ಕುವೆಂಪು ಸಾಹಿತ್ಯದಲ್ಲಿ ಯುದ್ಧ

Update: 2019-02-23 19:22 GMT

ಯುದ್ಧವನ್ನು ದೂಷಿಸುವ ಗ್ರೀಕ್‌ನ ಮಹಾಕವಿ ‘ಹೋಮರ್’ ಯುದ್ಧವನ್ನೇ ಕುರಿತು ಎರಡು ಮಹಾ ಕಾವ್ಯಗಳ ಬರೆದ. ಇಲಿಯಡ್ ಮತ್ತು ಒಡೆಸ್ಸಿಗಳು ಪ್ರಪಂಚದ ಬಾಹ್ಯಬದುಕಿನ ದಿಗಂತಗಳು.

ಹೋಮರ್ ಹೇಳಿದಂತೆ ‘‘ಯುದ್ಧವೆಂಬುದು ಮನುಷ್ಯ ಪ್ರಾಣಿಗಳಿಗೆ ಸಂಬಂಧಿಸಿದ್ದಲ್ಲ, ಇದು ಸಮನ್ವಯ ಜೀವನ ದ ಸಂಕೇತವಾಗಬೇಕೇ ಹೊರತು, ಕೊಲ್ಲುವ ಅಮಾನವೀಯ ಕೃತ್ಯ ಗಳಿಗೆ ಮನುಷ್ಯ ಕೈ ಹಾಕಬಾರದು’’ ಎಂದು ಹೇಳಿದವನು ಮತ್ತೆ ಯಾಕೆ ಯುದ್ಧದ ಮಹಾಕಾವ್ಯಗಳನ್ನೆ ಬರೆದ? ಎಂದು ಗ್ರೀಕ್ ಸಾಹಿತ್ಯದಲ್ಲಿ ಒಂದು ವೈಚಾರಿಕ ಸಾಹಿತ್ಯ ಚರ್ಚೆಯೇ ಆಯ್ತು. ಕೆಲವರು ಹೋಮರ್ ನ ಕೃತಿಗಳನ್ನು ಸುಟ್ಟು ಹಾಕಿ ಎಂದರು, ಕೆಲವರು ಹೋಮರ್‌ನ ಸಾಹಿತ್ಯ ವನ್ನು ಒಪ್ಪಲಿಲ್ಲ. ಇದು ಅಥೆನ್ಸ್ ನಗರ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ನಡೆದ ಸಂಗತಿ . ಮುಂದೆ ಪ್ಲೇಟೋ ಸೈದ್ಧಾಂತಿಕವಾಗಿ ಪ್ರತ್ಯುತ್ತರವನ್ನು ಕೊಡಲು ಮುಂದಾದ. ಆ ಕಾಲದ ಆಯೋನಿಯನ್ ದಾರ್ಶನಿಕರು ಹಾಗೂ ಪ್ರಬುದ್ಧ ವಿಮರ್ಶಕರೆಲ್ಲ ಹೋಮರ್‌ನ ಸಾಹಿತ್ಯವನ್ನು ಟೀಕಿಸಿದರು.

ಪ್ಲೇಟೋ ‘‘ತತ್ವ ಮತ್ತು ಮಹಾಕಾವ್ಯಗಳ ನಡುವಿನ ಬಹುಕಾಲದ ಜಗಳ’’ ಎಂದು ಗ್ರೀಕ್‌ನ ಸಾಹಿತ್ಯವನ್ನು ತೆಗಳಿದ.

ಹೋಮರ್‌ನ ಪ್ರಾರ್ಥನೆಯಿದು ‘‘ಲೋಕದಿಂದ ಯುದ್ಧ ತೊಲಗಲಿ’’ ಎಂದು ಹೇಳಿದವನು ಅದ್ಹೇಗೆ ಯುದ್ಧಗಳ ಕುರಿತು, ಮತ್ತೆ ಅದರ ಸಾವು, ನೋವು, ದುಃಖಗಳ ನಡುವೆ ಕಾವ್ಯ ಕಟ್ಟಿ ಬರೆದ ಎಂದು ಕ್ರಿ.ಪೂ.ಆರನೆಯ ಶತಮಾನದಲ್ಲಿ ಹೋಮರ್‌ನ ಕಾವ್ಯಗಳು ವಿವಾದಕ್ಕೆ ಸೃಷ್ಟಿಯಾದವು.

ನನ್ನ ಪ್ರಕಾರ ಹೋಮರ್ ಒಬ್ಬ ಬೌದ್ಧಿಕ ಹಿನ್ನೆಲೆಯ ಕವಿಯಲ್ಲ ಮಹಾ ಕವಿ. ಒಂದು ಕಡೆ ಪ್ರಕೃತಿಯನ್ನು ಆರಾಧಿಸುತ್ತಾನೆ, ಮತ್ತೊಂದು ಕಡೆ ಮಾನವೀಯ ಮೌಲ್ಯಗಳನ್ನು ಹೇಗೆ ಉಳಿಸಿಕೊಳ್ಳಬೇಕೆಂದು ಆಧ್ಯಾತ್ಮಿಕ ನೆಲೆಯಲ್ಲಿ ಹುಡುಕಲು ಶುರುಮಾಡಿದ ತತ್ವಜ್ಞಾನಿಯೇ ಇರಬಹುದು,ಆದರೆ ಯುದ್ಧವನ್ನು ತಿರಸ್ಕರಿಸಿದ ಹೋಮರ್ ಮತ್ತೆ ಯುದ್ಧಗಳ ಬಗ್ಗೆ ಏಕೆ ಕಾವ್ಯಗಳನ್ನು ರಚಿಸಿದ ಎಂದರೆ ಅದರ ಜಾಗೃತಿ ಮೂಡಿಸಲು.

ಯುದ್ಧದಿಂದ ಆಗುವ ಪರಿಣಾಮಗಳು ಹಾಗೂ ಪ್ರಕೃತಿ ಅವನತಿ ಯ ಬಗ್ಗೆ ಎಚ್ಚರ ವಹಿಸಲು ಇವನ ಎರಡು ಮಹಾ ಕಾವ್ಯಗಳು ಬಹು ಮುಖ್ಯವಾಗಿವೆ.

ಇದನ್ನು ಗ್ರೀಕ್ ವಿದ್ವಾಂಸರು ಜೀರ್ಣಿಸಿಕೊಳ್ಳಲು ಕಾಲಾವಕಾಶವೇ ಬೇಕಾಯಿತು. ಹೋಮರ್ ತನ್ನ ಬದುಕಿನುದ್ದಕ್ಕೂ ಯುದ್ಧವನ್ನು ನಿರಾಕರಿಸಿ ನಿಂತವನು, ಅವನ ಕಾವ್ಯದಲ್ಲೂ ಕೂಡ ಯುದ್ಧದಿಂದ ಆಗುವಪರಿಣಾಮಗಳನ್ನು ಗುರುತಿಸಿ ಮುಂದೆ ಮನುಷ್ಯಕುಲಕ್ಕೆ ಯುದ್ಧಗಳು ಬೇಡ, ಶಾಂತಿ, ಸಹನೆ, ಮಮತೆ, ಐಕ್ಯತೆ, ಸಮಬಾಳು, ಸಮನ್ವಯ ಗಳೇ ಅವನ ಕಾವ್ಯಗಳ ಉದ್ದೇಶಗಳಾಗಿದ್ದವು.

ಹೋಮರ್, ಪ್ಲೇಟೋ, ಅರಿಸ್ಟಾಟಲ್, ಷೆಲ್ಲಿ, ವರ್ಡ್ಸ್‌ವರ್ತ್, ಕೋಲ್ ರಿಜ್, ಟಿ ಎಸ್ ಎಲಿಯಟ್, ಜಾನ್ ಕಿಟ್ಸ್, ಥಾಮಸ್ ಹಾರ್ಡಿ, ಟಾಲ್ ಸ್ಟಾಯ್, ಗಿಬ್ಸನ್ ಮುಂತಾದವರು ಯುದ್ಧದ ಪ್ರಮೇಯಗಳು ಮತ್ತು ಸಿದ್ಧಾಂತಗಳ ಬಗ್ಗೆ ತಮ್ಮ ಸಾಹಿತ್ಯದಲ್ಲಿ ಅರಿವಿನ ಪ್ರಜ್ಞೆಯೊಂದಿಗೆ ತೋರಿಸಿದ್ದಾರೆ. ಹಾಗೆ, ಭಾರತೀಯ ಕವಿಗಳಲ್ಲಿ ಪ್ರಮುಖರಾದ ರಾಷ್ಟ್ರಕವಿ ಕುವೆಂಪು ಅವರ ಯುದ್ಧ ನಿಲುವು ಕೂಡ ವಿಭಿನ್ನವಾಗಿತ್ತು. ಋಷಿಯಲ್ಲದವನು ಕವಿಯಾಗಲಾರನೆಂಬ ಪುರಾತನ ನಂಬಿಕೆ ಯಿದೆಯಷ್ಟೇ, ಅದನ್ನು ಸಂಪಾದಿಸಿದ ಪ್ರಮೇಯ ಕುವೆಂಪು ಅವರ ಸಾಹಿತ್ಯದಲ್ಲಿ ಮನಗಾಣಬಹುದು. ಕಾವ್ಯತಪಸ್ಸಿನೊಂದಿಗೆ, ಸತತ ವೈಚಾರಿಕ ಚಿಂತನೆಗಳ ಬೆನ್ನೇರಿ ಹೊರಟವರು ಕುವೆಂಪು.

‘‘ತಾಯ ಮೊಲೆಯಂದದಲಿ ತೋರ್ಪವಳ ಕಬ್ಬಿಣದ ಹೇರದೆಯ ಕೆಚ್ಚಲನು ಬಾಯ್ಗಿಟ್ಟು, ತುಟಿ ಹರಿದು ರಕ್ತ ಸೋರುವ ನಮ್ಮನೊಲಿದು ಕಾಪಾಡಯ್ಯ!

ಭಾರತಿಯ ಮಕ್ಕಳಾಯುವ ರಕ್ಷಿಸಯ್ಯ!’’

(ರಾಷ್ಟ್ರಕವಿ ಕುವೆಂಪು, ದೇಜಗೌ, ಪುಟ 350)

ಎಂದು ಕುವೆಂಪು ಭಾರತಾಂಬೆಯನ್ನು ಪ್ರಾರ್ಥಿಸಿದ್ದಲ್ಲದೆ ಭಾರತದ ರಾಜಕೀಯ ವ್ಯವಸ್ಥೆಯನ್ನು ಕುರಿತು ತೆಗಳಿದರು. ಕುವೆಂಪು ರಾಜಕೀಯದ ಅನಿಷ್ಟ ಸಂಕೋಲೆಗಳಿಗೆ ಸಿಕ್ಕಿದವರಲ್ಲ. ನೇರ, ದಿಟ್ಟ, ನಿಷ್ಟೆಯಿಂದ ಹೇಳಲು ಮುಂದಾದವರು.

ಕುವೆಂಪು ಅವರಿಗೆ ಯುದ್ಧದ ಬಗ್ಗೆ ಅರಿವು ಮತ್ತು ಪರಿಪೂರ್ಣ ಪ್ರಜ್ಞೆ ಯೂ ಕೂಡ ಇತ್ತು. ಜಾತಿ, ಧರ್ಮ, ಮತಗಳ ಆಚೆ ಬನ್ನಿ ಎಂದು ತಮ್ಮ ಸಾಹಿತ್ಯದ ಮೂಲಕ ಕೂಗಿಕೊಂಡವರು.ಕೌಟುಂಬಿಕ ರಾಜಕಾರಣ, ಆರ್ಥಿಕ ರಾಜಕಾರಣ, ರಾಜಕೀಯ ರಾಜಕಾರಣ, ಪ್ರಭುತ್ವ ರಾಜ ಕಾರಣ, ಜಾತಿ ರಾಜಕಾರಣ, ಅಧಿಕಾರದ ರಾಜಕಾರಣ, ಧರ್ಮೀಯ ರಾಜ ಕಾರಣ ಮುಂತಾದ ಅನಿಷ್ಟ ರಾಜಕಾರಣಗಳ ಬಗ್ಗೆ ಕುವೆಂಪು ಅವರಲ್ಲಿ ತಿರಸ್ಕಾರ ಮನೋಭಾವವಿತ್ತು .

‘‘ಸರ್ವ ಜನಾಂಗದ ಶಾಂತಿಯ ತೋಟ,

ರಸಿಕರ ಕಂಗಳ ಸೆಳೆಯುವ ನೋಟ

ಹಿಂದೂ ಕ್ರೈಸ್ತ ಮುಸಲ್ಮಾನ

ಪಾರಸಿಕ ಜೈನರುದ್ಯಾನ’’

ಎಂದು ಭಾರತೀಯ ಐಕ್ಯತೆಯೊಂದಿಗೆ ಸಹಬಾಳ್ವೆಯ ಬಗ್ಗೆ ವಿವರಿಸಿದರು.

"The man he killed,

'yes' quaint and curious war is!

You shoot a fellow down

You'd treat if met where any

Bar is!

Or help to half a crown!''

 -Thomas hardy

ಥಾಮಸ್ ಹಾರ್ಡಿ ಯುದ್ಧವನ್ನು ಕುರಿತು ಬರೆದ ಪದ್ಯ ನೆನಪಾ ಗುತ್ತದೆ. ಕುವೆಂಪು ಅವರ ವಿಚಾರ ದೃಷ್ಟಿಕೋನಗಳು ವಿಭಿನ್ನ ಹಾಗೂ ವಿಶ್ವಪ್ರಜ್ಞೆಯ ವೈಚಾರಿಕ ವಿಶಾಲಕೋನಗಳು.

ಯುದ್ಧದ ಅರಿವಿನೊಂದಿಗೆ ಮನುಷ್ಯನ ಸ್ವಾರ್ಥ ಮತ್ತು ಅಧಿಕಾರದ ರಾಜಕೀಯವನ್ನು ಸಹ ಗಮನಿಸಿದವರು.

‘‘ಮರ್ತ್ಯಜೀವನದ ತಾಟಸ್ಥಮಂ ಕಡೆಕಡೆದು ಶ್ರದ್ಧೆ ಸಂದೇಹಗಳನಿರದೆ ಹೊಡೆದೆಬ್ಬಿಸುವ ಮೇಣ್ ಜನತಂ ಜನತೆಯೊಳ್ ಪಕ್ಷಪಕ್ಷಂಗಳಂ

ಕೆರಳಿಸುವ ಶತಶತ ಮತಂಗಳುಂ ತಾಮಲ್ಲಿ ರಾರಾಜಿಸಿದುವಗ್ನಿವರ್ಣದ ವೃಕಂಗಳೋಲ್ ಜೋಲ್ವ ಜಿಹ್ವೆಯೊಳತಿ ಭಯಾನಕಂ!

 (-ಶ್ರೀರಾಮಾಯಣದ ದರ್ಶನಂ)

ಕುವೆಂಪು ಕೂಡ ಹೋಮರ್‌ನಂತೆ ಯುದ್ಧದ ಪರಿವೇಷ್ಟೀತವನ್ನು ಕುರಿತು ಆಲೋಚಿಸಿಯೇ ಬರೆದವರು. ಯುದ್ಧ ಹೇಗೆ ಮನುಷ್ಯ ಕುಲಕ್ಕೆ ನಾಶವೋ ಹಾಗೇ ಅದರ ಹಿನ್ನೆಲೆಯ ರಾಜಕೀಯವೂ ಕೂಡ ದುರಂತ ಎಂಬುದನ್ನು ಗಮನದಲ್ಲಿಟ್ಟುಕೊಂಡವರು.

‘‘ಅದೋ ನೋಡಿ, ರಶ್ಯಾ ಜಪಾನು ತುರ್ಕಿಗಳೆಲ್ಲ,

ಪರೆಗಳಚಿ ಹೊರಟಿಹವು ಹೊಸ ಪಯಣಕೆ ಬೆಳಗಿಹವು ನೆತ್ತರೆಣ್ಣೆಯ ತಿಳಿವಿನುರಿಯಲ್ಲಿ ಕಿಚ್ಚಿಟ್ಟು ಹಳೆಕೊಳಕು ಬಣಗು ತೃಣಕೆ.

ಓ ಬನ್ನಿ, ಸೋದರರೆ, ರಾಷ್ಟ್ರರಣಕೆ!’’

ಸಿಲುಕದಿರಿ ಮತವೆಂಬ ಮೋಹದ ಜ್ಞಾನಕ್ಕೆ

ಮತಿಯಿಂದ ದುಡಿಯಿರೈ ಲೋಕಹಿತಕೆ.

ಆ ಮತ, ಈ ಮತ ಹಳೆಮತದ ಸಹವಾಸ

ಸಾಕಿನ್ನು ಸೇರಿರೈ ಮನುಜ ಮತಕೆ.

ಓ, ಬನ್ನಿ ಸೋದರರೆ ವಿಶ್ವಪಥಕೆ!’’

ಎಂದು ಭಾರತೀಯ ಯುವಕರನ್ನು ಮತ, ಧರ್ಮಗಳ ರಾಜಕೀಯ ದ ದಾಳದಿಂದ ಹೊರ ಬನ್ನಿ ಎಂದು ಎಚ್ಚರಿಸಿದವರು.

ಅವರ ಎರಡು ಕಾದಂಬರಿಗಳಲ್ಲಿ ನಡೆಯುವ ಕೌಟುಂಬಿಕ ಹಾಗೂ ಬಂಡವಾಳಶಾಹಿ ರಾಜಕೀಯದ ಯುದ್ಧವನ್ನು ಕೂಡ ಒಂದು ಸೈದ್ಧಾಂತಿಕ ನೆಲೆಯಿಂದ ಸ್ಪಷ್ಟಪಡಿಸಿರುವುದನ್ನು ಕಾಣಬಹುದು.

ಅಲ್ಲಿನ ಪಾತ್ರಗಳು ಕೂಡ ವಾಸ್ತವ ಮತ್ತು ಬೌದ್ಧಿಕ ಸ್ಥಿರತೆಯಿಂದ ಕೂಡಿದರು ಕೂಡ ಕುಟುಂಬಗಳಲ್ಲಿ ನಡೆಯುವ ಯುದ್ಧಗಳನ್ನು ಮನೋ ದೃಷ್ಟಿಯಲ್ಲಿ ಚಿತ್ರಿಸಿದವರು. ಕುಟುಂಬ ಎಂದರೆ ಬರೀ ಒಂದು ಮನುಷ್ಯ ಕುಟುಂಬವಲ್ಲ! ಪ್ರಾಣಿ, ಪಕ್ಷಿ, ಪ್ರಕೃತಿಗಳಲ್ಲಿ ನಡೆಯುವ ಯುದ್ಧಗಳನ್ನು ಕೂಡ ಕುವೆಂಪು ಇವರ ಕಾವ್ಯಗಳಲ್ಲಿ ಬಿಂಬಿಸಿರುವುದನ್ನು ಕಾಣಬ ಹುದು. ಯುದ್ಧವೆಂಬುದು ಮನುಷ್ಯಕುಲಕ್ಕೆ ಅಲ್ಲದೆ ಹೇಗೆ ಪ್ರಕೃತಿಯ ವಿನಾಶಕ್ಕೆ ಕಾರಣ ಎಂಬುದನ್ನು ಕುವೆಂಪು ಹಲವಾರು ಕವಿತೆಗಳ ಮೂಲಕ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಮನುಷ್ಯನ ಲಾಲಸೆಯಿಂದ ಉಂಟಾಗುವ ಈ ಯುದ್ಧಗಳು ಹೇಗೆ ಸಮಾಜಮುಖಿಯಾಗಿ ಯಾರಿಗೆ ಯಾರಿಂದ ಲಾಭ ಪಡೆಯುತ್ತವೆ ಹಾಗೂ ಅದರ ಉದ್ದೇಶ ಮತ್ತು ಉಪಯೋಗಗಳನ್ನು ಹೇಗೆ ರಾಜಕೀಯ ಸೃಷ್ಟಿಸುತ್ತದೆ ಎಂಬುದನ್ನು ಕುವೆಂಪು ಯುದ್ಧದ ಪ್ರಜ್ಞೆ ಯೊಂದಿಗೆ ಶ್ರೀರಾಮಾಯಣ ದರ್ಶನಂನಲ್ಲಿ ಬರುವಂತಹ ಯುದ್ಧ ಸನ್ನಿವೇಶಗಳನ್ನು ಮಹಾಕಾವ್ಯದಲ್ಲಿ ವಿರಾಟ್ ದರ್ಶನದ ಮೂಲಕ ತಿಳಿಸಿದ್ದಾರೆ.

‘‘ರಸಜೀವನಕೆ ಮಿಗಿಲ ತಪಮಿಹುದೆ?

ರಸಸಿದ್ಧಿಗಿಂ ಮಿಗಿಲೆ ಸಿದ್ಧಿ, ಪೊಣ್ಮದೆ ಸೃಷ್ಟಿ

ರಸದಿಂದೆ, ಬಾಳುತಿದೆ ರಸದಲ್ಲ, ರಸದೆಡೆಗೆ

ಪರಿಯಿತಿದೆ, ಪೊಂದುವುದು ರಸದೊಳೈಕ್ಯತೆವೆತ್ತು ತುದಿಗೆ

ರಸಸಾಧನಂ ಗೈಯ್ಯದಿರುವುದೆ ಮೃರ್ತ್ಯು,

ಆನಂದರೂಪಮಮೃತಂ ರಸಂ!.’’

 ಎಂದು ಪರಿಪೂರ್ಣತೆಯ ಮನುಷ್ಯನ ಆಗಮಿಕ ದಾರಿಯೊಂದಿಗೆ ಕಾವ್ಯ ದೃಷ್ಟಿ ಇಲ್ಲಿ ವಿಭಿನ್ನ ಹಾಗೂ ರಸ ಜೀವನದ ಚೌಕಟ್ಟನ್ನು ಕಟ್ಟಿಕೊಡುತ್ತಾರೆ.

ಕೊಲ್ಲುವುದು ಮತ್ತು ಹಿಂಸಿಸುವುದು ಮನುಷ್ಯನ ಪ್ರಜ್ಞಾರೂಪಕತೆಗೆ ಸಮಾನವಲ್ಲ. ಮನುಷ್ಯ ಏನಿದ್ದರೂಪ್ರೀತಿಯ ರಸದೊಂದಿಗೆ ಬದುಕಬೇಕು, ಇಲ್ಲದಿದ್ದರೆ ಅದು ಸಾವು ಎಂದು ಕುವೆಂಪು ತಿಳಿಸುತ್ತಾರೆ.

‘‘ಸತ್ತಂತಿಹರನು ಬಡಿದೆಚ್ಚರಿಸು ಕಚ್ಚಾಡುವರನು ಕೂಡಿಸಿ ಒಲಿಸು.

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು,

ಒಟ್ಟಿಗೆ ಬಾಳುವ ತೆರದಲಿ ಹರಸು!’’

ಎನ್ನುವ ಕವಿತೆಯ ಸಾಲುಗಳಲ್ಲಿ ಒಂದು ಪ್ರಜ್ಞಾ ಪೂರ್ವಕ ಸಂಬಂಧದ ನಡುವೆ ಜಾಗೃತಿಯ ಮೂಡಿ ಸುವ ಕತೆಯಿದೆ. ಧರ್ಮಾಂಧರಾಗಿ ರುವವರನ್ನು, ಜಾತೀಯತೆಯಿಂದ ಕೂಡಿರುವವರನ್ನು, ಶೋಷಣೆ ಯಿಂದ ಬದುಕುತ್ತಿರುವ ಜನಾಂಗವನ್ನು, ಅಧಿಕಾರದ ಮದದಿಂದ ಮೆರೆಯುತ್ತಿರುವ ಅಧಿಕಾರಿಗಳನ್ನು ಎಚ್ಚರಿಸುವ ಸಂಕೇತದಿಂದ ಒಂದು ವೈಜ್ಞಾನಿಕ ದೈವತ್ವ ದೊಂದಿಗೆ ಗುರುವಿನ ಆರ್ಶೀವಾದದೊಂದಿಗೆ ಯಾವು ದೇ ಭೇದ -ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಬಾಳು ವಂತೆ ಹರಸು ಎನ್ನುವುದು ಕವಿಯ ಕೋರಿಕೆಯಾಗಿದೆ.

‘‘ಶ್ರೀಮಂತರಿರಲಿಲ್ಲ, ಶ್ರೀಮಂತರೇ ಎಲ್ಲ!

ಆಳ್ವರಸರಲ್ಲಿಲ್ಲ, ಅರಸರೇ ಆಳ್ಗಳೆಲ್ಲ ಹೆಚ್ಚು ಕಡಮೆಗಳಿಲ್ಲ, ಮೇಲು ಕೀಳುಗಳಿಲ್ಲ,

ಕೆಲಸವಿಲ್ಲದ ಅರಸಗಾರನಿಗೆ ಅಲ್ಲಿ ಕೂಳಿಲ್ಲ

ಕೆಲಸವೆಂದರೆ ಉಸಿರು! ಕೆಲಸವೇ ಬಾಳೆಲ್ಲ

ಆಳು ತನಗಾಗಿ ತಾ ದುಡಿಯಬಾರದು ಅಲ್ಲಿ ದುಡಿಮೆಯನಿಬರಿಗಾಗಿ ,ತಾನೊಬ್ಬನನಿಬರಲ್ಲಿ

ಸರ್ವಮನುಜರಿಗಾಗಿ, ಸೃಷ್ಟಿ

ಎಂಬ ಸಮದೃಷ್ಟಿ!-

ಎಲ್ಲವರ ಸುಖಕಾಗಿ ಗೆಯ್ಯಬೇಕಲ್ಲ ಆದರೂ ಸುಖಿಗಳೆನಗೊಬ್ಬರೂ ಕಾಣಲಿಲ್ಲ !?’’

ಎನ್ನುವ ಕನಸಿನ ರೂಪಕದ ಕವಿತೆಯೊಳಗೆ ಕವಿ ಪ್ರವೇಶ ಪಡೆದು ಕೋಗಿಲೆ ಮತ್ತು ಸೋವಿಯತ್ ರಶ್ಯಾ ಕವಿತೆಯಲ್ಲಿ ಔಚಿತ್ಯಪೂರ್ಣದ ದೇಶದ ಚಿಂತನೀಯ ಸಂಘರ್ಷಗಳನ್ನು ಬಿಚ್ಚಿಡುತ್ತಾರೆ.

ಸ್ಮಶಾನ ಕುರುಕ್ಷೇತ್ರಂ ನಾಟಕದಲ್ಲಿ ಕುವೆಂಪು ಅವರು ಹೇಳಿದಂತೆ ‘‘ಇದೊಂದು ಪ್ರತಿಮಾಸೃಷ್ಟಿ, ಯುದ್ಧದ ದುರಂತತೆ, ಅನ್ಯಾಯ, ಕ್ರೌರ್ಯ, ವಿನಾಶನ, ಅವಿವೇಕ, ದುರ್ಲಂಘ್ಯ, ವಿಧಿ, ಸರ್ವವಿಫಲತೆ, ಸಂಸ್ಕೃತಿಯ ಸಾವು - ಇದಕ್ಕೆ ಪ್ರತಿಮೆ. ಒಂದೊಂದು ಯುದ್ಧವೂ ಪ್ರಾರಂಭವಾಗುವಾಗ ಅದು ಯುದ್ಧವನ್ನೆ ಕೊನೆಗಾಣಿಸುವ ಜಗತ್ತಿನ ಕೊನೆಯ ಅನಿವಾರ್ಯ ಸಂಕಟವೆಂದು ಸಾರುತ್ತದೆ. ಅನ್ಯಾಯವೆಲ್ಲ ತೊಲಗಿ ನ್ಯಾಯ ಸ್ಥಾಪನೆಯಾಗುವುದೆಂದು ಭಾವಿಸುತ್ತೇವೆ. ಕಲಿ ಹೋಗಿ ಕೃತಯುಗ ಪ್ರಾರಂಭವಾಗುತ್ತದೆಂದು. ಆದರೆ? ಮತ್ತೆ ! ವಿಶೇಷತೆಗಾಗಿ ಸಾಮಾನ್ಯರ ಆಹುತಿ. ಸಂಸ್ಕೃತಿ ನಾಗರಿಕತೆ ಪ್ರಗತಿ ಎಲ್ಲ ಸ್ಮಶಾನ ರುದ್ರನ ಮೆಯ್ಗೆ ಭಸ್ಮಲೇಪನವಾಗುತ್ತದೆ!’’ ಎಂದು ನಾಟಕದ ಮುನ್ನುಡಿಯಲ್ಲಿ ಕುವೆಂಪು ತಿಳಿಸಿದ್ದಾರೆ.

ಕುವೆಂಪು ಸಾಹಿತ್ಯದಲ್ಲಿ ಯುದ್ಧದ ಪರಿಕಲ್ಪನೆ ಜಾಗತಿಕ ಹಾಗೂ ಜಾಗೃತಿಯ ಸೃಷ್ಟಿಕಾವ್ಯವಾದರೂ ಕೂಡ ಅದರಲ್ಲಿ ಕೌಟುಂಬಿಕ ಯುದ್ಧಗಳಿವೆ, ಅಧಿಕಾರ ದ ರಾಜಕೀಯ ಯುದ್ಧಗಳಿವೆ. ಸಾಮಾಜಿಕ ತಲ್ಲಣ ಗಳ ಯುದ್ಧಗಳಿವೆ, ಯುವ ಪೀಳಿಗೆಯ ಮನೋಭಾವನೆ ಗಳ ಯುದ್ಧಗಳಿವೆ, ಪುರಾಣಗಳೊಂದಿಗೆ ಬೆರತ ಐತಿಹ್ಯ ಯುದ್ಧಗಳಿವೆ, ಹಾಗೂ ಕೋಮುವಾದದ ಅರಿವಿನ ಒಳಯುದ್ಧಗಳಿವೆ, ಮಾನಸಿಕ ಸ್ತ್ರೀ ಸಂವೇದನೆಗಳ ಯುದ್ಧಗಳಿವೆ ಹೀಗೆ ಯುದ್ಧ ಎಂಬುದು ಒಂದು ಪ್ರತಿಮೆಯ ಮೂಲಕ ಹೆಣೆಯುವ ವಾಸ್ತವ ಮತ್ತುನೈಜತೆಯಲ್ಲಿ ಅಡಗಿರುವ ಮನುಷ್ಯನ ಸ್ವಾರ್ಥ ದೊಂದಿಗೆ ಹೇಗೆ ಗಡಿಗಳು ಬೇರ್ಪಟ್ಟವು, ಸಂಕೋಲೆ ಗಳು ಕಟ್ಟು ಬಿದ್ದವು, ವಿಶ್ವಮಾನವನ ಕಲ್ಪನೆಯ ಮರೆತುಅಲ್ಪಮಾನವನ ಸ್ಥಿತಿಗೆ ತಲುಪಿದ ಅಮಾನವೀಯ ಮನುಷ್ಯನ ಕೃತ್ಯಗಳು ಕುವೆಂಪು ಸಾಹಿತ್ಯದಲ್ಲಿ ನೋಡ ಬಹುದು.

ಒಟ್ಟಾರೆ, ಕಿಂದರಿಜೋಗಿಯಲಿ ನಡೆಯುವಂತಹ ಸಾಮಾಜಿಕ ಯುದ್ಧ ಹಾಗೂ ಪರಸ್ಪರ ನಂಬಿಕೆಗಳ ಯುದ್ಧ ಬಹುಮುಖ್ಯವಾಗಿದೆ, ಅದೇ ರೀತಿ ಕುವೆಂಪು ಕಾವ್ಯಗಳಲ್ಲಿ ಬಹುಮುಖ್ಯವಾಗಿ ವಿರಹದ ಯುದ್ಧ, ಪ್ರಣಯದ ಯುದ್ಧಗಳು ನವದಂಪತಿ ಗಳಲ್ಲಿ ಸಂಧಿಸುವ ಸಕಾರಣಕ್ಕೆ ಕುವೆಂಪು ಪ್ರೇಮಗೀತೆ ಗಳೊಂದಿಗೆ ವಿವರಿಸುತ್ತಾರೆ. ‘ಜೇನಾಗುವಾ’, ‘ಚಂದ್ರಮಂಚಕೆ ಬಾ ಚಕೋರಿ’ ಮುಂತಾದ ಕವನಸಂಕಲನ ಗಳಲ್ಲಿ ಪ್ರೇಮದ ವೈಪರೀತ್ಯಗಳ ಕುರಿತು ಹೇಳುತ್ತಾರೆ.

ಕುವೆಂಪು ಅವರ ಸಣ್ಣಕತೆಗಳು ಮತ್ತು ವೈಚಾರಿಕ ಬರಹಗಳಲ್ಲಿ ಜಾಗತೀಕರಣ ಹಾಗೂ ಆಧುನೀಕರಣದ ತೊಲೆಬಾಗಿಲನ್ನು ವಿವರಿಸುತ್ತಾ ಗ್ರಾಮೀಣ ಬದುಕು ಗಳು ಹೇಗೆ ನಗರಗಳಾಗಿ ವಿರೂಪಗೊಂಡವು ಮತ್ತು ವಸಾಹತುಶಾಹಿಗಳ ಬೇಡಿಕೆಗಳು ಹೇಗೆ ಭಾರತದಲ್ಲಿ ಸೃಷ್ಟೀಕೃತವಾಯಿತೆಂದು ಕುವೆಂಪು ಅವರು ಸವಿವರ ವಾಗಿ ಹೇಳಿದ್ದಾರೆ.

ಯಾರೂ ಅರಿಯದ ವೀರ, ದೆವ್ವದ ಕಾಟ, ಸನ್ಯಾಸಿ,ಧನ್ವಂತರಿ ಚಿಕಿತ್ಸೆ, ಸಾಲದ ಮಗು ಇತ್ಯಾದಿ ಕತೆಗಳಲ್ಲಿ ಕೌಟುಂಬಿಕ ಯುದ್ಧಗಳೊಂದಿಗೆ ಸಾಮಾಜಿಕ ತಾರತಮ್ಯಗಳೂ ಕೂಡ ಕಾಣಬಹುದು.

ಕುವೆಂಪು ಅವರ ಎರಡು ಕಾದಂಬರಿಗಳಲ್ಲಿ ಒಂದು ಪ್ರಕೃತಿ ಮತ್ತು ಮತ್ತೊಂದು ಮನುಷ್ಯ ಪ್ರಪಂಚ ವನ್ನು ತೆರೆದು ತೋರಿಸುವ ಕಥಾನಕ, ಭಯಾನಕ ದೃಶ್ಯಗಳಾಗಿವೆ. ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಕಾದಂಬರಿಗಳಲ್ಲಿ ಉಂಟಾಗುವಂತ ಹ ಪ್ರೇಮದ ಬಯಕೆಗಳು ಹಾಗೂ ಆರ್ಥಿಕ ಯುದ್ಧ ಗಳೊಂದಿಗೆ ಸಂಬಂಧಗಳ ಅಸ್ಪಷ್ಟ ಚಿತ್ರಣಗಳನ್ನು ಕುವೆಂಪು ಈ ಎರಡು ಮಹಾಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ. ಒಂದು ಧರ್ಮದ ಯುದ್ಧವಾದರೆ ಮತ್ತೊಂದು ಭಾಷೆ, ಸಂಸ್ಕೃತಿ, ನೆಲ, ಜಲ, ಪ್ರಕೃತಿಯೊಳ ಗಿನ ಯುದ್ಧಗಳನ್ನು ಕುವೆಂಪು ಅವರ ಕಾದಂಬರಿಗಳಲ್ಲಿ ನೋಡಬಹುದು.

ಅದೇ ರೀತಿ ನಾಟಕಗಳಲ್ಲಿ ಒಂದು ವಿಶಿಷ್ಟ ಹಾಗೂ ಪುರಾಣದ ಕತೆಗಳನ್ನು ಆಧರಿಸಿ ಆದಂತಹ ಸಾಮಾ ಜಿಕ ಬದಲಾವಣೆಗಳಿಗೆ ಕುವೆಂಪು ಅವರ ವಿವಿಧ ದೃಷ್ಟಿಕೋನಗಳನ್ನು ನೋಡಬಹುದು.

ಶೂದ್ರತಪಸ್ವಿಯಲ್ಲಿ ನಡೆಯುವ ರಾಮ ಮತ್ತು ಶಂಭೂಕನ ಯುದ್ಧ, ಕಾನನದಲ್ಲಿ ನಡೆಯುವ ಪೌರುಷ ದ ಯುದ್ಧ, ಸ್ಮಶಾನ ಕುರುಕ್ಷೇತ್ರದಲ್ಲಿ ಸೃಷ್ಟಿಸಿರುವ ಸಾಮಾಜಿಕ ಹಾಗೂ ಪ್ರಪಂಚ ನಾಶದ ಪರಿಕಲ್ಪನೆ ಗಳೊಂದಿಗೆ ಕುವೆಂಪು ಯುದ್ಧದಿಂದ ಆಗುವ ಪರಿಣಾ ಮಗಳು ಹಾಗೂ ವಿನಾಶದ ಬಗ್ಗೆ ವಿವರಿಸುತ್ತಾರೆ.

ಯುದ್ಧ ಸಂಸ್ಕೃತಿ ಎಂಬುದು ವಿನಾಶವೇ ಸರಿ, ಹೌದು ಯುದ್ಧದಿಂದ ನಾವು ಗಳಿಸಿಕೊಳ್ಳುವ ಅಂಶವಾ ದರೂ ಏನು? ಸಾವು, ನೋವು, ದುಃಖ, ಪರಸ್ಪರ ವಿಮುಖ ಚಲನೆಗಳು. ಒಟ್ಟಾರೆಯಾಗಿ ಕೊಲ್ಲುವ ಒಂದು ಸಂಸ್ಕೃತಿಯೇ ನಮ್ಮ ಮುಂದೆ ತೆರೆದು ನಿಲ್ಲುತ್ತದೆ.

ಯುದ್ಧ ಬಡವರ ಯುದ್ಧವಲ್ಲ, ಉಳ್ಳವರ ಯುದ್ಧ. ಅದಕ್ಕೆ ಹೋರಾಡುವವರು ಸಾಮಾನ್ಯ ಸೈನಿಕರು, ರಾಜ ನಾದವನು ಆಜ್ಞೆಯನ್ನು ನೀಡಿದರೆ ರಾಜನೇ ಮುಂದೆ ನಿಂತು ಹೋರಾಡುವುದಿಲ್ಲ ಅಲ್ಲಿನ ಬಡ ಹಾಗೂ ಸಾಮಾನ್ಯ ಸೈನಿಕರು ನಿಂತು ಯುದ್ಧಗಳ ಮಾಡಬೇಕು.

ಜರ್ಮನ್, ಜಪಾನ್, ರಶ್ಯಾ ಮುಂತಾದ ಭಯಾ ನಕ ಯುದ್ಧಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಯುದ್ಧಗಳಿಂದ ಆದಂತಹ ಒಂದು ವಿನಾಶದ ಪರಿವು ಅರಿವಾಗಬೇಕೀಗ!

ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿಯೂ ಕೂಡ ಯುದ್ಧದ ಪ್ರಮೇ ಯವೇ ಬರುತ್ತದೆ, ಹೇಗೆ ಹೋಮರ್ ಯುದ್ಧದ ಚಿತ್ರಣದೊಂದಿಗೆ ಪ್ರಕೃತಿ ಹಾಗೂ ಮನುಷ್ಯ ಪ್ರಪಂಚವಿನಾಶವಾಯಿತೋ ಅದೇ ರೀತಿ ಈ ಜಾಗತೀಕರಣದ ಸಂದರ್ಭದಲ್ಲಿ ಸಶಸ್ತ್ರೀಕರಣಗಳೊಂದಿಗೆ ವಿವಿಧ ದೇಶಗಳು ಹೇಗೆ ಯುದ್ಧವನ್ನು ಸುಲಭವಾಗಿ ಅನುಸ ರಿಸುವವು ಹಾಗೂ ಜಾಗತಿಕ ಮಟ್ಟದ ಅಣುಬಾಂಬು ಗಳು, ಗನ್‌ಗಳು, ಸ್ಪೋಟಕ ಮಾದಕಗಳು ಹೇಗೆ ಮನುಷ್ಯ ಪ್ರಪಂಚಕ್ಕೆ ಮಾರಕ ಎಂಬುದನ್ನು ಕುವೆಂಪು ಸಾಹಿತ್ಯದಲ್ಲಿ ನೋಡಬಹುದು.

ಯುದ್ಧವೆಂಬುದು ವಿನಾಶವೇ ಹೊರತು ಅವಕಾಶ ವಲ್ಲ!

Writer - ಸೂರ್ಯಕೀರ್ತಿ, ಬೆಂಗಳೂರು

contributor

Editor - ಸೂರ್ಯಕೀರ್ತಿ, ಬೆಂಗಳೂರು

contributor

Similar News