ನಮ್ಮದು ಕಾಮ್ ಕೀ ಬಾತ್: ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್

Update: 2019-02-20 17:24 GMT

ಬೆಂಗಳೂರು, ಫೆ.20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೈತ್ರಿ ಆಡಳಿತದ ಬಜೆಟ್ ಬೋಗಸ್ ಅಲ್ಲ. ‘ಬಿಜೆಪಿಯದ್ದು ಮನ್ ಕೀ ಬಾತ್ ಆದರೆ ನಮ್ಮದು ಕಾಂ ಕೀ ಬಾತ್’ ಆಗಿದ್ದು, ಬಜೆಟ್‌ನಲ್ಲಿ ಪ್ರಕಟಿಸಿರುವ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಭರವಸೆ ನೀಡಿದ್ದಾರೆ.

ಬುಧವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯ ಕೌನ್ಸಿಲ್ ಕಟ್ಟಡದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಬಿಬಿಎಂಪಿಯ 2019-20ನೇ ಸಾಲಿನ ಆಯವ್ಯಯ ಮೇಲಿನ ಚರ್ಚೆ ಆರಂಭಿಸಿದ ಅವರು, ಪ್ರಸಕ್ತ ಸಾಲಿನ ಬಿಬಿಎಂಪಿಯ ಬಜೆಟ್ ಬಡವರ, ಮಹಿಳೆಯರ ಹಾಗೂ ಜನಸ್ನೇಹಿ ಬಜೆಟ್ ಆಗಿದ್ದು, ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಅಲ್ಲದೆ, ನುಡಿದಂತೆ ಬಜೆಟ್‌ನ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಆರ್ಥಿಕ ಸುಧಾರಣೆ, ದಕ್ಷ ಆಡಳಿತ ಮತ್ತು ಉತ್ತಮ ಸೇವೆಯನ್ನು ಮಾಡಲಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಆಡಳಿತದ ಪಾಲಿಕೆಯ ಬಜೆಟ್ ನಗರದ ಜನರನ್ನು ಕತ್ತಲೆಯ ಕಡೆಗೆ ತಳ್ಳಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಅವರು, ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಎಲ್ಲ ವಾರ್ಡ್‌ಗಳಲ್ಲಿ ಡಯಾಲಿಸಿಸ್ ಕೇಂದ್ರ, ಬೈಕ್ ಆಂಬುಲೆನ್ಸ್ ಹಂತ ಹಂತವಾಗಿ ಹೆಚ್ಚಿಸುವುದು, ರಸ್ತೆಗಳ ಅಭಿವೃದ್ಧಿ ಪಾದಚಾರಿ ಮಾರ್ಗಗಳ ಅಭಿವೃದ್ಧಿ, 110 ಹಳ್ಳಿಗಳ ಅಭಿವೃದ್ಧಿ 172 ಕೋಟಿ ರೂ. ಗಳ ಅನುದಾನ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅನುದಾನವನ್ನು ಒದಗಿಸುವ ಮೂಲಕ ನಗರವನ್ನು ವಿಶ್ವದರ್ಜೆಯ ಮಟ್ಟಕ್ಕೆ ಏರಿಸಲಿದ್ದೇವೆ ಎಂದು ತಿಳಿಸಿದರು.

ಸಿಗ್ನಲ್ ಫ್ರೀ ಕಾರಿಡಾರ್ ರಸ್ತೆ, ಕೆರೆ ಅಭಿವೃದ್ಧಿ, ಐಟಿ-ಬಿಟಿ ಪ್ರದೇಶಗಳ ಅಭಿವೃದ್ಧಿ, ಅಲ್ಲದೇ ‘ಮಹಾಲಕ್ಷ್ಮೀ’ಯಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಇದು ಒಂದು ಜನಪರ ಬಜೆಟ್ ಆಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ನೀರಸ ಬಜೆಟ್ ಚರ್ಚೆ: ಬಿಬಿಎಂಪಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲಿಕೆ ಸದಸ್ಯರ ನಿರಾಸಕ್ತಿ ಎದ್ದು ಕಂಡಿದ್ದು, 198 ಸದಸ್ಯರ ಪೈಕಿ ಕೇವಲ 70 ಸದಸ್ಯರು ಮಾತ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. 10.30ಕ್ಕೆ ಆರಂಭವಾಗಬೇಕಿದ್ದ ಬಜೆಟ್ ಚರ್ಚೆ ತಡವಾಗಿ ಆರಂಭವಾಯಿತು. ಆದರೂ ಸಭೆಯಲ್ಲಿ ಸದಸ್ಯರ ಸಂಖ್ಯೆ 70 ಅನ್ನು ದಾಟಿರಲಿಲ್ಲ.

ಬಿಜೆಪಿ ಸರಕಾರದ ಅವಧಿಯಲ್ಲಿ ಅಡಮಾನ ಇಡಲಾಗಿದ್ದ 11 ಪಾಲಿಕೆ ಕಟ್ಟಡಗಳಲ್ಲಿ 6 ಕಟ್ಟಡಗಳನ್ನು ಈಗಾಗಲೇ ಬಿಡಿಸಿಕೊಳ್ಳಲಾಗಿದ್ದು, ಅದೃಷ್ಟಕ್ಕೆ ಬಿಜೆಪಿಯವರು ಕೌನ್ಸಿಲ್ ಕಟ್ಟಡವನ್ನು ಅಡಮಾನ ಇಡಲಿಲ್ಲ.

-ಅಬ್ದುಲ್ ವಾಜಿದ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News