ಯಾರೂ ಕೂಡ ಯುದ್ಧ ಬಯಸುತ್ತಿಲ್ಲ, ಆದರೆ ಭಯೋತ್ಪಾದನೆಯನ್ನು ಸಹಿಸಲ್ಲ: ಏರ್ ಮಾರ್ಷಲ್ ಹರಿ ಕುಮಾರ್
ಹೊಸದಿಲ್ಲಿ, ಮಾ.3: ‘‘ನಮಗೆ ಏನು ಗುರಿ ನಿಗದಿಪಡಿಸಿದ್ದಾರೋ ಅದನ್ನು ಸಾಧಿಸಿದ್ದೇವೆ. ಉಳಿದಿರುವುದನ್ನು ನಿರ್ಧರಿಸುವುದು ಸರಕಾರಕ್ಕೆ ಬಿಟ್ಟ ವಿಚಾರ. ಯಾರಿಗೂ ಕೂಡ ಯುದ್ದ ಬೇಕಾಗಿಲ್ಲ. ಆದರೆ, ನಮ್ಮ ನಾಗರಿಕರನ್ನು ಹತ್ಯೆಗೈಯುತ್ತಿರುವ ಭಯೋತ್ಪಾದಕರನ್ನು ನಾವು ಸಹಿಸಿಕೊಂಡು ಇರುವುದಿಲ್ಲ’’ ಎಂದು ಏರ್ ಮಾರ್ಷಲ್ ಸಿ.ಹರಿ ಕುಮಾರ್ ಹೇಳಿದ್ದಾರೆ.
39 ವರ್ಷಗಳ ಕಾಲ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿರುವ ಹರಿ ಕುಮಾರ್ ಫೆ.28 ಗುರುವಾರದಂದು ಸೇವೆಯಿಂದ ನಿವೃತ್ತಿಯಾಗಿದ್ದರು. ವೆಸ್ಟರ್ನ್ ಏರ್ ಕಮಾಂಡ್(ಡಬ್ಲುಎಸಿ)ಮುಖ್ಯಸ್ಥರಾಗಿದ್ದ ಕುಮಾರ್ ಪಾಕಿಸ್ತಾನದ ಬಾಲಕೋಟ್ನ ಜೈಶ್-ಇ-ಮುಹಮ್ಮದ್ ಉಗ್ರ ಸಂಘಟನೆಯ ಶಿಬಿರದ ಮೇಲೆ ದಾಳಿ ನಡೆದಾಗ ಅದರ ಮೇಲ್ವಿಚಾರಣೆ ವಹಿಸಿದ್ದರು. ದಾಳಿ ನಡೆದ ಮೂರು ದಿನಗಳ ಬಳಿಕ ಸೇವೆಯಿಂದ ನಿವೃತ್ತಿಯಾಗಿದ್ದರು.
‘‘ಗಡಿಯಾಚೆಗಿನ ಭಯೋತ್ಪಾದನೆಯನ್ನು ನಾವು ಸಹಿಸಿಕೊಳ್ಳುವುದಿಲ್ಲ. ನಾವು ನಾಗರಿಕರನ್ನು, ಸವವಸ್ತ್ರದಲ್ಲಿರುವವರನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದೇವೆ. ಯಾವುದೇ ಪ್ರದೇಶಕ್ಕೆ ದಾಳಿ ಮಾಡುವ ಸಾಮರ್ಥ್ಯ ನಮ್ಮ ಭಾರತೀಯ ವಾಯು ಸೇನೆಗಿದೆ’’ ಎಂದು ‘ದಿ ಹಿಂದೂ’ ಪತ್ರಿಕೆಗೆ ಕುಮಾರ್ ತಿಳಿಸಿದರು.