯನ್ನು ಪೂರ್ತಿ ಮಾಡಬೇಕು ಎಂದು ಎಂಜಿನಿಯರ್ಗಳಿಗೆ ಸೂಚಿಸಿದ್ದೇನೆ. ಈ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿಸಿದರು.
ಮೇಲ್ಸೇತುವೆಯಲ್ಲಿ ರಸ್ತೆ ಗುಂಡಿ ಬೀಳುವ ಹಾಗೂ ಮಳೆನೀರು ನಿಲ್ಲುವ ದೂರುಗಳು ಕೇಳಿ ಬರುತ್ತಿದ್ದವು. ಈ ದೃಷ್ಟಿಯಿಂದ ನೂತನ ತಂತ್ರಜ್ಞಾನ ಬಳಸಿಕೊಂಡು ಡಾಂಬರೀಕರಣ ಮಾಡಲಾಗುತ್ತಿದೆ. ಈ ತಂತ್ರಜ್ಞಾನ ಕೇವಲ ಮೇಲ್ಸೇತುವೆ ರಸ್ತೆಗಳಿಗೆ ಬಳಕೆ ಮಾಡಿಕೊಳ್ಳಲು ಸಾಧ್ಯ. ಇತರೆಡೆ ವೈಟ್ ಟಾಪಿಂಗ್ ಹಾಗೂ ಟೆಂಡರ್ಶ್ಯೂರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಮಿಕ ವಿರೋಧಿ ನೀತಿಗಳು, ಜಿಎಸ್ಟಿ, ನೋಟ್ ಬ್ಯಾನ್ ಸೇರಿದಂತೆ ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಬಂದ್ಗೆ ಕರೆ ನೀಡಲಾಗಿದೆ. ಯಾರಾದರೂ ಕಾರ್ಮಿಕ ವಿರೋಧಿ ನೀತಿಯಂಥ ನಿರ್ಧಾರಗಳನ್ನು ವಿರೋಧಿಸಬೇಕು. ಆದರೆ, ರಾಜ್ಯದಲ್ಲಿ ಬಂದ್ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಕೆಲವೆಡೆ ಬಂದ್ ಪರಿಸ್ಥಿತಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ನಿಗಮ ಮಂಡಳಿ ನೇಮಕದಲ್ಲಿ ಕೆಲ ಶಾಸಕರ ಹೆಸರು ತಡೆಹಿಡಿದಿರುವ ಬಗ್ಗೆ ಸೋಮವಾರ ನೀರಾವರಿ ಸಂಬಂಧ ಪ್ರಮುಖ ಸಭೆಯಿದ್ದ ಕಾರಣದಿಂದ ಮುಖ್ಯಮಂತ್ರಿ ಬಳಿ ಚರ್ಚೆ ನಡೆಸಲು ಸಾಧ್ಯವಾಗಿರಲಿಲ್ಲ. ಇಂದು ಅಥವಾ ನಾಳೆ ಆ ಕುರಿತು ಮಾತುಕತೆ ನಡೆಸುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.
ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಲು ನಮ್ಮ ಸರಕಾರ ಸಂಪೂರ್ಣ ಬದ್ಧವಿದೆ. ಕನ್ನಡ ನಮ್ಮ ಮಾತೃ ಭಾಷೆ. ಅದನ್ನು ಎಂದಿಗೂ ಕಡೆಗಣಿಸಲು ಸಾಧ್ಯವಿಲ್ಲ. ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಇಂಗ್ಲಿಷ್ ಜ್ಞಾನ ಅಗತ್ಯ. ಅವರು ಬೇರೆ ರಾಜ್ಯ, ರಾಷ್ಟ್ರಗಳಿಗೆ ತೆರಳಿದಾಗ ಅವರಿಗೆ ಇಂಗ್ಲಿಷ್ ಅತ್ಯಂತ ಅವಶ್ಯಕವಾಗಿರುತ್ತದೆ.
-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ