ತಮಿಳುನಾಡಿನಲ್ಲಿ ಬಿಜೆಪಿ ಪ್ರಯತ್ನ ಯಶಸ್ವಿಯಾದೀತೇ?

Update: 2019-01-28 18:54 GMT

ತಮಿಳುನಾಡಿನ ಅಧಿಕಾರರೂಢಪಕ್ಷ ಎಐಎಡಿಎಂಕೆ ನಿಧಾನವಾಗಿ ಭಾಜಪನೇತೃತ್ವದ ಎನ್‌ಡಿಎ ಮೈತ್ರಿಕೂಟದತ್ತ ಸರಿಯುತ್ತಿರುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರವಾಗುತ್ತಿವೆ. ಭಾಜಪ ಸಹ ಇದಕ್ಕೆ ಪೂರಕವಾಗಿಯೇ ತನ್ನ ರಾಜಕಾರಣದ ದಾಳಗಳನ್ನು ಉರುಳಿಸುತ್ತಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವುದು ಕಷ್ಟವೆಂಬುದು ಭಾಜಪಕ್ಕೆ ಮನವರಿಕೆಯಾಗಿದೆ. ಕೆಲತಿಂಗಳ ಹಿಂದೆ ನಡೆದ ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್‌ಗಡ ಮೂರು ರಾಜ್ಯಗಳ ವ್ಯತಿರಿಕ್ತ ಪಲಿತಾಂಶ, ದಿನದಿಂದ ದಿನಕ್ಕೆ ಗಟ್ಟಿಯಾಗುವತ್ತ ನಡೆದಿರುವ ವಿರೋಧಪಕ್ಷಗಳ ಮಹಾಮೈತ್ರಿಯ ಮಾತುಗಳು, ಉತ್ತರಪ್ರದೇಶದಲ್ಲಿ ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳ ನಡುವೆ ನಡೆದ ಸ್ಥಾನ ಹೊಂದಾಣಿಕೆಯ ಅಂತಿಮ ಪ್ರಕ್ರಿಯೆ, ಕೋಲ್ಕೊತಾದಲ್ಲಿ ತೃಣಮೂಲ ಕಾಂಗ್ರೆಸ್‌ನ ನಾಯಕಿ ಕುಮಾರಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ವಿರೋಧಪಕ್ಷಗಳ ಬೃಹತ್ ರ್ಯಾಲಿ, ಉತ್ತರ ಪ್ರದೇಶದ ರಾಜಕಾರಣಕ್ಕೆ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಪ್ರವೇಶಿಸಿರುವುದು ಭಾಜಪ ನಾಯಕರ ನಿದ್ದೆಗೆಡಿಸಿರುವುದು ನಿಜ. ಇದರ ಜೊತೆಗೆ ಅದರ ಕೆಲವು ಮಿತ್ರಪಕ್ಷಗಳು ದೂರವಾಗಿವೆ. ಆಂಧ್ರಪ್ರದೇಶದ ತೆಲುಗುದೇಶಂ ಹಾಗು ಜಮ್ಮು ಕಾಶ್ಮೀರದ ಪಿಡಿಪಿ ಪಕ್ಷಗಳು ಈಗಾಗಲೇ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿವೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಭಾಜಪದ ವಿರುದ್ಧ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದೆ. ಈ ನಡುವೆ ಬಿಹಾರದ ಮುಖ್ಯಮಂತ್ರಿ ಸಂಯುಕ್ತ ಜನತಾದಳದ ನಿತೀಶ್ ಕುಮಾರ್ ತ್ರಿವಳಿ ತಲಾಖ್ ಮತ್ತು ಪೌರತ್ವ ಮಸೂದೆಗಳ ಬಗೆಗಿನ ಕೇಂದ್ರ ಸರಕಾರದ ನೀತಿಗಳನ್ನು ನೇರವಾಗಿಯೇ ಟೀಕಿಸುತ್ತಿದ್ದಾರೆ. ಈಗಾಗಲೇ ಭಾಜಪದೊಂದಿಗೆ ಮಾಡಿಕೊಂಡಿರುವ ಸ್ಥಾನ ಹೊಂದಾಣಿಕೆಯ ಕರಾರನ್ನು ಕೊನೆಗಳಿಗೆಯಲ್ಲಿ ಅವರು ಮುರಿದರೂ ಅಚ್ಚರಿಯೇನೂ ಇಲ್ಲ.

ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಭಾಜಪ ಈಗ ಹೊಸ ಮಿತ್ರಪಕ್ಷಗಳ ಹುಡುಕಾಟದಲ್ಲಿದೆ. ಈ ದಿಸೆಯಲ್ಲಿ ಭಾಜಪದ ದೃಷ್ಟಿ ದಕ್ಷಿಣ ಭಾರತದ ರಾಜಕಾರಣದತ್ತ ಹೊರಳಿದೆ. ತನ್ನ ಆಂತರಿಕ ಕಚ್ಚಾಟಗಳಿಂದ ಮತ್ತು ಬಲಿಷ್ಠ ನಾಯಕತ್ವ ಇರದೆ ಕವಲುದಾರಿಯಲ್ಲಿರುವ ಎಐಎಡಿಎಂಕೆಯನ್ನು ತನ್ನ ಮೈತ್ರಿಕೂಟಕ್ಕೆ ಸೆಳೆಯಲು ಭಾಜಪ ಪ್ರಯತ್ನಿಸುತ್ತಿದೆ. ತಮಿಳುನಾಡಿನ ಇನ್ನೊಂದು ಪ್ರಮುಖ ರಾಜಕೀಯ ಪಕ್ಷ ಎಂ.ಕೆ.ಸ್ಟಾಲಿನ್ ಅವರ ಡಿಎಂಕೆ ಈಗಾಗಲೇ ಕಾಂಗ್ರೆಸ್ ಜೊತೆ ಇರುವುದರಿಂದ ಮತ್ತು ಸ್ವತಂತ್ರವಾಗಿ ಸ್ಪರ್ಧಿಸುವ ಧೈರ್ಯವಿರದ ಎಐಎಡಿಎಂಕೆ ಕೊನೆ ಗಳಿಗೆಯಲ್ಲಿ ಭಾಜಪದ ಜೊತೆ ಮೈತ್ರಿ ಮಾಡಿಕೊಂಡರೂ ಅಚ್ಚರಿಯೇನಿಲ್ಲ. ಎಐಎಡಿಎಂಕೆ ಪಕ್ಷದ ರಾಷ್ಟ್ರೀಯ ನಾಯಕ ತಂಬಿದುರೈ ಮಾತ್ರ ಭಾಜಪ ಈ ವಿಷಯದಲ್ಲಿ ತಮ್ಮ ಪಕ್ಷದ ಮೇಲೆ ಒತ್ತಡಗಳನ್ನು ಹೇರುತ್ತಿದೆಯೆಂದು ಬಹಿರಂಗವಾಗಿಯೇ ಟೀಕಿಸುತ್ತಿದ್ದರೂ, ಮೊದಲಿಂದಲೂ ಅವರು ಭಾಜಪದ ನಾಯಕರ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದು ಅವರ ಮಾತುಗಳನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ.

ಇಷ್ಟಲ್ಲದೆ ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆಯಾಗಿ ತಮ್ಮದೇ ಆದ ಎಎಂಎಂಕೆ ಎಂಬ ಪಕ್ಷವನ್ನು ಸ್ಥಾಪಿಸಿಕೊಂಡಿರುವ ಟಿ.ಟಿ.ವಿ. ದಿನಕರನ್ ಅವರ ಬಲಗೈಬಂಟ, ಶಾಸಕ ತಂಗತಮಿಳ್ ಸೆಲ್ವನ್ ಅವರು ಮಾಧ್ಯಮದೊಂದಿಗೆ ಮಾತಾಡುತ್ತ ‘‘ಎಐಎಡಿಎಂಕೆ ದುರ್ಬಲವಾಗಿದ್ದು ಭಾಜಪ ತಮ್ಮ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ’’ ಎಂದು ಹೇಳಿದ್ದಾರೆ. ಇದಕ್ಕೆ ಇಂಬು ಕೊಡುವಂತೆ ಕೇಂದ್ರದ ಸಚಿವರಾದ ರಾಮದಾಸ್ ಅಠಾವಲೆಯವರು ದಿನಕರ್ ತಮ್ಮ ಹಳೆಯ ಸ್ನೇಹಿತರಾಗಿದ್ದು, ಭಾಜಪದೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಅವರಿಗೆ ಅಭ್ಯಂತರವಿರಲಾರದೆಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದಿನಕರ್ ಅವರ ಬಣ ಎಐಎಡಿಎಂಕೆ ಜೊತೆ ವಿಲೀನವಾಗುವ ಯಾವ ಸಾಧ್ಯತೆಯೂ ಇಲ್ಲವಾಗಿದ್ದು ಭಾಜಪ ಇವೆರಡರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರ ಜೊತೆಗೆ ಎಸ್. ರಾಮದಾಸ್ ಅವರ ಪಿಎಂಕೆ ಮತ್ತು ರಜನಿಕಾಂತ್ ಜೊತೆಗೂ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಮೊದಲಿನಿಂದಲೂ ನರೇಂದ್ರಮೋದಿಯವರ ಜೊತೆಗೆ ಉತ್ತಮ ಭಾಂದವ್ಯ ಹೊಂದಿರುವ ರಜನಿಕಾಂತ್ ಇದಕ್ಕೆ ಒಪ್ಪಬಹುದಾಗಿದೆ. ಹೀಗೆ ತಮಿಳುನಾಡಿನಲ್ಲಿನ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟಕ್ಕೆ ವಿರುದ್ಧವಾಗಿ ಭಾಜಪ, ಎಐಎಡಿಎಂಕೆ, ಎಎಂಎಂಕೆ, ಪಿಎಂಕೆ, ರಜನಿಕಾಂತ್ ಒಳಗೊಂಡ ಮೈತ್ರಿಕೂಟವೊಂದನ್ನು ರಚಿಸಿಕೊಳ್ಳಲು ಯತ್ನಿಸುತ್ತಿದೆ. ತನ್ಮೂಲಕ ಉತ್ತರ ಭಾರತದಲ್ಲಿ ತಮ್ಮ ಬಹುಮತಕ್ಕೆ ಕಡಿಮೆಯಾಗಿರುವ ಸ್ಥಾನಗಳಲ್ಲಿ ಕೆಲವನ್ನು ತಮಿಳುನಾಡಿನಿಂದ ಪಡೆಯಲು ಭಾಜಪ ಪ್ರಯತ್ನಿಸುತ್ತಿದೆ. ಈ ಪ್ರಯತ್ನದಲ್ಲಿ ಅದು ಯಶಸ್ವಿಯಾದೀತೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ಕು.ಸ.ಮಧುಸೂದನ, ರಂಗೇನಹಳ್ಳಿ

contributor

Editor - ಕು.ಸ.ಮಧುಸೂದನ, ರಂಗೇನಹಳ್ಳಿ

contributor

Similar News