ಪ್ರಧಾನಿ ಮೋದಿಯಂತಹ ಅಪ್ಪಟ ಸುಳ್ಳುಗಾರ ಎಲ್ಲಿಯೂ ಸಿಗುವುದಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, 8: ಪ್ರಧಾನಿ ಮೋದಿಯಂತಯ ಅಪ್ಪಟ ಸುಳ್ಳುಗಾರ ಎಲ್ಲಿಯೂ ಸಿಗುವುದಿಲ್ಲ. ಅವರ ಬಣ್ಣದ ಮಾತುಗಳಿಗೆ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಮರುಳಾಗಬಾರದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಮನವಿ ಮಾಡಿದ್ದಾರೆ.
ಶುಕ್ರವಾರ ಬೆಂಗಳೂರ ಹೊರ ವಲಯದ ಬೆಟ್ಟಹಲಸೂರು ಬಳಿ ಸಿಎಂ ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕೆಲ ದಿನಗಳ ಕಲಬುರಗಿಗೆ ಬಂದಿದ್ದ ಪ್ರಧಾನಿ ಮೋದಿ, ರಾಜ್ಯ ಸರಕಾರ ಸಾಲಮನ್ನಾದ ಹೆಸರಿನಲ್ಲಿ ರೈತರಿಗೆ ಮೋಸ ಮಾಡಿದೆ ಎಂದು ಲಘುವಾಗಿ ಮಾತನಾಡಿದ್ದಾರೆ. ಆದರೆ, ನಾವು ಆರೇ ತಿಂಗಳಿನಲ್ಲಿ 11 ಸಾವಿರ ಕೋಟಿ ರೂ.ಹಣವನ್ನು ಬಿಡುಗಡೆ ಮಾಡಿದ್ದೇವೆ. ರೈತರ ಸಾಲಮನ್ನಾದಿಂದ 14 ಲಕ್ಷ ಮಂದಿ ರೈತರಿಗೆ ಅನುಕೂಲವಾಗಿದೆ ಎಂದ ಅವರು, ಕೇಂದ್ರ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 6 ಸಾವಿರ ರೂ. ನೀಡುವ ಯೋಜನೆಗೆ ರಾಜ್ಯ ಸರಕಾರ ರೈತರ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಪರಿಸ್ಥಿತಿ ಆವರಿಸಿದ್ದು, ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನರೇಗಾ ಯೋಜನೆಯಡಿ 2 ಸಾವಿರ ಕೋಟಿ ರೂ.ಅನುದಾನ ರಾಜ್ಯಕ್ಕೆ ಬರಬೇಕಿದೆ. ರಾಜ್ಯವೇ 900ಕೋಟಿ ರೂ.ಗಳಷ್ಟು ಕೂಲಿ ಹಣವನ್ನು ನೀಡಿದೆ. ಇಂತಹ ವಿಚಾರಗಳಲ್ಲಿ ಮೋದಿ ಬಣ್ಣದ ಮಾತುಗಳನ್ನು ಬಿಟ್ಟು ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಒಬ್ಬರ ಖಾತೆಗೆ ಮಾತ್ರ ಹಣ
ಕೇಂದ್ರದ ಯೋಜನೆಯ ಸೌಲಭ್ಯಕ್ಕಾಗಿ ರಾಜ್ಯದಲ್ಲಿ 8.54 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿನ 2.08ಲಕ್ಷ ಅರ್ಜಿಗಳ ಮಾಹಿತಿಯನ್ನು ಯೋಜನೆಯ ತಂತ್ರಾಂಶಕ್ಕೆ ಮಾ.7ಕ್ಕೆ ಅಪ್ಲೋಡ್ ಮಾಡಿದ್ದೇವೆ. ಆದರೆ ಕೇಂದ್ರ ಅದರಲ್ಲಿ ಕೇವಲ 17ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಅದರಲ್ಲಿಯೂ 6 ರೈತರ ಖಾತೆಗೆ ಮಾತ್ರ ಹಣ ಜಮಾ ಮಾಡಿದೆ. ಅದರಲ್ಲಿ ಒಬ್ಬರ ಖಾತೆಗೆ 950 ರೂ.ಬಂದಿದೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ