ರೇವಣ್ಣ ನಿಂಬೆಹಣ್ಣು ಕೊಡ್ತಾರಂತೆ ನೋಡ್ರಪ್ಪ !

Update: 2019-02-09 17:01 GMT

ಬೆಂಗಳೂರು, ಫೆ. 9: ‘ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸುವ ಆಯವ್ಯಯದಲ್ಲೇನೂ ವಿಶೇಷ ಇಲ್ರಪ್ಪ... ಆ ನಮ್ಮ ರೇವಣ್ಣ ಅಲ್ಲಿ ನಿಂಬೆಹಣ್ಣು ಕೊಡ್ತಾರಂತೆ ನೋಡ್ರಪ್ಪ, ಹೋಗಿ ಈಸ್ಕೋಂಡು ಬನ್ನಿ’ ಹೀಗೆಂದು ವಿಧಾನಸಭೆ ಮೊಗಸಾಲೆಯಲ್ಲಿ ವಿಪಕ್ಷ ನಾಯಕ ಯಡಿಯೂರಪ್ಪ ಚಟಾಕಿ ಹಾರಿಸಿದ್ದು, ಶಾಸಕರಲ್ಲಿ ನಗೆ ಅಲೆಯನ್ನುಕ್ಕಿಸಿತು.

ನಿನ್ನೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ವಿಪಕ್ಷ ಶಾಸಕರ ಮತ್ತು ಪತ್ರಕರ್ತರು ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ನಗುಮೊಗದಲ್ಲೆ ಬಂದ ಬಿಎಸ್‌ವೈ, ಎದುರಿಗೆ ಸಿಕ್ಕ ವಿ.ಸೋಮಣ್ಣನವರನ್ನು ಕುರಿತು ‘ರೇವಣ್ಣ ನಿಂಬೆಹಣ್ಣು ಕೊಡ್ತಾರಂತೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ‘ಸಾರ್ ನಾನು ಆ ನಿಂಬೆಹಣ್ಣು ಇಟ್ಟುಕೊಂಡು ಏನ್ ಮಾಡೋದು’ ಎಂದರು. ಈ ವೇಳೆ ಪತ್ರಕರ್ತರೊಬ್ಬರು ‘ಆಡಳಿತ ಪಕ್ಷದವರು ನಿಂಬೆಹಣ್ಣು ಇಟ್ಟುಕೊಂಡರೆ, ನೀವು(ಬಿಜೆಪಿ) ವಿಪಕ್ಷದವರು ಮೆಣಸಿನಕಾಯಿ ಇಟ್ಟುಕೊಳ್ಳಬೇಕು’ ಎನ್ನುತ್ತಿದ್ದಂತೆ ನಗುಮೊಗದಲ್ಲೆ ಇದ್ದ ಯಡಿಯೂರಪ್ಪ ಗೊಳ್ಳೆಂದು ನಕ್ಕೆಬಿಟ್ಟರು.

ಸದಾ ಹುಸಿಮುನಿಸಿನಲ್ಲೆ ಇರುವ ಯಡಿಯೂರಪ್ಪ, ಉತ್ಸಾಹ ಮತ್ತು ನಗುಮೊಗದಲ್ಲೆ ಇದ್ದದ್ದು ಕಂಡು ಬಿಜೆಪಿ ಶಾಸಕರು ಮತ್ತು ಪತ್ರಕರ್ತರಿಗೆ ಆಶ್ಚರ್ಯ. ಇದೇ ವೇಳೆ ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕ ಅಂಗಾರ ಟಿಪ್‌ಟಾಪ್ ಆಗಿ ಅಲ್ಲಿಗೆ ಬಂದರು. ‘ಏನ್ರಿ ಅಂಗಾರ ಬಹಳ ಚೆನ್ನಾಗಿ ಕಾಣಸ್ತಿದ್ದೀಯ ಇವತ್ತು’ ಎಂದ್ರೆ..ಅಂಗೇನಿಲ್ಲ ಸಾರ್.. ಎಂದು ಮುಂದೆ ಸಾಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News