ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನಕ್ಕೆ ಸಾವಿರಾರು ಜನರ ಭೇಟಿ

Update: 2019-01-26 16:56 GMT

ಬೆಂಗಳೂರು, ಜ.26: ಗಣರಾಜ್ಯೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಶನಿವಾರ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದರು.

ಜನದಟ್ಟಣೆಯಿಂದಾಗಿ ಗಾಜಿನ ಮನೆಯ ಒಳಹೋಗಲು ವೀಕ್ಷಕರ ಸರತಿ ಸಾಲು ಅರ್ಧದಿಂದ ಒಂದು ಕಿ.ಮೀ. ವ್ಯಾಪ್ತಿಯವರೆಗೆ ನಿಂತಿತ್ತು. ಗಾಜಿನ ಮನೆಗೆ ಹೋಗಲು ಹೊರಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ನೋಡುಗರನ್ನು ಸಾಲಿನಲ್ಲಿ ಕಳುಹಿಸಲಾಗುತ್ತಿತ್ತು.

ಈ ಬಾರಿಯ ಲಪುಷ್ಪ ಪ್ರದರ್ಶನವನ್ನು ಗಾಂಧೀಜಿಯವರಿಗೆ ಅರ್ಪಿಸಲಾಗಿದ್ದು, ಗಾಜಿನ ಮನೆಯಲ್ಲಿ ಗಾಂಧಿಯನ್ನು ನೋಡಲು ಜನರ ನೂಕುನಗ್ಗಲಿತ್ತು. ಯುವಕ-ಯುವತಿಯರು ತಂಡೋಪತಂಡವಾಗಿ ಆಗಮಿಸುತ್ತಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರಿಂದ ಲಾಲ್‌ಬಾಗ್ ಸುತ್ತಮುತ್ತಲಿನ ರಸ್ತೆಗಳು ಸಂಚಾರ ದಟ್ಟಣೆಯಿಂದ ಕೂಡಿದ್ದವು. ಉದ್ಯಾನದೊಳಗೆ ಅಲ್ಲಲ್ಲಿ ತ್ಯಾಜ್ಯದ ಗುಡ್ಡೆಗಳು ಕಾಣುತ್ತಿದ್ದವು. ನರ್ಸರಿಗಳಲ್ಲಂತೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಲ್ಲಿ ತೊಡಗಿದ್ದರು.

ರಾಜ್ಯೋತ್ಸವದ ಅಂಗವಾಗಿ ಶನಿವಾರ ರಜಾ ದಿನವಾದ್ದರಿಂದ ಬೆಳಗ್ಗೆ 9 ರಿಂದಲೇ ಜನ ಗುಂಪು ಗುಂಪಾಗಿ ಆಗಮಿಸುತ್ತಿದ್ದರು. ಮಧ್ಯಾಹ್ನದ ಬಿಸಿಲಿನಲ್ಲಿಯೂ ಜನ ಬರುತ್ತಿದ್ದರು. ಸಣ್ಣ ಮಕ್ಕಳಿಂದ ಹಿರಿಯರವರೆಗೂ ಸಾಲು ಸಾಲಾಗಿ ಆಗಮಿಸಿ ಗಾಂಧಿಯನ್ನು ಕಣ್ಣುತುಂಬಿಕೊಂಡರು. ಹೀಗಾಗಿ, ಲಾಲ್‌ಬಾಗ್‌ನಲ್ಲಿ ಎಲ್ಲಿ ನೋಡಿದರೂ ಜನಜಂಗುಳಿಯಿತ್ತು.

ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜಾತ್ರೆಯ ವಾತಾವರಣವಿತ್ತು. ಟಿಕೆಟ್ ಕೌಂಟರ್‌ಗಳು ತುಂಬಿ ತುಳುಕುತ್ತಿದ್ದವು. ಇನ್ನು ಹೊರ ಭಾಗದಲ್ಲಿ ಪಾನೀಯ, ತಿಂಡಿಗಳು ಹಾಗೂ ಆಟಿಕೆಗಳದ್ದೇ ಕಾರುಬಾರಾಗಿತ್ತು. ಲಾಲ್‌ಬಾಗ್ ಮುಖ್ಯ ಗೇಟಿನ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಏುಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದರೂ ಈ ಬೀದಿ ವ್ಯಾಪಾರಿಗಳ ಹಾವಳಿ ಹೆಚ್ಚಾಗಿದ್ದುದರಿಂದ ಅಲ್ಲಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಉಸಿರುಗಟ್ಟಿಸಿದ ಗಾಜಿನ ಮನೆ: ರಜೆ ದಿನವಾಗಿದ್ದರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಗಾಜಿನ ಮನೆಯಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣಗೊಂಡಿತ್ತು. ಇನ್ನು ಅಲ್ಲಿನ ಸಿಬ್ಬಂದಿ ಜನರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಡುತ್ತಿದ್ದರು. ಹೂವುಗಳನ್ನು ನೋಡುವುದಕ್ಕಿಂತ ೆಟೊ ಕ್ಲಿಕ್ಕಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು.

ಇಲ್ಲಿನ ಬಂಡೆ ಮೇಲೆ, ಕೆರೆ ಏರಿ ಮೇಲೆ, ಬೋನ್ಸಾಯ್ ಗಾರ್ಡನ್, ತರಕಾರಿ ಗಾರ್ಡನ್, ಮಾರಾಟ ಮಳಿಗೆಗಳ ಬಳಿ ಹೆಚ್ಚು ಜನ ನೆರೆದಿದ್ದರು. ನಗರದಲ್ಲಿರುವ ಶಾಲಾ-ಕಾಲೇಜುಗಳಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿಸಿದ ವಿದ್ಯಾರ್ಥಿಗಳು ನೇರವಾಗಿ ಲಾಲ್‌ಬಾಗ್‌ಗೆ ಬಂದಿದ್ದರು. ಇದಲ್ಲದೆ, ಸ್ನೇಹಿತರ ತಂಡ, ಕುಟುಂಬಗಳ ತಂಡ, ಯುವ ಜೋಡಿಗಳ ತಂಡ ಹೀಗೆ ಹಲವರು ಆಗಮಿಸಿದ್ದರು.

ಇಂದು ತೆರೆ

ಗಣರಾಜ್ಯೋತ್ಸವದ ಅಂಗವಾಗಿ ಜ.18 ರಿಂದ ಆರಂಭವಾಗಿದ್ದ ಫಲಪುಷ್ಪ ಪ್ರದರ್ಶನಕ್ಕೆ ರವಿವಾರ(ಜ.27) ತೆರೆ ಬೀಔಲಿದೆ. ಈ ಹಿನ್ನೆಲೆಯಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನದ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News