ಚಿತ್ರೀಕರಣಕ್ಕೆ ವಿಧಾನಸೌಧದ ಟೆಂಡರ್ ನೀಡುವುದಾಗಿ ವಂಚನೆ ಆರೋಪ: ನಾಲ್ವರ ವಿರುದ್ಧ ದೂರು ದಾಖಲು
ಬೆಂಗಳೂರು, ಮಾ.4: ವಿಧಾನಸೌಧ ಕಟ್ಟಡದ ಚಿತ್ರಿಕರಣಕ್ಕೆ(ಶೂಟಿಂಗ್) ಟೆಂಡರ್ ನೀಡುವುದಾಗಿ ನಂಬಿಸಿ, ಹಣ ವಂಚನೆ ಮಾಡಿದ ಆರೋಪದಡಿ ಕುಟುಂಬವೊಂದರ ವಿರುದ್ಧ ಇಲ್ಲಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ನಿವಾಸಿಗಳಾದ ಅನುರಾಗ್, ರಾಜೇಶ್, ಸತ್ಯಭಾಮಾ ಮತ್ತು ಚಂದನ ಎಂಬುವರ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಭಾಸ್ಕರ್ ಎಂಬುವರು ದೂರು ನೀಡಿದ್ದಾರೆ.
ಏನಿದು ಪ್ರಕರಣ? ಗಗನ್ ಡಿಜಿಟಲ್ ಫೋಟೋ ಲ್ಯಾಬ್ ಮಾಲಕ ಭಾಸ್ಕರ್ ನೈಕರ್ ಎಂಬುವರು ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ಅವರನ್ನು ಸಂಪರ್ಕಿಸಿದ್ದು, ಈತ ಚಿತ್ರರಂಗ ಮತ್ತು ಹಲವಾರು ಘಟಾನುಘಟಿ ರಾಜಕಾರಣಿಗಳ ಪರಿಚಯವಿದೆ. ಅವರ ಮೂಲಕ ವಿಧಾನಸೌಧದಲ್ಲಿ ಸಿನಿಮಾ, ಜಾಹೀರಾತು ಸೇರಿದಂತೆ ಇನ್ನಿತರೆ ವಿಡಿಯೋಗಳ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿಕೊಡುವುದಾಗಿ ನಂಬಿಸಿ, ಹಣ ಪಡೆದು ವಂಚಿಸಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಭಾಸ್ಕರ್ ಅವರು ಆರೋಪಿಗಳ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.