ರಾಜ್ಯ ಯುವಜನ ಆಯೋಗ ಜಾರಿಯಾಗಬೇಕು: ಚಲನಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ

Update: 2019-02-17 17:24 GMT

ಬೆಂಗಳೂರು, ಫೆ.17: ಮಕ್ಕಳ ಆಯೋಗ, ಮಹಿಳಾ ಆಯೋಗದಂತೆ ರಾಜ್ಯ ಯುವಜನ ಆಯೋಗ ಜಾರಿಯಾಗಬೇಕೆಂದು ಚಲನಚಿತ್ರ ನಿರ್ದೇಶಕ ಬಿ.ಎಂ ಗಿರಿರಾಜ ಆಗ್ರಹಿಸಿದರು.

ರವಿವಾರ ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ಯುವಾಭಿವ್ಯಕ್ತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ, ರಾಜ್ಯದಲ್ಲಿ ಯುವಜನರು ವಿವಿಧ ರೀತಿಯ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಯುವ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ಯುವಜನರ ದೈಹಿಕ ಮಾನಸಿಕ ಬೆಳೆವಣಿಗೆಯ ಹಂತದಲ್ಲಾಗುವ ಆರೋಗ್ಯದ ಸವಾಲು, ಶಿಕ್ಷಣ, ಉದ್ಯೋಗ, ಪ್ರೀತಿ, ಗೆಳೆತನ, ಮದುವೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೋಡಗಿಸಿಕೊಳ್ಳುವ ವಿಷಯಗಳಲ್ಲಿ ಯುವಜನರ ಒಳಗೆ ಗೊಂದಲ, ಬಿಕ್ಕಟ್ಟುಗಳಿವೆ. ಹೊರಗಿನಿಂದಲೂ ಒತ್ತಡಗಳಿವೆ. ತಂದೆ- ತಾಯಿಯರ ಪ್ರೀತಿಯ ಜೊತೆಗೆ ಯುವಜನರ ಸಾಮರ್ಥ್ಯಕ್ಕೆ ಮೀರಿದ ನಿರೀಕ್ಷೆಗಳು ಕುಟುಂಬದೊಳಗಿನ ದೌರ್ಜನ್ಯಗಳು, ಉದ್ಯೋಗದ ಸವಾಲುಗಳು ಯುವಜನತೆ ಬೆಳೆದು ಅರಳುವುದನ್ನು ಕುಂಠಿತಗೊಳಿಸುತ್ತದೆ ಎಂದು ತಿಳಿಸಿದರು.

ಯುವಜನರ ಹಕ್ಕುಗಳು ಸಮರ್ಪಕವಾಗಿ ಬಳಕೆಯಾಗಬೇಕು, ಅದು ಎಲ್ಲರಿಗೂ ತಲುಪಬೇಕಾದರೆ ಅದಕ್ಕೆ ಒಂದು ಆಯೋಗದ ನಿಯಂತ್ರಣದ ಅಗತ್ಯವಿದೆ. ಹೀಗಾಗಿ, ರಾಜ್ಯ ಸರಕಾರ ಒಂದು ಆಯೋಗವನ್ನು ರಚನೆ ಮಾಡಬೇಕು. ಈಗಾಗಲೇ ಮಹಾರಾಷ್ಟ್ರ, ಕೇರಳದಲ್ಲಿ ಯುವಜನ ಆಯೋಗವಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಒಂದು ಆಯೋಗ ರಚನೆಯಾಗಬೇಕಾಗಿದೆ. ಈ ಸಂಬಂಧ ಎಲ್ಲರೂ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಕರೆ ನೀಡಿದರು.

ಉದ್ಯೋಗಕ್ಕಾಗಿ ಯುವಜನರು ಸಂಘಟನೆಯ ಸಂಚಾಲಕ ಸರೋವರ ಬೆಂಕಿಕೆರೆ ಮಾತನಾಡಿ, ನಮ್ಮ ಭಾರತದಲ್ಲಿ ನಿರುದ್ಯೋಗಿಗಳ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ, ಸರಿಯಾದ ಶಿಕ್ಷಣ ಸಿಗದೇ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದು ಒತ್ತಾಯಿಸಿದರು.

ಸಮಾಜದಲ್ಲಿನ ಎಲ್ಲರಿಗೂ ಶಿಕ್ಷಣ, ಉದ್ಯೋಗ ಸಿಗುವುದರಿಂದ ಯುವಜನರು ತಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ತಕ್ಕಮಟ್ಟಿಗೆ ಸಹಕಾರಿಯಾಗುತ್ತದೆ. ಇದರಲ್ಲಿ ಸರಕಾರದ ಪಾತ್ರ ಪ್ರಮುಖವಾಗಿದ್ದು, ಆಳುವ ವರ್ಗ ಶಿಕ್ಷಣಕ್ಕೆ ಅಗತ್ಯವಾದ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕು. ಅದರ ಜತೆಗೆ ಶಿಕ್ಷಿತರಾದ ಎಲ್ಲರಿಗೂ ಉದ್ಯೋಗದ ಖಾತ್ರಿಯನ್ನೂ ನೀಡಬೇಕು ಎಂದರು.

ಕಲಾವಿದೆ ಶಿಲೋಕ ಮಾತನಾಡಿ, ಜಗತ್ತು ನನ್ನನ್ನು ಗಂಡು ಎಂದು ಗುರುತಿಸುತ್ತಿತ್ತು. ಆದರೆ, ನಾನು ನನ್ನನ್ನು ಹೆಣ್ಣಾಗಿ ಗುರುತಿಸಿಕೊಂಡೆ. ನಮ್ಮ ಜೀವನವನ್ನು ನಾವು ಯಾವರೀತಿಯಾಗಿ ಜೀವಿಸಬೇಕು, ನಮ್ಮ ಲಿಂಗ ಯಾವುದು ಎಂದು ಸಮಾಜ ನಿರ್ಧಾರ ಮಾಡುತ್ತದೆ. ಆದರೆ, ಅದು ನಮ್ಮ ಹಕ್ಕಾಗಬೇಕು ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ್ತಿ ಶಾರದ ಮಾಳಗಿ ಮಾತನಾಡಿ, ಹಕ್ಕುಗಳು ಶಾಸನ ಬದ್ಧವಾಗಿ ಇರಬೇಕು. ಯುವ ನೀತಿ ಆಯೋಗ ಬೇಕು. ನಿರ್ದಿಷ್ಟ ಸಮಾಲೋಚನೆಗೆ ನಿರ್ದಿಷ್ಟ ಸಮಯಬೇಕು, ಶಿಕ್ಷಣ ಬೇಕು ಹೊರತು ತಾರತಮ್ಯ ಬೇಡ. ನಮ್ಮದೇ ಹಕ್ಕು ನಮಗೆ ಬೇಕಾಗಿದೆ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News