ಆಸ್ತಿ ವಿಚಾರಕ್ಕೆ ಮಹಿಳೆಯ ಕೊಲೆ ಪ್ರಕರಣ: ಇಬ್ಬರ ಸೆರೆ

Update: 2019-02-20 15:48 GMT

ಬೆಂಗಳೂರು, ಫೆ.20: ಆಸ್ತಿ ವಿಚಾರವಾಗಿ ಮಹಿಳೆಯನ್ನು ಕೊಲೆಗೈದ ಆರೋಪ ಪ್ರಕರಣವನ್ನು ಭೇದಿಸಿರುವ ಇಲ್ಲಿನ ಕೆಂಗೇರಿ ಠಾಣಾ ಪೊಲೀಸರು, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿವೇಕ್ ಅಗರ್ವಾಲ್ ಮತ್ತು ಕೊಲೆಗೆ ಸಹಕರಿಸಿದ್ದ ಥಾಯ್ ಹೇಲ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಅನುಶಾ ಒಂದು ವರ್ಷದ ಹಿಂದೆ ಸನತ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕೆಂಗೇರಿಯ ಸನ್ ಸಿಟಿ ಬಳಿ ಮನೆಯೊಂದರಲ್ಲಿ ದಂಪತಿ ವಾಸವಾಗಿದ್ದರು. ಆದರೆ ಫೆ.18ರಂದು ಇದ್ದಕ್ಕಿದ್ದಂತೆ ಅನುಶಾ ಮನೆಯಲ್ಲಿ ಶವವಾಗಿ ಬಿದ್ದಿದ್ದರು.

ಬಿಎಚ್‌ಇಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಅನುಶಾ ಫೆ.18ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದಳು. ಅದಾದ ಬಳಿಕ ಆಕೆ ಯಾರ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಆಫೀಸ್‌ನಲ್ಲಿ ಕೆಲಸ ಇರಬಹುದು ಎಂದು ಸುಮ್ಮನಾಗಿದ್ದ ಪೋಷಕರು, ನಂತರ ಅನುಮಾನ ಬಂದು ಮತ್ತೆ ಮತ್ತೆ ಕರೆ ಮಾಡಿದಾಗ ಯಾವುದೇ ಪ್ರತ್ಯುತ್ತರ ಇರಲಿಲ್ಲ. ಹೀಗಾಗಿ ಪೋಷಕರು ಪತಿಗೆ ವಿಚಾರ ತಿಳಿಸಿದ್ದರು. ಕೂಡಲೇ ಸನತ್ ಮನೆಗೆ ಹೋಗಿ ಬೀಗ ಮುರಿದು ನೋಡಿದಾಗ ನೆಲದಲ್ಲಿ ಅನುಶಾ ಶವವಾಗಿ ಬಿದ್ದಿದ್ದಳು. ಇದರಿಂದ ಗಾಬರಿಗೊಂಡ ಸನತ್, ಅನುಶಾ ಪೋಷಕರಿಗೆ ವಿಷಯ ತಿಳಿಸಿದ್ದರು ಎನ್ನಲಾಗಿದೆ.

ವಿವೇಕ್, ಶೇರು ಮಾರ್ಕೆಟ್‌ನಲ್ಲಿ ಹಣ ಹೂಡಿದ್ದ. ಆದರೆ, ಅದರಲ್ಲಿ ಆತನಿಗೆ ನಷ್ಟ ಉಂಟಾಗಿತ್ತು. ಹಾಗಾಗಿ ಆತ ತನ್ನ ನಾದಿನಿ ಅನುಶಾ ಬಳಿ ಹಣ ಮತ್ತು ಬಿಡದಿ ಬಳಿ ಇರುವ ಮನೆ ನೀಡುವಂತೆ ಪೀಡಿಸುತ್ತಿದ್ದನು. ಆದರೆ ಅನುಶಾ ಇದಕ್ಕೆ ನಿರಾಕರಿಸಿದ್ದಾಳೆ. ಹೀಗಾಗಿ, ವಿವೇಕ್, ಥಾಯ್ ಹೇಲ್ ಎನ್ನುವವನ ಸಹಾಯ ಪಡೆದು ಕೊಲೆ ಮಾಡಿದ್ದಾನೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News