ಪ್ರಧಾನಿ ಮೋದಿ ಆಪರೇಷನ್ ಕಮಲದ ಸೂತ್ರಧಾರ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

Update: 2019-02-10 13:06 GMT

ಬೆಂಗಳೂರು, ಫೆ.10: ರಾಜ್ಯ ಬಿಜೆಪಿ ಮುಖಂಡರುಗಳು ಕೋಟ್ಯಂತರ ರೂಪಾಯಿ ಹಣದ ಆಮಿಷವೊಡ್ಡಿ ಶಾಸಕರನ್ನು ಸೆಳೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಕ್ರಮವನ್ನು ಕೈಗೊಳ್ಳದೇ ಮೌನವಾಗಿರುವುದನ್ನು ಗಮನಿಸಿದರೆ ಅವರೆ ಆಪರೇಷನ್ ಕಮಲದ ಸೂತ್ರಧಾರ ಎಂಬ ಅನುಮಾನ ಬರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಪಾದಿಸಿದ್ದಾರೆ.

ರವಿವಾರ ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಬಿಡುಗಡೆ ಮಾಡಿರುವ ಆಡಿಯೋ ನಕಲಿ ಅಲ್ಲ, ಅದು ನಿಜವಾದ ಆಡಿಯೋ, ಅದರಲ್ಲಿನ ಧ್ವನಿ ಬಿಜೆಪಿ ನಾಯಕ ಯಡಿಯೂರಪ್ಪನವರದೇ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇಷ್ಟಾದರೂ ಬಿಜೆಪಿ ವರಿಷ್ಠರು, ಯಡಿಯೂರಪ್ಪನವರ ವಿರುದ್ಧ ಕ್ರಮ ಕೈಗೊಳ್ಳದೆ ಮೌನವಾಗಿದ್ದಾರೆ. ಇದನ್ನು ಗಮನಿಸಿದರೆ ಆಪರೇಷನ್ ಕಮಲದ ಸೂತ್ರಧಾರರಾದ ಅಮಿತ್ ಶಾ, ಪ್ರಧಾನಿ ಮೋದಿ ಎಂಬ ಅನುಮಾನ ಬರುತ್ತಿದೆ. ಹೀಗಾಗಿ, ಇಂದು ಹುಬ್ಬಳ್ಳಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಇದಕ್ಕೆ ಉತ್ತರ ನೀಡಬೇಕೆಂದು ಆಗ್ರಹಿಸಿದರು.

ಆಪರೇಷನ್ ಕಮಲಕ್ಕೆ 200 ಕೋಟಿ ರೂ. ಹಣ ಸುರಿಯಲಾಗುತ್ತಿದೆ. ಈ ಹಣ ಎಲ್ಲಿಂದ ಬಂದಿದೆ, ಇದು ಕಪ್ಪುಹಣ ಅಲ್ಲವೇ ಎಂದು ಪ್ರಶ್ನಿಸಿದ ಗುಂಡೂರಾವ್ ಅವರು, ಆಪರೇಷನ್ ಕಮಲ ನಡೆಸಿರುವ ಬಿಜೆಪಿ ಮುಖಂಡರುಗಳ ವಿರುದ್ಧ ಬಿಜೆಪಿ ವರಿಷ್ಠರು ಕ್ರಮ ಕೈಗೊಳ್ಳದಿದ್ದರೆ ಇದರ ಸೂತ್ರಧಾರ ಪ್ರಧಾನಿ ನರೇಂದ್ರ ಮೋದಿ ಎಂಬ ಆರೋಪ ನಿಜ ಎಂಬುದು ಜನರಿಗೆ ಅರಿವಾಗುತ್ತದೆ ಎಂದು ತಿಳಿಸಿದರು. ಪ್ರಜಾಪ್ರಭುತ್ವ, ದೇಶಭಕ್ತಿ, ಸಿದ್ಧಾಂತದ ಬಗ್ಗೆ ಭಾಷಣ ಮಾಡುವ ಪ್ರಧಾನಿ ಮೋದಿ ರಾಜ್ಯದಲ್ಲಿ ಆಪರೇಷನ್ ಕಮಲದ ಬಗ್ಗೆ ಮೌನವಾಗಿರುವುದು ಅಚ್ಚರಿ ತಂದಿದೆ. ಒಂದು ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸುತ್ತಿರುವ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಂಡು ಅವರ ಬದ್ಧತೆ ಪ್ರದರ್ಶಿಸಲಿ. ಅಲ್ಲದೆ, ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆ ಮಾಡುವಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸಿ, ಹೆಚ್ಚಿನ ಹಣ ಬಿಡುಗಡೆ ಬಗ್ಗೆ ಘೋಷಣೆ ಮಾಡಬೇಕೆಂದು ಹೇಳಿದರು. ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ರಾಜ್ಯ ಸರಕಾರ 500 ಎಕರೆ ಜಮೀನು ನೀಡಿದೆ. ಆದರೂ ಐಐಟಿ ಉದ್ಘಾಟನೆ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿಯವರನ್ನು ಆಹ್ವಾನಿಸಿಲ್ಲ. ಇದು ರಾಜ್ಯಕ್ಕೆ ಆದ ಅಪಮಾನ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜನತೆಯ ಕ್ಷಮೆ ಕೇಳಲಿ ಎಂದು ಒತ್ತಾಯಿಸಿದ ಅವರು, ಈಗಲಾದರೂ ದೂರವಾಣಿ ಮೂಲಕ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲಿ ಎಂದರು.

ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಸಂದರ್ಭದಲ್ಲಿ ಪಡೆದ ಗುತ್ತಿಗೆ ತಪ್ಪಿಸಿ ನಗರದ ಎಚ್‌ಎಎಲ್ ಅನ್ನು ಸಂಕಷ್ಟಕ್ಕೆ ದೂಡಿದ ಬಗ್ಗೆ ಉತ್ತರ ನೀಡಬೇಕು. ಹಾಗೆಯೇ ಹಂಪಿ ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆಯೂ ಉತ್ತರ ನೀಡಲಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕಾಂಗ್ರೆಸ್‌ನ ನಾಲ್ವರು ಶಾಸಕರು ಬಿಜೆಪಿಯ ಷಡ್ಯಂತ್ರಗಳಿಗೆ ಒಳಗಾಗಿರುವ ಬಗ್ಗೆ ಬೇಸರ, ನೋವು ಇದೆ. ಈಗಲೂ ಕಾಲ ಮಿಂಚಿಲ್ಲ, ಅತಪ್ತ ಶಾಸಕರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶವಿದ್ದು, ವಾಪಸ್ ಕಾಂಗ್ರೆಸ್‌ಗೆ ಬನ್ನಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಅತೃಪ್ತ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಬಳಸಲು ಕಾಂಗ್ರೆಸ್ ಮುಖಂಡರುಗಳು ಮೀನಾಮೇಷ ಎಣಿಸಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಶಾಸಕರ ವಿರುದ್ಧ ಕ್ರಮ ನಿಶ್ಚಿತ ಎಂದರಾದರೂ, ಈ ನಾಲ್ವರು ಅತಪ್ತ ಶಾಸಕರು ಬಿಜೆಪಿ ಷಡ್ಯಂತ್ರಕ್ಕೆ ಬಲಿಯಾಗಿ ತಮ್ಮ ಭವಿಷ್ಯ ಹಾಳುಮಾಡಿಕೊಳ್ಳುತ್ತಿರುವ ಬಗ್ಗೆ ನೋವು, ಬೇಸರ ಇದೆ ಎಂದರು.

ಈ ನಾಲ್ವರು ಶಾಸಕರು ತಪ್ಪು ಸರಿಪಡಿಸಿಕೊಳ್ಳಲು ಈಗಲೂ ಕಾಲ ಮಿಂಚಿಲ್ಲ, ತಪ್ಪು ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದು ಹೇಳುವ ಮೂಲಕ ಈ ಅತೃಪ್ತ ಶಾಸಕರು ಕಾಂಗ್ರೆಸ್‌ಗೆ ಮರಳಲು ಅಭ್ಯಂತರ ಇಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News