ಪೌರ ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸಿದ ಜಲಮಂಡಳಿ: ಪ್ರಕರಣ ದಾಖಲು
Update: 2019-03-09 20:21 IST
ಬೆಂಗಳೂರು, ಮಾ. 9: ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮಲದ ಗುಂಡಿ ಸ್ವಚ್ಛತೆಗೊಳಿಸಲು ಪೌರ ಕಾರ್ಮಿಕರನ್ನು ಬಳಸಿದ ಆರೋಪದ ಮೇಲೆ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್ಎಸ್ಬಿ) ಎಇಇ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗಿದೆ.
ಮಾ.2ರ ಬೆಳಗ್ಗೆ 10:30ರ ಸುಮಾರಿಗೆ ವಾರ್ಡ್ ನಂ.26ರ ಚಿನ್ನಪ್ಪ ಗಾರ್ಡನ್ ಮೊದಲನೆ ಮುಖ್ಯರಸ್ತೆಯಲ್ಲಿನ ಬಿಬಿಎಂಪಿ ಡಂಪಿಂಗ್ ಪಾಯಿಂಟ್ನಲ್ಲಿ ಮೂರ್ನಾಲ್ಕು ಪೌರ ಕಾರ್ಮಿಕರನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಮಲದ ಗುಂಡಿಗೆ ಇಳಿಸಲಾಗಿದೆ ಎಂದು ಮಾದಿಗ ದಂಡೋರ ಉಪಾಧ್ಯಕ್ಷ ಎಂ.ಸಿ. ಶ್ರೀನಿವಾಸ್, ಜೆ.ಸಿ.ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಜೆಸಿ ನಗರ ಠಾಣಾ ಪೊಲೀಸರು ಬಿಡಬ್ಲೂಎಸ್ಎಸ್ಬಿ ಎಇಇ ವಿರುದ್ಧ ತನಿಖೆ ಕೈಗೊಂಡಿದ್ದಾರೆ. ಜಲ ಮಂಡಳಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀನಿವಾಸ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.