ಕುಗ್ರಾಮದಿಂದ ಆಕ್ಸ್ ಫರ್ಡ್ ತಲುಪಿದ ಇಲ್ಮ ಆಫ್ರೋಜ್ಹ್ ಈಗ ಐಪಿಎಸ್ ಅಧಿಕಾರಿ

Update: 2019-01-31 15:12 GMT

ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ, ಯಶಸ್ಸಿಗೆ ಶಾರ್ಟ್ ಕಟ್ ಇಲ್ಲ ಎಂಬುದು ಅತ್ಯಂತ ಹೆಚ್ಚು ಕೇಳಲು ಸಿಗುವ ಆದರೆ ಇಂದಿನ ಯುವಜನತೆ ಅತ್ಯಂತ ಕಡಿಮೆ ಅನುಸರಿಸುವ ಬುದ್ಧಿಮಾತು. ಆದರೆ ಈ ಮಾತನ್ನು ಪ್ರಾಮಾಣಿಕವಾಗಿ ಜೀವನದಲ್ಲಿ ಅಳವಡಿಸಿಕೊಂಡವರು ಮಾತ್ರ ತಮ್ಮ ಜೀವನದಲ್ಲಿ ಅದ್ಭುತ ಯಶಸ್ಸು ಸಾಧಿಸಿದ ಅದೆಷ್ಟೋ ಉದಾಹರಣೆಗಳಿವೆ. ಅಂತಹ ಒಂದು ಅತ್ಯುತ್ತಮ ಉದಾಹರಣೆ ಐಪಿಎಸ್ ಅಧಿಕಾರಿ ಇಲ್ಮ ಆಫ್ರೋಜ್ . 

ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಕುಂದರ್ಕಿ ಎಂಬ ಕುಗ್ರಾಮದ ಇಲ್ಮ ಅವರ ಯಶೋಗಾಥೆ ಕೇಳಿದರೆ ಪ್ರತಿಯೊಬ್ಬರಿಗೂ ಏನನ್ನಾದರೂ ಸಾಧಿಸುವ ಛಲ ಬೆಳೆಯುತ್ತದೆ. 14 ವರ್ಷದ ಎಳೆ ಪ್ರಾಯದಲ್ಲೇ ತಂದೆಯನ್ನು ಕಳಕೊಂಡ ಇಲ್ಮ ಆಫ್ರೋಜ್ ಗೆ ಆಕೆಯ ತಾಯಿ ಜೀವನದ ಪ್ರತಿ ಹಂತದಲ್ಲೂ ನೀಡಿದ ಬೆಂಬಲ ಹಾಗು ಅದನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನುಗ್ಗಿದ ಇಲ್ಮ ಇಂದು  ಸಾಧನೆಯ ಒಂದು ಮಾದರಿಯನ್ನು ನಮ್ಮ ಮುಂದಿಟ್ಟಿದ್ದಾರೆ. 

2017 ರ ಸಾಲಿನ ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯಲ್ಲಿ 217ನೇ ಸ್ಥಾನ ಪಡೆದ ಇಲ್ಮ ಇಂಡಿಯನ್ ಪೊಲೀಸ್ ಸರ್ವಿಸ್ ( ಐಪಿಎಸ್ ) ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಂದರ್ಕಿ ಯ ಆ ಕುಗ್ರಾಮದ ರೈತನೊಬ್ಬನ ಪುತ್ರಿಯಾಗಿ ವಿಶ್ವವಿಖ್ಯಾತ ಆಕ್ಸ್ ಫರ್ಡ್ ಮಾರ್ಗವಾಗಿ ಭಾರತದ ಪ್ರತಿಷ್ಠಿತ ನಾಗರೀಕ ಸೇವಾ ಅಧಿಕಾರಿಯಾಗುವವರೆಗೆ ಇಲ್ಮ ಸಾಗಿ ಬಂದ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಗೆ ಪ್ರೇರಣೆಯಾಗಿದೆ. ತಂದೆ ಅಗಲಿದ ಮೇಲೆ ಇಲ್ಮ ಗೆ ಅತ್ಯುತ್ತಮ ಶಿಕ್ಷಣ ಕೊಡಿಸಲು ಆಕೆಯ  ತಾಯಿ ಮಾಡಿದ ತ್ಯಾಗ ಹಾಗು ಸ್ವತಃ ಇಲ್ಮ ಪಟ್ಟ ಪರಿಶ್ರಮ ಹಾಗು ಕೊನೆಗೆ ಮಾಡಿದ ನಿರ್ಧಾರ ದೇಶದ ಯುವಜನತೆಗೆ ಮಾದರಿಯಾಗಿದೆ. 

ಸ್ನೇಹಿತರು ಮೆಡಿಕಲ್, ಇಂಜಿನಿಯರಿಂಗ್ ಕಲಿಯಲು ಹೋಗುವಾಗ ಮೂರು ಹೊತ್ತಿನ ಊಟವೇ ಕಷ್ಟವಾಗಿರುವ ತನಗೆ ಅವುಗಳ ಹಿಂದೆ ಹೋಗುವುದು ಅಸಾಧ್ಯ ಎಂದು ಇಲ್ಮ ಗೆ ಸ್ಪಷ್ಟವಾಗಿತ್ತು. ಆದರೆ ಅದಕ್ಕಾಗಿ ಆಕೆ ಕೊರಗುತ್ತಾ ಕುಳಿತುಕೊಳ್ಳಲಿಲ್ಲ. ಸ್ಥಳೀಯ ಶಾಲೆಗಳಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ಬಳಿಕ ದಿಲ್ಲಿಯ ಪ್ರತಿಷ್ಠಿತ ಸಂತ ಸ್ಟೀಫನ್ಸ್ ಕಾಲೇಜಿನಲ್ಲಿ ಇಲ್ಮ ಬಿ ಎ ಪದವಿಗೆ ಸೇರಿದರು. ಅಲ್ಲಿ ಮೂರು ವರ್ಷ ತತ್ವಶಾಸ್ತ್ರ ಕಲಿತದ್ದು ನನ್ನ ಬದುಕಿನ ಅತ್ಯುತ್ತಮ ಅವಧಿ ಹಾಗು ಅತ್ಯುತ್ತಮ ನಿರ್ಧಾರ ಎಂದು ಇಲ್ಮ ಹೆಮ್ಮೆಯಿಂದ ಹೇಳುತ್ತಾರೆ. 

ಪದವಿ ಪಡೆದ ಬಳಿಕ ಆಕ್ಸ್ ಫರ್ಡ್ ನಲ್ಲಿ ಕಲಿಯಲು ಇಲ್ಮ ಗೆ ವಿದ್ಯಾರ್ಥಿ ವೇತನ ಸಿಗುತ್ತದೆ. ಆದರೆ ಹೋಗುವ ವಿಮಾನ ಟಿಕೆಟ್ ಖರ್ಚು ಭರಿಸಲು ಇಲ್ಮ ಊರಿನ ಗದ್ದೆಯಲ್ಲಿ ಕೆಲಸಕ್ಕೆ ಹೋಗುತ್ತಾರೆ. ಅಲ್ಲಿ ಆಕೆಗೆ ಬಾಲ್ಯದಿಂದಲೇ ಪ್ರೋತ್ಸಾಹ, ಸಹಾಯ ನೀಡುತ್ತಾ ಬಂದ ಚೌಧರಿ ಹರ್ಭಜನ್ ಸಿಂಗ್ ರ ಕಠಿಣ ದುಡಿಮೆ ನೋಡಿ ಇಲ್ಮ ರ ಮನಸ್ಸು ಕರಗುತ್ತದೆ. ಆಕ್ಸ್ ಫರ್ಡ್ ಗೆ ಹೋಗಿ, ಬಳಿಕ ವಿಶ್ವಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿ ನ್ಯೂಯಾರ್ಕ್ ಸೇರಿದರೂ ಇಲ್ಮ ರನ್ನು ಕುಂದರ್ಕಿ ಯಲ್ಲಿರುವ ತಾಯಿಯ ನೆನಪು ಹಾಗು ಚೌಧರಿ ಚಾಚಾರ ಕಠಿಣ ಪರಿಶ್ರಮ ಕಾಡುತ್ತಲೇ ಇತ್ತು. 

ನನ್ನನ್ನು ರೂಪಿಸಲು ಹಲವಾರು ಮಂದಿ ತ್ಯಾಗ ಮಾಡಿದ್ದಾರೆ. ಆದರೆ ಈಗ ತಾನೊಬ್ಬಳೇ ಅಮೆರಿಕದಲ್ಲಿದ್ದೇನೆ. ಆದರೆ ನನ್ನ ಬದುಕು ರೂಪಿಸಿದವರು ಮೊದಲಿದ್ದ ಪರಿಸ್ಥಿತಿಯಲ್ಲೇ ಇನ್ನೂ ಇದ್ದಾರೆ , ಮುಂದೆಯೂ ಹಾಗೇ ಇರುತ್ತಾರೆ ಎಂಬುದು ಆಕೆಯನ್ನು ಚಿಂತನೆಗೆ ಹಚ್ಚಿತು. ಅವರೆಲ್ಲರ ಬದುಕು ಹಸನಾಗಬೇಕು ಎಂದರೆ ನನ್ನಂತವರು ಸ್ವದೇಶದಲ್ಲಿ ಏನಾದರೂ ಮಾಡಬೇಕು ಎಂಬುದು ಆಕೆಗೆ ಮನದಟ್ಟಾಯಿತು. 

ತಕ್ಷಣ ನಿರ್ಧಾರ ಮಾಡಿ ದೇಶಕ್ಕೆ ಮರಳಿದ ಇಲ್ಮ ಯುಪಿಎಸ್ಸಿ ಪರೀಕ್ಷೆ ಬರೆದರು. ಯಶಸ್ವಿಯೂ ಆದರು. ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದು ಅಮೇರಿಕಾದಲ್ಲಿ ಪ್ರತಿಷ್ಠಿತ ಉದ್ಯೋಗ ಗಳಿಸಿದ್ದ ಇಲ್ಮ ಗೆ ಜೀವನಪೂರ್ತಿ ಅಲ್ಲೇ ಹಾಯಾಗಿ ಕಳೆಯಬಹುದಿತ್ತು . ಬೇಕಾದರೆ ತನ್ನ ತಾಯಿಯನ್ನೂ ಅಲ್ಲಿಗೆ ಕರೆಸಿಕೊಳ್ಳಬಹುದಿತ್ತು. ಆದರೆ ಆಕೆಗೆ ದೇಶದ ಪ್ರತಿಯೊಬ್ಬ ತಾಯಂದಿರ ಪಾಲಿಗೆ ತಾನು ಕಣ್ಣೀರೊರೆಸುವ ಮಗಳಾಗಬೇಕು ಎಂಬ ಉದಾತ್ತ ಚಿಂತನೆ ಬಂತು. ಈ ದೇಶದ ಶ್ರಮಿಕರು, ರೈತರ ಪಾಲಿನ ಆಶಾಕಿರಣವಾಗಬೇಕಾದರೆ ತಾನು ಇಲ್ಲೇ ಬಂದು ಇರಬೇಕು ಎಂದು ಆಕೆ ನಿರ್ಧರಿಸಿದರು. 

ಈ ದೇಶದ ರಾಷ್ಟ್ರಪಿತ ಗಾಂಧೀಜಿಯ ಬೋಧನೆಗಳು ಹಾಗು ಸಂವಿಧಾನದ ಬೆಳಕಿನಲ್ಲಿ ನನ್ನ ಜ್ಞಾನ ಹಾಗು ನನಗೆ ಸಿಕ್ಕಿರುವ ಅಧಿಕಾರವನ್ನು ಬಳಸಿಕೊಂಡು ಜನರ ಜೀವನ ಬೆಳಗುವುದೇ ನನ್ನ ಬದುಕಿನ ಗುರಿ ಎಂದು ಹೇಳುತ್ತಾರೆ ಇಲ್ಮ. ಮಹಿಳೆ ರಕ್ಷಣೆ ಕೇಳಲು ಸೀಮಿತ ಅಲ್ಲ, ಆಕೆ ರಕ್ಷಣೆ ನೀಡಲೂ ಸಮರ್ಥಳು. ಭಾರತ ಮತ್ತು ಇಲ್ಲಿನ ಮಣ್ಣು ನನ್ನ ಎದೆಬಡಿತದಂತೆ. ಕುಂದರ್ಕಿ ಯ ಕುಗ್ರಾಮದಿಂದ ಬಂದ ನಾನು ಈ ಹಂತಕ್ಕೆ ತಲುಪಬಹುದು ಎಂದಾದರೆ ಈ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯೂ ಖಂಡಿತ ಏನನ್ನಾದರೂ ಸಾಧಿಸಬಹುದು ಎಂದು ಹೇಳಲು ಮರೆಯುವುದಿಲ್ಲ ಇಲ್ಮ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News