ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಸದಸ್ಯರಿಗೆ ಆಹ್ವಾನ

Update: 2019-02-17 18:34 GMT

ಮುಂಬೈ, ಫೆ.17: ಖತರ್‌ನಲ್ಲಿ 2022ರಲ್ಲಿ ನಡೆಯುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ 1983 ಹಾಗೂ 2011ರ ವಿಶ್ವಕಪ್ ಕ್ರಿಕೆಟ್ ವಿಜೇತ ಭಾರತ ತಂಡದ ಸದಸ್ಯರನ್ನು ಕ್ರೀಡಾಕೂಟಕ್ಕೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ಆಮಂತ್ರಿಸಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಒಂದು ದೊಡ್ಡ ಕ್ರೀಡೆ ಎಂದು ಒಪ್ಪಿಕೊಂಡಿರುವ ಫಿಫಾ ವಿಶ್ವಕಪ್ ಖತರ್-2022ರ ಸಿಇಒ ನಾಸರ್ ಅಲ್ ಖಾತಿರ್, ವಿಶ್ವಕಪ್ ವಿಜೇತ ತಂಡಗಳಿಗೆ ಆಹ್ವಾನ ನೀಡಿದ್ದಾರೆ.

ವಾರಾಂತ್ಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘‘ಈ ವಿಶ್ವಕಪ್ ನಮ್ಮೆಲ್ಲರ ಸಂಭ್ರಮಾಚರಣೆಯಾಗಿದೆ. ಖತರ್‌ಗೆ ನಿಮ್ಮನ್ನು ಸ್ವಾಗತಿಸಲು ನಾನು ಇಷ್ಟಪಡುತ್ತೇನೆ. ಭಾರತದಲ್ಲಿ ಕ್ರಿಕೆಟ್‌ನ ಪ್ರಭಾವ ಯಾವ ರೀತಿಯದ್ದಾಗಿದೆ ಎಂಬ ಬಗ್ಗೆ ನನಗೆ ಅರಿವಿಲ್ಲ. 1983ರ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್‌ನ್ನು ಸೋಲಿಸಿದ ತಂಡದ ಸದಸ್ಯರು ಹಾಗೂ 2011ರ ವಿಶ್ವಕಪ್ ವಿಜೇತ ಭಾರತದ ಸದಸ್ಯರು ಇಲ್ಲಿದ್ದಾರೆಂದು ತಿಳಿದಿದೆ. ಖತರ್‌ನಲ್ಲಿ ನಡೆಯುವ ಫಿಫಾ ವಿಶ್ವಕಪ್‌ಗೆ ನಾನು ವಿಶೇಷವಾಗಿ ನಿಮ್ಮನ್ನು ಆಮಂತ್ರಿಸುತ್ತೇನೆ’’ ಎಂದು ಖಾತಿರ್ ಹೇಳಿದ್ದಾರೆ.

ಭಾರತ ಫುಟ್ಬಾಲ್ ತಂಡದ ಆಟಗಾರರನ್ನೂ ಇದೇ ವೇಳೆ ಅವರು ಆಹ್ವಾನಿಸಿದರು. 1983ರ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನು ದಂತಕತೆ ಕಪಿಲ್ ದೇವ್ ವಹಿಸಿದ್ದರೆ, 2011ರ ಆವೃತ್ತಿಯ ವಿಜೇತ ತಂಡದ ನಾಯಕತ್ವವನ್ನು ಮಹೇಂದ್ರಸಿಂಗ್ ಧೋನಿ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News