'ಆಪರೇಷನ್ ಕಮಲ' ಆಡಿಯೋ ಟೇಪ್ ನಲ್ಲಿ ಸ್ಪೀಕರ್ ಹೆಸರು: ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ..
ಬೆಂಗಳೂರು, ಫೆ.8: ಅಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋ ಟೇಪ್ ಕುರಿತು ಸೋಮವಾರ ಸದನದಲ್ಲಿ ಪ್ರಸ್ತಾಪಿಸುತ್ತೇನೆಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿಡುಗಡೆ ಮಾಡಿರುವ ಆಡಿಯೋ ಟೇಪ್ಅನ್ನು ಆಲಿಸಿದ್ದೇನೆ. ಅದರಲ್ಲಿ ಸ್ಪೀಕರ್ ಹೆಸರು ಹೇಳಿರುವುದು ಸತ್ಯ. ಆದರೆ, ಆ ಮಾತನ್ನು ಯಾರು ಪ್ರಸ್ತಾಪಿಸಿದ್ದಾರೆ ಎಂಬ ಬಗ್ಗೆ ಖಚಿತವಾಗಿ ಗೊತ್ತಾಗಿಲ್ಲವೆಂದು ತಿಳಿಸಿದರು.
ಆಡಿಯೋ ಟೇಪ್ ಪ್ರಕಾರ ಕೆಲವರು ಮಾತುಕತೆ ನಡೆಸಿದ್ದಾರೆ. ಆ ಪೈಕಿ ಒಬ್ಬರು ಸ್ಪೀಕರ್ ಬಗ್ಗೆ ಭಯ ಬೇಡ ಕವರ್ ಮಾಡಿದ್ದೇವೆ. ಜಡ್ಜ್ಗಳ ಬಗ್ಗೆಯೂ ಭಯ ಬೇಡ ಅವರನ್ನು ಕವರ್ ಮಾಡಿದ್ದೇವೆ ಎನ್ನುವ ಸಂಭಾಷಣೆ ಇದೆ. ಹೀಗಾಗಿ ಸೋಮವಾರ ಈ ಬಗ್ಗೆ ಸ್ವಯಂ ಪ್ರೇರಿತವಾಗಿ ಕಲಾಪದಲ್ಲಿ ಪ್ರಸ್ತಾವಿಸುತ್ತೇನೆ. ಮುಂದಿನ ಕ್ರಮದ ಬಗ್ಗೆ ನಂತರ ಚರ್ಚೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.