×
Ad

ಶಾಸಕ ಮಹೇಶ್ ಕುಮಟಳ್ಳಿ ಅಕ್ರಮ ಬಂಧನ: ಹುಡುಕಿಕೊಡಲು ಪೊಲೀಸರಿಗೆ ನಿರ್ದೇಶನ ನೀಡಿ ಎಂದು ಹೈಕೋರ್ಟ್‌ಗೆ ಅರ್ಜಿ

Update: 2019-02-08 21:48 IST

ಬೆಂಗಳೂರು, ಫೆ.8: ಅಥಣಿ ಶಾಸಕ ಮಹೇಶ್ ಕುಮಟಳ್ಳಿಯವರನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿಯವರು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದು, ಅವರನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಶುಕ್ರವಾರ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿಯ ನಿವಾಸಿ ವಕೀಲ ಹಾಗೂ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಮೋದ ದಯಾನಂದ ಹಿರೇಮನಿ ಈ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಗೋಕಾಕ್ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಸೇರಿದಂತೆ ಶಾಸಕ ಮಹೇಶ ಕುಮಟಳ್ಳಿ, ಗೃಹ ಇಲಾಖೆ ಹಾಗೂ ಅಥಣಿ ಪೊಲೀಸ್ ಠಾಣೆಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಶಾಸಕ ಮಹೇಶ ಕುಮಟಳ್ಳಿಯವರ ಜೀವಕ್ಕೆ ಅಪಾಯವಿದೆ. ಅವರನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಗೃಹ ಇಲಾಖೆ, ರಮೇಶ ಜಾರಕಿಹೊಳಿ ಹಾಗೂ ಅಥಣಿ ಪೊಲೀಸರಿಗೆ ನಿರ್ದೇಶನ ನೀಡಬೇಕು. ಅಲ್ಲದೇ ಶಾಸಕರ ನಾಪತ್ತೆ ವಿಚಾರವಾಗಿ ರಮೇಶ ಜಾರಕಿಹೊಳಿಯವರನ್ನು ತಕ್ಷಣ ವಿಚಾರಣೆಗೊಳಪಡಿಸಲು ಅಥಣಿ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಪ್ರಮೋದ ಹಿರೇಮನಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ರಮೇಶ ಜಾರಕಿಹೊಳಿಯವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನನ್ನ ಮೇಲೆ ತುಂಬಾ ಒತ್ತಡ ಹಾಕುತ್ತಿದ್ದಾರೆ. ಅಲ್ಲದೇ ಅಪಹರಿಸಿಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹೇಶ ಕುಮಟಳ್ಳಿ ಇತ್ತಿಚಿಗೆ ಅರ್ಜಿದಾರರ ಮುಂದೆ ಹೇಳಿಕೊಂಡಿದ್ದರು.

ಈ ಮಧ್ಯೆ ಕಳೆದ ಒಂದು ತಿಂಗಳಿಂದ ಶಾಸಕರು ಅವರ ಸಂಪರ್ಕಕ್ಕೆ ಸಿಕ್ಕಿಲ್ಲ. ಅಲ್ಲದೇ ಅಥಣಿಯಲ್ಲೂ ಅವರು ಕಾಣಿಸಿಕೊಂಡಿಲ್ಲ. ಈ ಬಗ್ಗೆ ವಿಚಾರಿಸಿದರೆ ಅವರ ಕುಟುಂಬದವರು, ಸಂಬಂಧಿಕರು, ಆಪ್ತರು ಸ್ಪಷ್ಟ ಉತ್ತರ ಕೊಡುತ್ತಿಲ್ಲ. ರಮೇಶ ಜಾರಕಿಹೊಳಿಯವರ ಬಗ್ಗೆ ಮಹೇಶ ಕುಮಟಳ್ಳಿಯವರು ಕೆಲವೊಂದು ಅನುಮಾನಾಸ್ಪದ ಹೇಳಿಕೆ ನೀಡಿದ್ದನ್ನು ಗಮನಿಸಿದರೆ ರಮೇಶ್ ಜಾರಕಿಹೊಳಿಯವರೇ ಶಾಸಕರನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಅರ್ಜಿದಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಫೆ.7ರಂದು ಅರ್ಜಿದಾರರು ಅಥಣಿ ಪೊಲೀಸರಿಗೆ ದೂರು ಕೊಟ್ಟರು. ಆದರೆ, ದೂರು ಸ್ವೀಕರಿಸಿದ ಪೊಲೀಸರು ಎಫ್‌ಐರ್ ದಾಖಲಿಸಿಲ್ಲ. ಬದಲಿಗೆ ಮಹೇಶ ಕುಮಟಳ್ಳಿಯವರು ವಿಧಾನಸಭೆಯ ಬಜೆಟ್ ಅಧಿವೇಶನಕ್ಕೆ ಹಾಜರಾಗಲು ಬೆಂಗಳೂರಿನಲ್ಲಿ ಇರಬಹುದು ಎಂದು ಹಾರಿಕೆ ಉತ್ತರ ನೀಡಿದರು. ಅದಕ್ಕಾಗಿ ಅರ್ಜಿದಾರರು ತಕ್ಷಣ ಬೆಂಗಳೂರಿಗೆ ಆಗಮಿಸಿ ಶಾಸಕರ ಭವನಕ್ಕೆ ಬಂದು ನೋಡಿದರೆ ಅಲ್ಲಿ ಶಾಸಕರು ಸಿಕ್ಕಿಲ್ಲ. ಇದೇ ವೇಳೆ ಅರ್ಜಿದಾರರರು ರಮೇಶ ಜಾರಕಿಹೊಳಿಯವರ ಕುರಿತು ವಿಚಾರಿಸಿದರೆ ಅವರ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ. ಹಾಗಾಗಿ, ಅಕ್ರಮ ಬಂಧನದಲ್ಲಿರುವ ಶಾಸಕ ಮಹೇಶ ಕುಮಟಳ್ಳಿ ಅವರನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಮತ್ತು ಈ ವಿಚಾರವಾಗಿ ರಮೇಶ್ ಜಾರಕಿಹೊಳಿ ಅವರನ್ನು ತಕ್ಷಣ ವಿಚಾರಣೆಗೊಳಪಡಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News