ಕೇಂದ್ರದ ವಿರುದ್ಧ ಮುಷ್ಕರ ಆರಂಭಿಸಿದ ಸೇನಾ ಉದ್ಯೋಗಿಗಳು

Update: 2019-01-23 13:28 GMT

ಬೆಂಗಳೂರು, ಜ.22: ರಕ್ಷಣಾ ಉದ್ಯಮ ನಿಷ್ಕ್ರಿಯಗೊಳಿಸುತ್ತಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ, ರಕ್ಷಣಾ ಇಲಾಖೆಯ ನೂರಾರು ಉದ್ಯೋಗಿಗಳು ಬುಧವಾರದಿಂದ ಮುಷ್ಕರ ಆರಂಭಿಸಿದ್ದಾರೆ.

ಇಲ್ಲಿನ ಜೆಸಿ ನಗರದ ಟಿವಿ ಟವರ್ ಸಮೀಪದ ರಕ್ಷಣಾ ಇಲಾಖೆಯ ಕಚೇರಿ ಮುಂಭಾಗ ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯೀಸ್ ಫೆಡರೇಷನ್ ನೇತೃತ್ವದಲ್ಲಿ ಜಮಾಯಿಸಿದ ಉದ್ಯೋಗಿಗಳು, ಕೇಂದ್ರದ ಖಾಸಗೀಕರಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಷ್ಕರದ ನೇತೃತ್ವ ವಹಿಸಿ ಮಾತನಾಡಿದ ಫೇಡರೇಷನ್ ಉಪಾಧ್ಯಕ್ಷ ಎಂ.ಕೆ.ರವೀಂದ್ರನ್ ಪಿಳ್ಳೆ, ರಕ್ಷಣಾ ಉದ್ಯಮದ ಖಾಸಗೀಕರಣ ತಡೆಯಲು, ಜೊತೆಗೆ ನಿವೃತ್ತಿ ವೇತನದ ಹಕ್ಕನ್ನು ಮರಳಿ ಪಡೆಯುವ ಸಲುವಾಗಿ ಇಂದಿನಿಂದ ಮೂರು ದಿನಗಳ ಮುಷ್ಕರ ನಡೆಸಲಾಗುವುದು ಎಂದರು.

ಕೇಂದ್ರದ ಮೋದಿ ಸರಕಾರ ಖಾಸಗಿ ಕಾರ್ಪೊರೇಟ್ ಕುಳಗಳನ್ನು ಬಲಪಡಿಸುವ ಗುರಿ ಇಟ್ಟುಕೊಂಡಿದ್ದು, ಪ್ರಮುಖ ರಕ್ಷಣಾ ತಯಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಾದ ಸಂಶೋಧನೆ ಹಾಗೂ ಸೇವಾ ಕಾರ್ಯಗಳನ್ನು ಅಂಬಾನಿ ಮತ್ತು ಅದಾನಿಗಳ ಗುಂಪಿಗೆ ವಹಿಸಲು ತೀರ್ಮಾನಿಸಿದೆ ಎಂದು ಗಂಭೀರ ಆರೋಪ ಮಾಡಿದರು.

ಕೇಂದ್ರದ ನೀತಿಗಳಿಂದ ರಾಷ್ಟ್ರ ವ್ಯಾಪ್ತಿಯ ನಾಲ್ಕು ಲಕ್ಷ ರಕ್ಷಣಾ ನಾಗರಿಕ ಉದ್ಯೋಗಿಗಳು ರೋಸಿ ಹೋಗಿದ್ದಾರೆ ಎಂದ ಅವರು, ರಕ್ಷಣಾ ನೀತಿಗಳು ದೇಶದ ಅಭಿವೃದ್ಧಿಗಾಗಿಯೋ, ಅಥವಾ ಖಾಸಗಿ ಕಾರ್ಪೋರೇಟ್‌ಗಳ ಉದ್ಧಾರಕ್ಕಾಗಿ ಇವೆಯೋ ಎಂದು ಅವರು ಪ್ರಶ್ನೆ ಮಾಡಿದರು.

ಸರಕಾರಿ ಕಾರ್ಪೋರೇಟ್ ವ್ಯವಸ್ಥೆಯಡಿ ದೇಶದ ಸೈನಿಕರಿಗೆ ಸ್ವೇಚ್ಛಾ ಸ್ವಾತಂತ್ರವನ್ನು ನೀಡಬೇಕು. ಅವರಿಗೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಪಡೆಯಲು ನಿರಾಕರಿಸಿದೆ, ಅವರಿಗೆ ಅನುಮತಿ ನೀಡಬೇಕು. ಈ ಎಲ್ಲ ವಿಚಾರಗಳನ್ನು ಸರಕಾರ ಸಂಸತ್ತಿನೊಳಗೆ ಹಾಗೂ ಹೊರಗೆ ಚರ್ಚಿಸಬೇಕು ಎಂದು ಅವರು ಒತ್ತಾಯ ಮಾಡಿದರು.

ದೇಶದ ಶಾಂತಿ ಸ್ಥಾಪನೆಗಾಗಿ, ರಕ್ಷಣಾ ಉದ್ಯಮಗಳಲ್ಲಿ ಸ್ವಾವಲಂಬನೆ ಸಾಧಿಸಲು ರಕ್ಷಣಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸಂಸ್ಥೆಯಲ್ಲಿನ ಕೌಶಲ್ಯ ಭರಿತ ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಗೌರವವನ್ನು ಸಾಧಿಸಲು ಒದ್ದಡುತ್ತಿದ್ದಾರೆ. ಆದರೆ, ಸರಕಾರ ಅವರನ್ನು ಉತ್ತೇಜಿಸುವ ಬದಲಾಗಿ, ರಕ್ಷಣಾ ಘಟಕಗಳನ್ನು ನಿಷ್ಕ್ರೀಯಗೊಳಿಸಲಾಗುತ್ತಿದೆ ಎಂದು ದೂರಿದರು.

ಸರಕಾರವು ಸೈನಿಕರ ಅಧೀನದಲ್ಲಿರುವ ಉದ್ಯಮಗಳಿಗೆ ಮತ್ತು ಘಟಕಗಳಿಗೆ ಗುಣಮಟ್ಟ ಹಾಲನ್ನು ಸರಬರಾಜು ಮಾಡುತ್ತಿದ್ದ, ಸೇನಾ ಕೃಷಿ ವಲಯಗಳನ್ನು, ತನ್ನ ಕಾರ್ಯನೀತಿ ಅನ್ವಯ ಮುಚ್ಚಲು ನಿರ್ಧರಿಸಿದೆ. ಅಲ್ಲದೆ, ಡಿಆರ್‌ಡಿಓದಲ್ಲಿ ಮಾನವ ಸಂಪನ್ಮೂಲವನ್ನು ಗಣನೀಯವಾಗಿ ತಗ್ಗಿಸಲಾಗಿದೆ ಎಂದು ಎಂ.ಕೆ.ರವೀಂದ್ರ ಪಿಳ್ಳೆ ಹೇಳಿದರು.

ಮುಷ್ಕರದಲ್ಲಿ ಎಡಿಇ ಅಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷ ಭಾಸ್ಕರ್ ರಾವ್, ಕಾರ್ಯದರ್ಶಿ ಪ್ರಸನ್ನ, ಆರ್.ಎನ್.ನಾಗರಾಜ್ ಸೇರಿದಂತೆ ಪ್ರಮುಖರಿದ್ದರು.

‘ವೇತನ ನೀಡಿ’

ಸರಕಾರಿ ನೌಕರರ ನಿವೃತ್ತಿ ವೇತನದ ಹಕ್ಕನ್ನು ನ್ಯಾಯಾಲಯವು ಜಾರಿಗೊಳಿಸಿದರೂ, ಕೇಂದ್ರ ಸರಕಾರ ಇದನ್ನು ಕಸಿದುಕೊಂಡಿದೆ. ಇದರಿಂದ ಲಕ್ಷಾಂತರ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ.

-ಎಂ.ಕೆ.ರವೀಂದ್ರನ್ ಪಿಳ್ಳೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News