ಮೋದಿ ಅಧಿಕಾರಕ್ಕೆ ಬಂದರೆ ದೇಶ ಸರ್ವನಾಶ: ಮಾಜಿ ಶಾಸಕ ಶ್ರೀರಾಮರೆಡ್ಡಿ

Update: 2019-03-02 16:49 GMT

ಬೆಂಗಳೂರು, ಮಾ.2: ದೇಶದಲ್ಲಿ ಎಲ್ಲ ಸಾಂವಿಧಾನಿಕ ಕೇಂದ್ರಗಳಲ್ಲಿ ಮನುವಾದಿ ಸಿದ್ಧಾಂತದವರಿಂದ ಆಳಲ್ಪಡುತ್ತಿದೆ. ಇದಕ್ಕೆ ಇಂದಿನ ಪ್ರಧಾನಿ ಮೋದಿಯೇ ನೇರ ಕುಮ್ಮಕ್ಕು ನೀಡುತ್ತಿದ್ದು, ಮತ್ತೊಂದು ಬಾರಿ ಅವರೇ ಅಧಿಕಾರಕ್ಕೆ ಬಂದರೆ ದೇಶ ಸರ್ವನಾಶವಾಗಲಿದೆ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಹೇಳಿದ್ದಾರೆ.

ಶನಿವಾರ ನಗರದ ಶಾಸಕರ ಭವನದಲ್ಲಿ ದಲಿತ ಹಕ್ಕುಗಳ ಸಮಿತಿ ವತಿಯಿಂದ ಆಯೋಜಿಸಿದ್ದ ಜಾತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧ ತಡೆ ಕಾಯ್ದೆ 2018 ಕುರಿತ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ದಲಿತರ ರಕ್ಷಣೆಗಾಗಿ, ಕಾರ್ಮಿಕರ ರಕ್ಷಣೆಯಾಗಿ ಇದ್ದ ಕಾನೂನುಗಳನ್ನು, ಕಾಯ್ದೆಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಶೋಷಿತರನ್ನು ಮತ್ತೊಮ್ಮೆ ಗುಲಾಮಗಿರಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ, ಅವರೇ ಮುಂದೊಂದು ಬಾರಿ ಅಧಿಕಾರಕ್ಕೆ ಬಂದರೆ ದಲಿತ, ದಮನಿತರಿಗೆ ಉಳಿಗಾಲವಿಲ್ಲ ಎಂದು ತಿಳಿಸಿದರು.

21 ಶತಮಾನದಲ್ಲಿ ಭಾರತ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ. ವೈಜ್ಞಾನಿಕವಾಗಿ, ಆರ್ಥಿಕವಾಗಿ ಬೆಳೆದಿದ್ದೇವೆ. ಆದರೆ, ಅದೇ ಸಂದರ್ಭದಲ್ಲಿ ಅದರ ಎರಡು ಪಟ್ಟು ಜಾತೀಯತೆಯ ಕ್ರೌರ್ಯ, ಹೆತ್ತ ಮಕ್ಕಳನ್ನೇ ಕೊಲ್ಲುವ ವಿಕೃತಿ ಮನಸ್ಥಿತಿಗಳೂ ಬೆಳೆದಿದೆ. ಕೀಳು ಮಟ್ಟದ ಮನೋಭಾವ ಬೇರೂರಿ ಬಿಟ್ಟಿದೆ. ಇಂದು ಪುರೋಹಿತಶಾಹಿ ವ್ಯವಸ್ಥೆ ಗಟ್ಟಿಯಾಗಿ ಬೇರೂರಿದೆ ಎಂದು ಹೇಳಿದರು.

ದೇಶದಲ್ಲಿ ಅಂತರ್‌ಜಾತೀಯ ದೌರ್ಜನ್ಯ ಕಾಯ್ದೆಗಳಿದ್ದರೂ ದೌರ್ಜನ್ಯಗಳು ಕಡಿಮೆಯಾಗಿಲ್ಲ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗುತ್ತಿಲ್ಲ. ಅಸ್ಪಶ್ಯತೆ ನಿರ್ಮೂಲನೆಗೆ ಅಧಿಕಾರಕ್ಕೆ ಬಂದ ಯಾವ ಸರಕಾರಗಳೂ ಗಂಭೀರವಾದ ಪ್ರಯತ್ನ ಮಾಡಲಿಲ್ಲ ಎಂದ ಅವರು, ಇದಕ್ಕೆ ಪರಿಹಾರ ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ. ಆದರೆ, ಇಂದಿನ ದಲಿತ ಸಂಘಟನೆಗಳಲ್ಲಿಯೂ ಎಡ-ಬಲ ಎಂಬಂತಾಗಿದೆ. ಇದು ಮುಂದುವರಿದರೆ ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಸೂಚಿಸಿದರು.

ವಕೀಲ ವೆಂಕಟೇಶ್ ದೊಡ್ಡೇರಿ ಮಾತನಾಡಿ, ಪ್ರಪಂಚಾದ್ಯಂತ 5 ಸಾವಿರ ಮರ್ಯಾದೆ ಹತ್ಯೆಗಳು ವರದಿಯಾಗಿವೆ. 200-300 ಭಾರತದಲ್ಲಿ ವರದಿಯಾಗಿದ್ದು, ಇನ್ನು ವರದಿಯಾಗದೆ ಉಳಿದ ಅನೇಕ ಪ್ರಕರಣಗಳಿವೆ. ಮರ್ಯಾದೆ ಹತ್ಯೆ ಬಗ್ಗೆ ಪೂನಾದ ವಿದ್ಯಾರ್ಥಿಗಳೆಲ್ಲ ಸೇರಿ ಸರಕಾರಕ್ಕೆ ವರದಿ ಸಲ್ಲಿಸುತ್ತಾರೆ. ಆದರೆ, ಅದನ್ನು ಕೇಂದ್ರ ಸರಕಾರ ಸ್ವೀಕರಿಸಲು ಮುಂದಾಗಿಲ್ಲ ಎಂದು ದೂರಿದರು.

ತಾಯಿ ಜಾತಿ ಪ್ರಧಾನವೋ ತಂದೆ ಜಾತಿ ಪ್ರಧಾನವೋ ಎಂಬ ಚರ್ಚೆಯಲ್ಲಿದೆ. ಎಲ್ಲ ಜಾತಿಗಳು ನೋಂದಣಿಯಾಗಬೇಕು. ಹತ್ಯೆ, ಬಹಿಷ್ಕಾರಗಳನ್ನು ಇಲ್ಲವಾಗಿಸಬೇಕು. ಅಂತರ್‌ಜಾತಿ ವಿವಾಹವಾಗುವ ದಂಪತಿಗಳಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಅದರ ಜತೆಗೆ ಸೂಕ್ತ ರಕ್ಷಣೆ ನೀಡಿ, ಬದುಕಲು ಅವಕಾಶವಾಗುವಂತಹ ಉದ್ಯೋಗಾವಕಾಶಕ್ಕೆ ಅವಕಾಶ ನೀಡಬೇಕು ಎಂದು ನುಡಿದರು.

ಸಭೆಯಲ್ಲಿ ರಾಜ್ಯದಲ್ಲಿನ ದಲಿತರ ಮೇಲಿನ ಸಮಸ್ಯೆಗಳನ್ನಾಧರಿಸಿ ಒಂದು ನೂತನ ಕಾನೂನು ರೂಪಿಸಬೇಕು. ಅಂತರ್ಜಾತಿ ವಿವಾಹಿತರಿಗೆ ಮೀಸಲಾತಿ ಕಲ್ಪಿಸಬೇಕು. 1965ರಲ್ಲಿ ಕಾಯ್ದೆಯಲ್ಲಿನ ಅಂಶಗಳ ತಿದ್ದುಪಡಿಯಾಗಬೇಕು. ಮರ್ಯಾದೆ ಹತ್ಯೆಹೆಸರಿನಲ್ಲಿ ದೌರ್ಜನ್ಯ, ದಬ್ಬಾಳಿಕೆ ಅಂತ್ಯವಾಗಬೇಕಾದರೆ ಬಲವಾದ ಕಾನೂನು ರೂಪುಗೊಳ್ಳಬೇಕು. ಇದರಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು ಸೇರಿದಂತೆ ಹಲವು ಅಂಶಗಳ ಕುರಿತು ಚರ್ಚೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News