ಮೂರನೇ ಏಕದಿನ: ಸಂಕಷ್ಟದಲ್ಲಿ ಆಸ್ಟ್ರೇಲಿಯ

Update: 2019-01-18 05:35 GMT

ಮೆಲ್ಬೋರ್ನ್, ಜ.18: ಭಾರತ ವಿರುದ್ಧ ಗೆಲ್ಲಲ್ಲೇಬೇಕಾಗಿರುವ ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡ 35 ಓವರ್ ಅಂತ್ಯಕ್ಕೆ 166 ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಎಂಸಿಜಿ ಮೈದಾನದಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ನಾಯಕನ ನಿರ್ಧಾರವನ್ನು ಸಮರ್ಥಿಸಿದ ಭಾರತದ ಬೌಲರ್‌ಗಳು ಆಸೀಸ್ ದಾಂಡಿಗರನ್ನು ನಿರಂತರವಾಗಿ ಕಾಡಿದರು. ವೇಗದ ಬೌಲರ್ ಭುವನೇಶ್ವರ ಕುಮಾರ್ ಆಸೀಸ್ ಆರಂಭಿಕ ಆಟಗಾರರಾದ ಆ್ಯರೊನ್ ಫಿಂಚ್ ಹಾಗೂ ಅಲೆಕ್ಸ್‌ರನ್ನು ಬೇಗನೇ ಪೆವಿಲಿಯನ್‌ಗೆ ಕಳುಹಿಸಿದರು. ಸ್ಪಿನ್ನರ್ ಯಜುವೇಂದ್ರ ಚಹಾಲ್ ಮಧ್ಯಮ ಕ್ರಮಾಂಕದಲ್ಲಿ ಆಸೀಸ್ ದಾಂಡಿಗರಿಗೆ ಸವಾಲಾಗಿ ಉಸ್ಮಾನ್ ಖ್ವಾಜಾ(34) ಸಹಿತ ಮೂವರು ದಾಂಡಿಗರಿಗೆ ಪೆವಿಲಿಯನ್ ದಾರಿ ತೋರಿಸಿದರು. 19 ಎಸೆತಗಳಲ್ಲಿ 5 ಬೌಂಡರಿ ಸಹಿತ 26 ರನ್ ಗಳಿಸಿ ಅಬ್ಬರಿಸುತ್ತಿದ್ದ ಮ್ಯಾಕ್ಸ್‌ವೆಲ್‌ಗೆ ವೇಗಿ ಮುಹಮ್ಮದ್ ಶಮಿ ಮೂಗುದಾರ ತೊಡಿಸಿದ್ದಾರೆ.

ಭಾರತದ ಪರ ಚಹಾಲ್ 31ಕ್ಕೆ 3 ವಿಕೆಟ್ ಪಡೆದರೆ, ಭುವನೇಶ್ವರ 15 ರನ್‌ಗೆ 2 ವಿಕೆಟ್ ಪಡೆದಿದ್ದಾರೆ. ಸರಣಿಯ ಕಳೆದ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಶಾನ್ ಮಾರ್ಷ್ 39 ರನ್‌ಗೆ ಔಟಾದರು. ಚೆನ್ನೈ ಆಲ್‌ರೌಂಡರ್ ವಿಜಯ್ ಶಂಕರ್ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಪಡೆದಿದ್ದಾರೆ. ಸ್ಪಿನ್ನರ್ ಚಹಾಲ್ ಕೂಡ ಆಡುವ 11ರ ಬಳಗ ಸೇರಿದ್ದಾರೆ. ಅಂಬಟಿ ರಾಯುಡು ಹಾಗೂ ಮುಹಮ್ಮದ್ ಸಿರಾಜ್ ಸ್ಥಾನ ತೆರವುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News