ಹಜ್ ಯಾತ್ರಿಕರನ್ನು ಆಯ್ಕೆ ಮಾಡುವಲ್ಲಿ ಅವ್ಯವಹಾರ: ವಂಚಿತ ಫಲಾನುಭವಿ ಮಹಿಳೆಯ ಆರೋಪ

Update: 2019-01-23 15:48 GMT

ಬೆಂಗಳೂರು, ಜ.23: ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರಿಕರನ್ನು ಆಯ್ಕೆ ಮಾಡುವಲ್ಲಿ ರಾಜ್ಯ ಹಜ್ ಸಮಿತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಹಜ್ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹಜ್ ಯಾತ್ರೆ ವಂಚಿತ ಫಲಾನುಭವಿ ನುಸರತ್ ರಝಾ ಆರೋಪ ಮಾಡಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಜ್ ಸಮಿತಿಯು ಪ್ರಸಕ್ತ ವರ್ಷ ರಾಜ್ಯಕ್ಕೆ 6,701 ಮಂದಿಯ ಕೋಟಾ ನಿಗದಿಪಡಿಸಿದ್ದು, ರಾಜ್ಯದ 14 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ, ಕೇಂದ್ರದ ಕೋಟಾಗೆ ಅನುಗುಣವಾಗಿ ಖುರ್ರಾ (ಲಾಟರಿ ಎತ್ತುವ ಪ್ರಕ್ರಿಯೆ) ಮೂಲಕ ಹಜ್ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಿ, ನಂತರ ಈ ಬಾರಿ ನೀವು ಹಜ್ ಯಾತ್ರೆಗೆ ಆಯ್ಕೆಯಾಗಿಲ್ಲ ಎಂದು ಹಜ್ ಸಮಿತಿ ತಿಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಖುರ್ರಾ ಪ್ರಕ್ರಿಯೆಯನ್ನು ಜ.16ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್, ರಾಜ್ಯ ಹಜ್ ಸಮಿತಿ ಅಧ್ಯಕ್ಷ ಆರ್.ರೋಷನ್ ಬೇಗ್, ಕಾರ್ಯ ನಿರ್ವಾಹಕ ಅಧಿಕಾರಿ ಸರ್ಫರಾಜ್ ಖಾನ್, ಸಮುದಾಯದ ಸಚಿವರು, ಧಾರ್ಮಿಕ ಮುಖಂಡರು ಹಾಗೂ ರಾಜ್ಯ ಹಜ್ ಸಮಿತಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಅವರು ತಿಳಿಸಿದರು.

ನಿಗದಿಯಂತೆ ಮೊದಲಿಗೆ ಬಾಗಲಕೋಟೆ ಜಿಲ್ಲೆಯ ಖುರ್ರಾ ನಡೆಸಲಾಯಿತು. ನಂತರ ಬೆಂಗಳೂರು ನಗರ ಜಿಲ್ಲೆಯ ಖುರ್ರಾ ನಡೆಯಿತು. ಇದೇ ರೀತಿ ಎಲ್ಲ 30 ಜಿಲ್ಲೆಗಳ ಖುರ್ರಾ ಪ್ರಕ್ರಿಯೆ ಜರುಗಿತು. ಅದರಲ್ಲಿ ಬೆಂಗಳೂರು ನಗರ ಜಿಲ್ಲೆಯ 395 ಕವರ್‌ಗಳಿಗೆ ಖುರ್ರಾ ನಡೆಸಲಾಯಿತು. ಒಂದು ಕವರ್‌ನಲ್ಲಿ ಗರಿಷ್ಠ 3 ಮಂದಿಯ ಹೆಸರು ಇರುತ್ತದೆ. ಅದರಂತೆ 395 ಕವರ್‌ಗಳಲ್ಲಿ 994 ಮಂದಿಯನ್ನು ಆಯ್ಕೆ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಆದರೆ, ಮರುದಿನ ಯಾತ್ರೆಗೆ ಆಯ್ಕೆಯಾಗಿಲ್ಲ ಎಂಬ ಸಂದೇಶ ಹಜ್ ಸಮಿತಿಯಿಂದ ಬಂದಿದೆ ಎಂದರು.

ಪ್ರಮಾದ ಏನು?: ಜ.16ಕ್ಕೆ ಖುರ್ರಾ ಪ್ರಕ್ರಿಯೆ ನಿಗದಿಯಾಗಿತ್ತು. ಅಂತಿಮ ಸುತ್ತಿನಲ್ಲಿ ಯಾವುದೇ ಲೋಪ, ಅಚಾತುರ್ಯ ನಡೆಯಬಾರದು ಎಂಬ ಕಾರಣಕ್ಕೆ ಒಂದು ದಿನ ಮುಂಚೆ ಅಂದರೆ ಜ.15 ರಂದು ಅಧಿಕಾರಿಗಳು ರಿಹರ್ಸಲ್ ನಡೆಸಿದ್ದಾರೆ. ಆಶ್ಚರ್ಯವೆಂದರೆ ಜ.16 ರಂದು ನಡೆದ ಖುರ್ರಾ ಪ್ರಕ್ರಿಯೆಯ ವೇಳೆ ಬೆಂಗಳೂರು ನಗರ ಜಿಲ್ಲೆಯ 395 ಕವರ್‌ಗಳ ಖುರ್ರಾವನ್ನು ಜ.16ರ ಬದಲಿಗೆ ಜ.15ರ ರಿಹರ್ಸಲ್ ಲಿಸ್ಟ್‌ನಂತೆ ನಡೆಸಲಾಗಿದೆ. ಎಲ್ಲ 30 ಜಿಲ್ಲೆಗಳ ಖುರ್ರಾ ಪ್ರಕ್ರಿಯೆ ಮುಗಿದ ಬಳಿಕ ಈ ತಪ್ಪು ಅಧಿಕಾರಿಗಳಿಗೆ ಗೊತ್ತಾಗಿದೆ.

ರಿಹರ್ಸಲ್‌ನಿಂದ ಆಗಿರುವ ತಪ್ಪು ಸರಿಪಡಿಸಿಕೊಳ್ಳಲು ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲೆಯ ಖುರ್ರಾ ಪ್ರಕ್ರಿಯೆಯನ್ನು ಜ.16ರ ಲಿಸ್ಟ್‌ನಂತೆ ಮತ್ತೊಮ್ಮೆ ನಡೆಸಲಾಗಿದೆ. ಹೀಗಾಗಿ, ಅಧಿಕಾರಿಗಳು ಮಾಡಿದ ತಪ್ಪಿಗೆ ಜ.15ರ ಲಿಸ್ಟ್ ಪ್ರಕಾರ ಆಯ್ಕೆಗೊಂಡ ನಾವುಗಳು ಹಜ್ ಯಾತ್ರೆಯ ಪುಣ್ಯ ಅವಕಾಶ ಕಳೆದುಕೊಳ್ಳು ವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ, ತಕ್ಷಣ ಸಚಿವರು ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ಕೊಡಿಸಬೇಕು. ಸಂಘರ್ಷ ನಮ್ಮ ಉದ್ದೇಶವಲ್ಲ. ಆದರೆ, ಯಾವುದೇ ಕಾರಣಕ್ಕೂ ಹಜ್ ಯಾತ್ರೆಯಿಂದ ನಮ್ಮನ್ನು ವಂಚಿತರನ್ನಾಗಿ ಮಾಡಬೇಡಿ. ಒಂದು ವೇಳೆ ವಂಚಿಸಿದರೆ, ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ನುಸರತ್ ರಝಾ ಎಚ್ಚರಿಕೆ ನೀಡಿದರು.

ಎಲ್ಲ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯ ಖುರ್ರಾ ಪ್ರಕ್ರಿಯೆ ಮಾತ್ರ ಈ ರೀತಿ ಆಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

-ನುಸರತ್ ರಝಾ, ಹಜ್ ವಂಚಿತ ಫಲಾನುಭವಿ

ತಪ್ಪಿತಸ್ಥರ ವಿರುದ್ಧ ಕ್ರಮ: ಝಮೀರ್ ಅಹ್ಮದ್

ಪ್ರಸಕ್ತ ಸಾಲಿನ ಹಜ್ ಯಾತ್ರಿಕರ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಬದಲಾಗಿ, ತಾಂತ್ರಿಕ ದೋಷದಿಂದಾಗಿ ಗೊಂದಲ ಸೃಷ್ಟಿಯಾಗಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ವಕ್ಫ್ ಮತ್ತು ಹಜ್ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಬುಧವಾರ ನಗರದ ಶಕ್ತಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.16ಕ್ಕೆ ಖುರ್ರಾ ಪ್ರಕ್ರಿಯೆ ನಿಗದಿಯಾಗಿತ್ತು. ಅಂತಿಮ ಸುತ್ತಿನಲ್ಲಿ ಯಾವುದೇ ಲೋಪ, ಅಚಾತುರ್ಯ ನಡೆಯಬಾರದು ಎಂಬ ಕಾರಣಕ್ಕೆ ಒಂದು ದಿನ ಮುಂಚೆ ಅಂದರೆ ಜ.15 ರಂದು ಅಧಿಕಾರಿಗಳು ಪ್ರಾಯೋಗಿಕವಾಗಿ ಲಾಟರಿ ಎತ್ತುವ ಪ್ರಕ್ರಿಯೆ ನಡೆಸಿದ್ದಾರೆ. ಇದರಿಂದ ಕೆಲವರು ಗೊಂದಲ ಅನುಭವಿಸಿದ್ದು, ಇದಕ್ಕಾಗಿ ಕ್ಷಮೆ ಕೋರುವುದಾಗಿ ತಿಳಿಸಿದರು. ಕೇಂದ್ರ ಹಜ್ ಸಮಿತಿಯು ಪ್ರಸಕ್ತ ವರ್ಷ ರಾಜ್ಯಕ್ಕೆ 6,701 ಮಂದಿಯ ಕೋಟಾ ನಿಗದಿಪಡಿಸಿದ್ದು, ರಾಜ್ಯದ 10 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೂ, ಬಡ-ಸಾಮಾನ್ಯ, ಮಹಿಳೆಯರನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಆಯ್ಕೆ ಪ್ರಕ್ರಿಯೆ ನಿರ್ವಹಣೆಯ ಜವಾಬ್ದಾರಿಯೂ ಕೇಂದ್ರದ ಮೇಲಿರುತ್ತದೆ ಎಂದು ಹೇಳಿದರು.

ಹಜ್ ಯಾತ್ರೆ ಕೈಗೊಳ್ಳಬೇಕು ಎನ್ನುವುದು ಎಲ್ಲರ ಆಸೆಯಾಗಿದೆ. ಹೀಗಾಗಿ, ಇಲಾಖೆಯಿಂದ ಆಗಿರುವ ಅಚಾತುರ್ಯದಿಂದ ಕೆಲವರಿಗೆ ತೊಂದರೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಝಮೀರ್ ಅಹ್ಮದ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News