ಮಾಜಿ ಶಾಸಕ ಜೆ.ಡಿ.ನಾಯಕ್ ಮರಳಿ ಕಾಂಗ್ರೆಸ್‌ಗೆ

Update: 2019-02-20 15:02 GMT

ಬೆಂಗಳೂರು, ಫೆ. 20: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಜೆ.ಡಿ.ನಾಯಕ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ದೇಶಪಾಂಡೆ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಹಿಂದುತ್ವದಿಂದ ಬೇಸತ್ತು ಪಕ್ಷಕ್ಕೆ ವಾಪಸ್: ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಜೆ.ಡಿ. ನಾಯಕ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಳಿಕ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ, ಬಿಜೆಪಿಯ ಹಿಂದುತ್ವಕ್ಕೆ ಬೇಸತ್ತು ಜೆ.ಡಿ.ನಾಯಕ್ ಅವರು ಕಾಂಗ್ರೆಸ್ ವಾಪಸಾಗಿದ್ದಾರೆ ಎಂದು ಹೇಳಿದರು.

ಬಿಜೆಪಿಯಲ್ಲಿ ಹಿಂದುತ್ವ ಎಂದರೆ ಬರೀ ಕೋಮುವಾದ, ವೈಷಮ್ಯದ ರಾಜಕಾರಣ. ಅಲ್ಲಿ ಸಮಾನತೆ ಇಲ್ಲ. ಕಾಂಗ್ರೆಸ್‌ನಲ್ಲಿ ಮಾತ್ರ ಜಾತ್ಯತೀತ ತತ್ವಗಳಿಗೆ ಅವಕಾಶಗಳಿವೆ. ಕೇವಲ ರಾಜಕಾರಣಕ್ಕಾಗಿ ಹಿಂದುತ್ವ ಬಳಸಿಕೊಳ್ಳುತ್ತಿರುವುದರಿಂದ ಮಾಜಿ ಶಾಸಕ ಜೆ.ಡಿ.ನಾಯಕ್ ಅವರಂತಹ ಹಲವು ಮುಖಂಡರು ಬೇಸರಗೊಂಡಿದ್ದಾರೆಂದು ಅವರು ಹೇಳಿದರು.

ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ. ಆ ಹಿನ್ನೆಲೆಯಲ್ಲಿ ಜೆ.ಡಿ.ನಾಯಕ್ ಅವರನ್ನು ಕಾಂಗ್ರೆಸ್‌ಗೆ ಮರಳಿ ಕರೆತರಲಾಗಿದೆ ಎನ್ನುವುದು ಆಧಾರ ರಹಿತ. ಸುಳ್ಳು ಸುದ್ದಿ ಅಷ್ಟೇ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಾನು ಆಲೋಚನೆ ಮಾಡಿಲ್ಲ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ದೇಶಪಾಂಡೆ ನುಡಿದರು.

ಅನಂತ್‌ಕುಮಾರ್ ಹೆಗಡೆ ಐದು ಬಾರಿ ಸಂಸದರಾಗಿ ಉತ್ತರ ಕನ್ನಡ ಕ್ಷೇತ್ರವನ್ನು ಸ್ಪರ್ಧಿಸಿದ್ದಾರೆ. ಆದರೆ, ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯ. ಸಂಸತ್‌ನಲ್ಲೂ ಅವರು ಕ್ರಿಯಾಶೀಲರಾಗಿಲ್ಲ. ಕೇವಲ ಪ್ರಚೋದನಕಾರಿ ಭಾಷಣ ಮಾಡಿ ಕೋಮು ವೈಷಮ್ಯ ಸೃಷ್ಟಿಸಿದ್ದೇ ಅವರ ಸಾಧನೆ. ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಸಾಧನೆ ಶೂನ್ಯ ಎಂದು ಕಿಡಿಕಾರಿದರು.

ಜೆ.ಡಿ.ನಾಯಕ್ ಭಟ್ಕಳ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನನ್ನ ಹಳೆಯ ಸ್ನೇಹಿತರು. ಅವರು ಮರಳುವಿಕೆಯಿಂದ ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ಮತ್ತಷ್ಟು ಬಲ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

‘ಲೋಕಸಭೆ ಸೀಟು ಹಂಚಿಕೆ ಸಂಬಂಧ ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಾಗುವುದು. ಈ ವಿಚಾರದಲ್ಲಿ ಯಾರೂ ಭಿಕ್ಷುಕರಲ್ಲ. ಈ ಸಂಬಂಧ ಸಿಎಂ ಜತೆ ಚರ್ಚಿಸಿದ್ದು, ಯಾವುದೇ ಗೊಂದಲವಿಲ್ಲ. ಹೇಳಿಕೆಗಳನ್ನು ಆಧರಿಸಿ ರಾಜಕಾರಣ ಸಾಧ್ಯವಿಲ್ಲ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News