ಟಿಕೆಟ್‌ಗಳ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದರೆ ಕಪ್ಪುಪಟ್ಟಿಗೆ: ಕೆಎಸ್ಸಾರ್ಟಿಸಿ ಎಚ್ಚರಿಕೆ

Update: 2019-01-18 16:27 GMT

ಬೆಂಗಳೂರು, ಜ. 18: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಮುಂಗಡ ಬುಕಿಂಗ್ ಕೌಂಟರ್‌ಗಳಲ್ಲಿ ಟಿಕೆಟ್‌ಗಳ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುವವರ ವಿರುದ್ಧ ಸೂಕ್ತ ಕ್ರಮ ವಹಿಸಿ, ಅಂತಹ ಕೌಂಟರ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಎಚ್ಚರಿಕೆ ನೀಡಿದ್ದಾರೆ.

ಕೆಎಸ್ಸಾರ್ಟಿಸಿ ಮುಂಗಡ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳ ವ್ಯವಹಾರ ಪಾರದರ್ಶಕವಾಗಿರಬೇಕು, ಸಾರ್ವಜನಿಕ ಪ್ರಯಾಣಿಕರು ಕಾಯ್ದಿರಿಸುವ ಟಿಕೆಟ್ ಮೇಲೆ ಹೆಚ್ಚಿನ ದರ ಪಡೆಯಬಾರದು. ಮುಂದಿನ ದಿನಗಳಲ್ಲಿ ನಿಗಮದ ಎಲ್ಲ ವಿಭಾಗಗಳಲ್ಲಿಯೂ ದಿಢೀರ್ ತಪಾಸಣೆ ನಡೆಸಿ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ.

ರಾಜ್ಯ-ಅಂತಾರಾಜ್ಯಗಳ ಪ್ರಯಾಣಿಕರಿಗೆ ಮುಂಗಡ ಬುಕಿಂಗ್ ವ್ಯವಸ್ಥೆಗಾಗಿ ನಿಗಮದ 129 ಮತ್ತು ಖಾಸಗಿ ಫ್ರಾಂಚೈಸಿಗಳ ಮೂಲಕ 599 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆ ಪೈಕಿ ತಿರುಕೋಯಿಲೂರಿನಲ್ಲಿರುವ ಫ್ರಾಂಚೈಸಿಯೊಂದು ಮುಂಗಡ ಬುಕಿಂಗ್‌ನಲ್ಲಿ ನಿಗದಿತ ದರಕ್ಕಿಂತ 70ರೂ.ಹೆಚ್ಚಿನ ದರ ಪಡೆಯುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತಿರುಕೋಯಿಲೂರಿನ ಕೌಂಟರ್‌ಗೆ ನೋಟಿಸ್ ನೀಡಲಾಗಿದ್ದು, ಈ ಕೌಂಟರ್ ಮೂಲಕ ಟಿಕೆಟ್ ಬುಕಿಂಗ್‌ನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯುವ ಬಗ್ಗೆ ಯಾವುದೇ ಪ್ರಕರಣಗಳಿದ್ದರೆ ಸಂಸ್ಥೆಯನ್ನು ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News