ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ರಾಜಕೀಯ ಅರಿವು ಅಗತ್ಯ: ದಿನೇಶ್ ಅಮಿನ್ ಮಟ್ಟು

Update: 2019-03-10 16:27 GMT

ಬೆಂಗಳೂರು, ಮಾ.10: ನಮ್ಮ ಯುವಕರಿಗೆ ರಾಜಕಾರಣದ ಅಗತ್ಯತೆಯ ಕುರಿತು ಅರಿವು ಮೂಡಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ತೊಡಗುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್ ಮಟ್ಟು ಅಭಿಪ್ರಾಯಿಸಿದರು.

ರವಿವಾರ ನಮ್ಮ ಧ್ವನಿ ಬಳಗದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಅನನ್ಯ ಭಾರತ ಮತ್ತು ಅನುಪಮ ಭಾರತ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಯುವಜನತೆಗೆ ಪ್ರಜಾಪ್ರಭುತ್ವದ ಕುರಿತೇ ಅಪನಂಬಿಕೆ ಮೂಡಿಸುವಂತಹ ವಾತಾವರಣ ನಿರ್ಮಿಸಲಾಗುತ್ತಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಜವಾಬ್ದಾರಿಯುವ ಸಂಘ, ಸಂಸ್ಥೆಗಳು ರಾಜಕಾರಣ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಕುರಿತು ಅರಿವು ಮೂಡಿಸುವುದು ತೀರಾ ಅಗತ್ಯವಿದೆ ಎಂದರು.

ರಾಜಕಾರಣವನ್ನು ಹೊರತು ಪಡಿಸಿರುವುದು ಯಾವುದು ಇಲ್ಲ. ಹೀಗಾಗಿ ನಾನು ಕಾರ್ಯಕ್ರಮಗಳಲ್ಲಿ ಮಾತನಾಡುವುದು ಹಾಗೂ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯವುದು ರಾಜಕಾರಣದ ಬಹುಮುಖ್ಯವಾದ ಭಾಗವೆಂದೆ ಭಾವಿಸುತ್ತೇನೆ. ಇಂದಿನ ಯುವಕರಿಗೆ ಲೋಹಿಯಾ, ಗಾಂಧೀಜಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಪ್ರತಿಪಾದಿಸಿದ ರಾಜಕಾರಣದ ಕುರಿತು ತಿಳುವಳಿಕೆ ನೀಡಬೇಕಿದೆ ಎಂದು ಅವರು ಹೇಳಿದರು.

ಚಳವಳಿಗಳ ಮೂಲಕ ರೂಪಗೊಂಡ ರಾಜಕೀಯ ಪಕ್ಷವೊಂದಕ್ಕೆ ಗಟ್ಟಿಯಾದ ಸೈದ್ಧಾಂತಿಕ ಹಿನ್ನೆಲೆ ಇರುತ್ತದೆ. ಹೀಗಾಗಿಯೆ ತಮಿಳುನಾಡು, ಕೇರಳದಲ್ಲಿ ಗಟ್ಟಿಯಾದ ವೈಚಾರಿಕ ಚಿಂತನೆವುಳ್ಳ ರಾಜಕೀಯ ಪಕ್ಷವಿದೆ. ಆದರೆ, ಕರ್ನಾಟಕದಲ್ಲಿ ಇಂತಹ ಯಾವುದೆ ಒಂದು ರಾಜಕೀಯ ಚಳವಳಿ ನಡೆದಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಚಳವಳಿ ರಾಜ್ಯಕ್ಕೆ ತೀರ ಅಗತ್ಯವಿದೆ ಎಂದು ಅವರು ಹೇಳಿದರು.

ಸಂಸದ ಎಲ್.ಹನುಮಂತಯ್ಯ ಮಾತನಾಡಿ, ದೇಶ ಸ್ವಾತಂತ್ರಗೊಂಡಾಗ ಶೇ. 4ರಷ್ಟು ಮಾತ್ರ ಸಾಕ್ಷರತೆಯನ್ನು ಹೊಂದಿತ್ತು. ಇಂತಹ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಹಿಡಿದ ನೆಹರೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದರು. ಆದರೆ, ಇವತ್ತು ಬಿಜೆಪಿ ನೆಹರೂ ದೇಶಕ್ಕೆ ಏನು ಮಾಡಿದರು ಎಂದು ಪ್ರಶ್ನಿಸುತ್ತಾರೆ ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್‌ರವರು ರಾಮಾಯಣ, ಮಹಾಭಾರತವನ್ನು ಕಟುವಾಗಿ ವಿಮರ್ಶಿಸಿದ್ದಾರೆ. ಆ ಕುರಿತು ಕೃತಿಯನ್ನು ರಚಿಸಿದ್ದಾರೆ. ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರದ ಪ್ರಾರಂಭದ ಕಾಲದಲ್ಲಿ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ವಾತಾವರಣವಿತ್ತು. ಆದರೆ, ಸ್ವಾತಂತ್ರ ಬಂದು 7 ದಶಕದ ನಂತರದಲ್ಲಿ ಪ್ರಜಾಪ್ರಭುತ್ವದ ಆಶಯಗಳು ಮತ್ತಷ್ಟು ಗಟ್ಟಿಯಾಗಬೇಕಿತ್ತು. ಆದರೆ, ಪ್ರಧಾನಿ ಮೋದಿ ಸರಕಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರನ್ನು ಕೊಲ್ಲಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಸಾಮಾಜಿಕ ಹೋರಾಟಗಾರ ಸುದೀರ್ ಕುಮಾರ್ ಮುರೋಳಿ, ಸಂಘಟಕ ಮಹೇಂದ್ರ ಕುಮಾರ್ ಮತ್ತಿತರರಿದ್ದರು.

ಬಿಜೆಪಿಯ ನಿಜವಾದ ಮುಖವಾಡಗಳು ವಾಜಪೇಯಿ, ಅಡ್ವಾಣಿ, ನರೇಂದ್ರ ಮೋದಿ, ಯಡಿಯೂರಪ್ಪ, ಸದಾನಂದ ಗೌಡ ಅಲ್ಲ. ಆರೆಸ್ಸೆಸ್ ಕೇಂದ್ರ ಸ್ಥಳಗಳಾದ ಮಹಾರಾಷ್ಟ್ರದ ನಾಗಪುರ ಹಾಗೂ ಕೇಶವಕೃಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೆಸ್ಸೆಸ್ ಮುಖಂಡರುಗಳಾಗಿದ್ದಾರೆ. ಹೀಗಾಗಿ ನಾವು ಬಿಜೆಪಿಯ ಮೂಲ ಸಿದ್ಧಾಂತಗಳನ್ನು ಅರ್ಥ ಮಾಡಿಕೊಂಡು, ಅದರ ವಿರುದ್ಧ ಪರ್ಯಾಯವಾದ ರಾಜಕಾರಣವನ್ನು ಮಾಡಬೇಕಾಗಿದೆ.

-ದಿನೇಶ್‌ ಅಮೀನ್ ಮಟ್ಟು, ಹಿರಿಯ ಪತ್ರಕರ್ತ

ಶ್ರಮಿಕರೇ ದೇಶಭಕ್ತರು

‘ಬಿಜೆಪಿ ಹಾಗೂ ಆರೆಸ್ಸೆಸ್ ಟೊಳ್ಳು ದೇಶಭಕ್ತಿಯನ್ನು ಜನತೆಯ ಮೇಲೆ ಹೇರಲು ಬಂದರೆ, ಅವರಿಗೆ ಜನಸಾಮಾನ್ಯರೆ ನಿಜವಾದ ದೇಶ ಭಕ್ತಿಯ ಬಗ್ಗೆ ಪಾಠ ಮಾಡುವ ಮೂಲಕ ಸರಿಯಾದ ತಿರುಗೇಟು ನೀಡಬೇಕು. ಗದ್ದೆಯಲ್ಲಿ ಭತ್ತದ ಪೈರನ್ನು ನಾಟಿ ಮಾಡುವವರು, ರಸ್ತೆಯಲ್ಲಿ ಟಾರ್ ಹಾಕುವವರು, ಮಡಿಕೆ ಮಾಡುವವರು ಸೇರಿದಂತೆ ಈ ದೇಶದ ಶ್ರಮಿಕರೆ ನಿಜವಾದ ದೇಶಭಕ್ತರೆಂದು ಸರಿಯಾಗಿ ತಿಳಿ ಹೇಳಬೇಕಿದೆ’

-ಡಾ.ಎಲ್.ಹನುಮಂತಯ್ಯ ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News