ತೇಜಸ್ ಸೇರ್ಪಡೆಯಿಂದ ವಾಯು ಸೇನೆಯ ಸಾಮರ್ಥ್ಯ ದುಪ್ಪಟ್ಟಾಗಲಿದೆ: ಬಿಪಿನ್ ರಾವತ್
ಬೆಂಗಳೂರು, ಫೆ.21: ತೇಜಸ್ ಯುದ್ಧ ವಿಮಾನ ಭಾರತೀಯ ಸೇನೆಯ ಭಾಗವಾಗುತ್ತಿರುವುದರಿಂದ ವಾಯು ಸೇನೆಯ ಸಾಮರ್ಥ್ಯ ದುಪ್ಪಟ್ಟಾಗುತ್ತಿದೆ ಎಂದು ಭೂ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದರು.
ಗುರುವಾರ ಯಲಹಂಕ ವಾಯು ನೆಲೆಯಲ್ಲಿ ಆಯೋಜಿಸಿರುವ ಏರೋ ಇಂಡಿಯೋ-2019 ಪ್ರಯುಕ್ತ ಎಚ್ಎಎಲ್ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೇಜಸ್ ಯುದ್ಧ ವಿಮಾನದ ಸಾಮರ್ಥ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈವರೆಗೂ ತರಬೇತಿ ಯುದ್ಧ ವಿಮಾನವಾಗಿ ಬಳಕೆಯಾಗುತ್ತಿರುವ ತೇಜಸ್ಸನ್ನು ಈಗ ಸೇನೆಗೆ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಇಂದು ಪರಿಕ್ಷಾರ್ಥ ಹಾರಾಟ ಯಶಸ್ವಿಯಾಯಿತು. ಇದೊಂದು ಅದ್ಭುತವಾದ ಯುದ್ಧ ವಿಮಾನವಾಗಿದೆ. ತೇಜಸ್ನಲ್ಲಿ ಹಾರಾಟ ಮಾಡಲು ಅವಕಾಶ ಮಾಡಿಕೊಟ್ಟ ಎಚ್ಎಎಲ್ ಹಾಗೂ ಡಿಆರ್ಡಿಒ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು.
ತೇಜಸ್ ವಿಮಾನದ ಹಾರಾಟದ ಅನುಭವ ಅದ್ಭುತವಾಗಿತ್ತು. ಜೀವಮಾನದಲ್ಲಿ ಇದನ್ನು ಮರೆಯಲು ಸಾಧ್ಯವಿಲ್ಲ. ಶತ್ರುಗಳ ಸ್ಥಳಗಳ ಮೇಲೆ ನಿರ್ದಿಷ್ಟವಾಗಿ ಮತ್ತು ಕರಾರುವಾಕ್ಕಾಗಿ ದಾಳಿ ಮಾಡಲು ತೇಜಸ್ ಅತ್ಯಂತ ಸಮರ್ಥವಾಗಿದೆ. ಹಾರಾಟದ ವೇಳೆ ಪೈಲೆಟ್ ಅವರು ರೆಡಾರ್ನ ನಿಖರತೆಯನ್ನು ತೋರಿಸಿದರು. ಹೆಚ್ಚಿನ ಸ್ಟಂಟ್ಗಳನ್ನು ಮಾಡದೆ ಯುದ್ಧ ಪರಿಕ್ಷಾರ್ಥವಾಗಿ ಈ ವಿಮಾನವನ್ನು ಪರೀಕ್ಷಿಸಲಾಯಿತು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಡಿಆರ್ಡಿಒ ಅಧ್ಯಕ್ಷ ಸತೀಶ್ ರೆಡ್ಡಿ ಮಾತನಾಡಿ, ತೇಜಸ್ಗೆ ಸುರಕ್ಷತಾ ಪ್ರಮಾಣಪತ್ರ ಲಭ್ಯವಾಗಿದೆ. ಇದರ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಶೀಘ್ರವೇ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ ಎಂದರು.