ಸದನಕ್ಕೆ ಬರಲು ಆಗದಿದ್ದರೆ ಚುನಾವಣೆಗೇಕೆ ನಿಲ್ಲಬೇಕು: ಸ್ಪೀಕರ್ ರಮೇಶ್‌ ಕುಮಾರ್ ಪ್ರಶ್ನೆ

Update: 2019-02-10 12:38 GMT

ರಾಯಚೂರು, ಫೆ. 10: ಶಾಸಕರು ಸದನಕ್ಕೆ ಬರಲು ಆಗದಿದ್ದರೆ ಮೊದಲೇ ತಿಳಿಸಬೇಕು, ಇಲ್ಲವೇ ಸದನಕ್ಕೆ ಬರಬೇಕು. ಸದನಕ್ಕೆ ಬರಲು ಆಗದಿದ್ದರೆ ಚುನಾವಣೆಗೆ ಏಕೆ ನಿಲ್ಲಬೇಕು ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮತ ಹಾಕಿ ಗೆಲ್ಲಿಸಿದ ಜನ ನಮ್ಮನ್ನು ನೋಡಿ ಉಗಿಯುವಂತೆ ಇರಬಾರದು. ರಾಜ್ಯ ಮಾತ್ರವಲ್ಲ, ದೇಶದ ರಾಜಕೀಯವೆ ಹಾಳಾಗಿಹೋಗಿದೆ. ಎಲ್ಲ ಭ್ರಷ್ಟಾಚಾರಕ್ಕೆ ಚುನಾವಣೆಯೇ ತಳಹದಿ ಎಂದು ಹೇಳಿದರು.

ದೇಶದಲ್ಲಿ ಚುನಾವಣಾ ಕಾಯ್ದೆಗಳಲ್ಲಿ ಸುಧಾರಣೆಗಳನ್ನು ತರಬೇಕು. ಆದರೆ, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಜನ್ಮತಾಳಿದ ಮನುಷ್ಯನೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಹೆಸರು ಉಲ್ಲೇಖಿಸದೆ ತಿರುಗೇಟು ನೀಡಿದರು.

‘ಆಪರೇಷನ್ ಕಮಲ ’ಆಡಿಯೋ ಕುರಿತಂತೆ ನಾಳೆ(ಫೆ.11) ಸದನದಲ್ಲಿ ಚರ್ಚಿಸುತ್ತೇನೆ. ಯಾರು ಮಾರಾಟ ಆಗುತ್ತಾರೋ, ಯಾರು ದುಡ್ಡು ಕೊಡುತ್ತಾರೋ ನನಗೆ ಗೊತ್ತಿಲ್ಲ. ಆಪರೇಷನ್ ಕಮಲದ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.

ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಂದ ನಾನು ನೊಂದಿದ್ದೇನೆ. ಮತ್ತೊಬ್ಬರಿಗೆ ನೋವು ಕೊಟ್ಟು ಬದುಕಲು ನಾನು ಎಂದೂ ಇಷ್ಟಪಡುವುದಿಲ್ಲ. ನಾವು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ರಮೇಶ್ ಕುಮಾರ್ ಇದೇ ವೇಳೆ ಹೇಳಿದರು.

‘ನಾನು ಹಿಟ್ಲರ್ ಅಲ್ಲ. ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡುತ್ತೇನೆ. ‘ಆಪರೇಷನ್ ಕಮಲದ ಬಗ್ಗೆಯೂ ನನಗೆ ಗೊತ್ತಿಲ್ಲ. ಆಡಿಯೋ ಬಿಡುಗಡೆ ಸಂಬಂಧ ನಾಳೆ ಸದನದಲ್ಲಿ ಚರ್ಚಿಸುತ್ತೇನೆ’

-ಕೆ.ಆರ್.ರಮೇಶ್‌ ಕುಮಾರ್, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News