ಜನಪ್ರತಿನಿಧಿಗಳಿಗೆ ಜನರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸಿಲ್ಲ: ರಂಗಕರ್ಮಿ ಪ್ರಸನ್ನ

Update: 2019-02-23 17:38 GMT

ಬೆಂಗಳೂರು, ಫೆ.23: ಆಳುತ್ತಿರುವ ಜನಪ್ರತಿನಿಧಿಗಳಿಗೆ ಸಾಮಾನ್ಯ ಜನರ ಕಷ್ಟಗಳು ಅರಿವಿದ್ದರೂ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಿಲ್ಲ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಬೇಸರ ವ್ಯಕ್ತಪಡಿಸಿದರು.

ಶನಿವಾರ ನಗರದ ಗಾಂಧಿ ಭವನದಲ್ಲಿ ಗ್ರಾಮ ಸೇವಾ ಸಂಘ, ‘ಮದ್ಯ ನಿಷೇಧ ಆಂದೋಲನ ಕರ್ನಾಟಕ’ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಆಯೋಜಿಸಿದ್ದ ‘ಮದ್ಯವ್ಯಸನ ಒಂದು ಸಾಮಾಜಿಕ ಪಿಡುಗು’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರಕಾರಗಳಿಗೆ ಜನಸಾಮಾನ್ಯರ ಸಮಸ್ಯೆಗಳು, ಕಷ್ಟಕಾರ್ಪಣ್ಯಗಳ ಅರಿವಿದ್ದರೂ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಇಚ್ಛಾಶಕ್ತಿ ಇಲ್ಲ. ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದನ್ನೂ ವ್ಯಾಪಾರಿ ಮನೋಭಾವದಿಂದ ನೋಡಲಾಗುತ್ತಿದೆ. ನಮ್ಮನ್ನಾಳುವ ಸರಕಾರಗಳಿಗೆ ಜನರ ಸಮಸ್ಯೆಗಳು ಅರಿವಿದ್ದರೂ ಏನು ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತಿದ್ದಾರೆ ಎಂದು ವಿಷಾಧಿಸಿದರು.

ಮದ್ಯ ವ್ಯಸನ ಸಾಂಸ್ಕೃತಿಕ ಹಾಗೂ ಸಾಂಸಾರಿಕ ಪಿಡುಗು. ಇಂತಹ ಸಾಮಾಜಿಕ ಸಮಸ್ಯೆಗಳನ್ನು ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳ ಹತ್ತಿರ ತೆಗೆದುಕೊಂಡು ಹೋಗುವ ಮುಂಚೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಪಟ್ಟಣ, ನಗರ ಪ್ರದೇಶದ ಹೆಣ್ಣು ಮಕ್ಕಳು ಸಾಮಾಜಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. ಮದ್ಯವ್ಯಸನದಿಂದ ಆಗುವ ಅನಾನುಕೂಲಗಳ ಬಗ್ಗೆ ಅರಿತು, ಮದ್ಯ ನಿಷೇಧ ಆಂದೋಲನವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕೆಂಬ ನಿಟ್ಟಿನಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.

ರಂಗಕರ್ಮಿ ಹಾಗೂ ನಟಿ ಅರುಂಧತಿ ನಾಗ್ ಮಾತನಾಡಿ, ನಾಟಕ, ಸಿನಿಮಾ ಜನರಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಬೇಕು, ಆದರೆ ಇಂದು ಪ್ರಸಿದ್ಧ ಚಲನಚಿತ್ರ ನಾಯಕರ ಚಿತ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುವ ಧೂಮಪಾನ, ಮದ್ಯಪಾನ ದೃಶ್ಯಗಳು ಯುವಜನತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಇಂತಹ ದೃಶ್ಯಗಳಿಗೆ ಕತ್ತರಿ ಹಾಕುವತ್ತ ಸೆನ್ಸಾರ್ ಮಂಡಳಿ ಗಮನಹರಿಸಬೇಕು ಎಂದರು.

ನಿವೃತ್ತ ಡಿಜಿಪಿ ಡಾ.ಅಜಯ್‌ ಕುಮಾರ್ ಸಿಂಗ್, ಕುಡಿತ ಸಮಾಜದಲ್ಲಿ ಗಂಭೀರವಾದ ಸಮಸ್ಯೆ. ಈ ವ್ಯಸನ ಭ್ರಷ್ಟಾಚಾರದಂತೆ. ಆದರೆ, ಕೆಲವರು ಮದ್ಯಪಾನ ಮಾಡದಿದ್ದರೆ ಅವಮಾನವೆಂಬಂತೆ ಭಾವಿಸುತ್ತಾರೆ. ಮನೋವಿಜ್ಞಾನಿಗಳು, ಸಮಾಜಶಾಸ್ತ್ರಜ್ಞರು, ನೀತಿ ನಿರೂಪಕರು ಸೇರಿದಂತೆ ಎಲ್ಲರೂ ಮದ್ಯಪಾನ ನಿಷೇಧ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾನೂನು ತಜ್ಞೆ ವೀಣಾ ಟೊಣಪಿ, ನಿಮ್ಹಾನ್ಸ್ ಮನೋಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಪ್ರತಿಮಾ ಮೂರ್ತಿ, ಹಸಿರು ದಳ ಸಹ ಸಂಸ್ಥಾಪಕಿ ನಳಿನಿ ಶೇಖರ್, ವಿಧಾನ ಪರಿಷತ್‌ನ ಮಾಜಿ ಉಪ ಸಭಾಪತಿ ಬಿ.ಆರ್.ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News