ಮನುವಾದದಿಂದ ಹೊರಬರುವುದೆಂದರೆ ಶೋಷಣೆಯಿಂದ ಬಿಡುಗಡೆ: ಡಾ.ಬಂಜಗೆರೆ ಜಯಪ್ರಕಾಶ್

Update: 2019-03-10 16:34 GMT

ಬೆಂಗಳೂರು, ಮಾ.10: ಮನುವಾದದಿಂದ ಹೊರಬರುವುದು ಎಂದರೆ ಸಾವಿರಾರು ವರ್ಷಗಳಿಂದ ಅನುಭವಿಸುತ್ತಿರುವ ಅವಮಾನ, ಶೋಷಣೆ, ದೌರ್ಜನ್ಯಗಳಿಂದ ಬಿಡುಗಡೆಯಾಗಿದೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ದಲಿತ ಹಕ್ಕುಗಳ ಸಮಿತಿ ವತಿಯಿಂದ ಆಯೋಜಿಸಿದ್ದ ಮನುವಾದ ಮುಕ್ತ ಭಾರತ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾವಿರಾರು ವರ್ಷಗಳಿಂದ ವರ್ಣಾಶ್ರಮ ಪದ್ಧತಿ ಅನುಸರಿಸಿಕೊಂಡು ಬಂದಿರುವ ಮನುಸ್ಮತಿಗೆ ಸಂವಿಧಾನ ಅಘಾತವನ್ನುಂಟು ಮಾಡಿದೆ. ಮನುವಾದದಿಂದ ಹೊರಬರುವುದು ಎಂದರೆ ಸಂವಿಧಾನ ಬದ್ಧವಾಗಿ ಬದುಕುವುದು ಎಂದರ್ಥ. ನಾವು ತಿನ್ನುವ ಆಹಾರ, ಮಾಡಬೇಕಾದ ಕೆಲಸ, ಹೊಂದಬೇಕಾದ ಸ್ಥಾನ-ಮಾನ ಸೇರಿದಂತೆ ಎಲ್ಲವೂ ಮನುವಾದದಲ್ಲಿದೆ. ಇದು ಕೆಲವರಿಗಷ್ಟೇ ಸೀಮಿತವಾದುದಾಗಿದೆ ಎಂದರು.

ದೇಶದಲ್ಲಿ ಮನುವಾದದಿಂದ ಶೂದ್ರರು, ತಳ ಸಮುದಾಯಗಳು ಅತ್ಯಂತ ಶೋಷಣೆಗೆ ಒಳಗಾಗಿದ್ದರು, ದೌರ್ಜನ್ಯ, ದಬ್ಬಾಳಿಕೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ, ಅಂಬೇಡ್ಕರ್ ಸಂವಿಧಾನವನ್ನು ರಚನೆ ಮಾಡಿದರು. ಸಂವಿಧಾನ ತಂದಿದ್ದು, ಬಡತನ ನಿರ್ಮೂಲನೆಗೆ ಎಂದುಕೊಂಡಿದ್ದರು. ಆದರೆ, ಅವರು ರಚಿಸಿದ್ದು ಬಡತನ ನಿವಾರಣೆಗಾಗಿ ಅಲ್ಲ, ಶೋಷಿತರು ಸ್ವಾಭಿಮಾನದಿಂದ ಬದುಕುವಂತೆ ಮಾಡಲು ಎಂದು ಹೇಳಿದರು.

ಮೀಸಲಾತಿ ಎಂಬ ಪದದ ಮೂಲಕ ಶೋಷಿತರಿಗೆ ದ್ವನಿ ನೀಡಿದರು. ಅಲ್ಲದೆ, ಮೀಸಲಾತಿ ಎಂಬುದು ಅನ್ನ ನೀಡುವುದಕ್ಕಾಗಿ ಅಲ್ಲ, ಶೋಷಿತರು ಅಧಿಕಾರಕ್ಕೆ ಕಾಲಿಡಬೇಕು. ಅದರಿಂದಲೇ ಸ್ವಾಭಿಮಾನದಿಂದ ಬದುಕುವ ಅವಕಾಶ ಸಿಗುತ್ತದೆ ಎಂದು ಆಶಿಸಿದರು. ಶಿಕ್ಷಣ, ಸಂಸ್ಕೃತಿ, ರಾಜ್ಯಾಧಿಕಾರದಿಂದ ಹೊರಗಿಟ್ಟವರಿಗೆ ಅವರ ಪಾಲು ಸಿಗಬೇಕು ಎಂಬುದು ಸಂವಿಧಾನದ ಆಶಯವಾಗಿತ್ತು ಎಂದು ತಿಳಿಸಿದರು.

ಭಾರತದಲ್ಲಿ ಜಾತಿ ಪದ್ಧತಿ ಮುನ್ನೆಲೆಗೆ ಬರುವ ಮೊದಲೇ ಜಾತಿಗಳಿದ್ದವು. ಬುಡಕಟ್ಟು ಜನಾಂಗದಲ್ಲಿಯೂ ಜಾತಿಗಳಿದ್ದವು. ಆದರೆ, ಎಲ್ಲಿಯೂ ಜಾತಿಯ ಮೇಲು-ಕೀಳು ಎಂಬ ಭೇದ-ಭಾವವಿರಲಿಲ್ಲ. ಅಲ್ಲದೆ, ತಮ್ಮ ವೃತ್ತಿಗಳನ್ನಾಧರಿಸಿ ಕೆಲಸ ಮಾಡುತ್ತಾ ಬದುಕುತ್ತಿದ್ದರು. ಈ ವೇಳೆ ಮನುವಾದಿಗಳ ಪ್ರವೇಶದಿಂದ ಎಲ್ಲರನ್ನೂ ಒಂದೊಂದು ಜಾತಿಗೆ ಸೀಮಿತಗೊಳಿಸಿದರು. ಅಷ್ಟೇ ಅಲ್ಲದೆ, ಅಲ್ಲಿಯೇ ನಿರ್ಬಂಧಿಸುವ ಮೂಲಕ ಸಾಮಾಜಿಕ ಹಿಂಸೆ ನೀಡಿದ್ದಾರೆ ಎಂದು ದೂರಿದರು.

ಜಾತಿ ಆಧಾರದಲ್ಲಿ ಎಲ್ಲ ಗೌರವಗಳು ನಿಗದಿಯಾಗಬೇಕು ಎಂದು ಮನುವಾದ ಹೇಳುತ್ತದೆ. ಮನುವಾದ ಎಂಬುದು ದುಷ್ಟ ಮನಸ್ಥಿತಿ. ಸಾಮಾಜಿಕ ಹಿಂಸೆ, ಅಮಾನವೀಯ ಕೃತ್ಯಗಳನ್ನು ಪ್ರೋತ್ಸಾಹಿಸುತ್ತದೆ ಎಂದ ಅವರು, ಜಾತಿ ಬದಲಿಸಲು ಸಾಧ್ಯವಿಲ್ಲ. ಆದರೆ, ಜಾತಿಯಲ್ಲಿನ ಕೀಳುತನ, ಅವಮಾನ, ನಿರ್ಬಂಧಗಳನ್ನು ತೊಲಗಿಸಬೇಕು ಎಂದು ನುಡಿದರು.

ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿ, ಹಿಂದೂ ಎನ್ನುವುದು ಒಂದು ಧರ್ಮವಲ್ಲ, ಅದಕ್ಕೆ ಅಪ್ಪ-ಅಮ್ಮ ಯಾರೂ ಇಲ್ಲ. ಇನ್ನು ಬ್ರಾಹ್ಮಣರು ಮನುವಾದಿಗಳಲ್ಲ. ಆದರೆ, ದೇಶದ ಜನರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಕಲೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಈ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ದೂರಿದರು.

ದೇಶದ ದಲಿತರ ತಲೆಯಲ್ಲಿ ಮನುವಾದ ತುಂಬಿಕೊಂಡಿದೆ ಎಂದ ಅವರು, ಮಗು ಹುಟ್ಟಿದ ಕೂಡಲೇ ಪುರೋಹಿತರನ್ನು ಕರೆದು ತಂದು ನಾಮಕರಣದ ಹೆಸರಿನಲ್ಲಿ ತಲೆಗೆ ತುಂಬಲಾಗುತ್ತಿದೆ. ಇನ್ನು ಹೊಸ ಮನೆಗಳನ್ನು ಕಟ್ಟಿದಾಗ ಮತ್ತದೇ ಪುರೋಹಿತರನ್ನು ತಂದು ಗೃಹಪ್ರವೇಶ ಮಾಡಿಸುತ್ತಾರೆ. ಈ ಮೂಲಕ ಮನುವಾದವನ್ನೇ ನಾವೇ ಹೇರಿಕೊಳ್ಳುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ದಲಿತ ಹಕ್ಕುಗಳ ಸಮಿತಿ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ, ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ಡಿಎಚ್‌ಎಸ್ ರಾಜ್ಯ ಸಹ ಸಂಚಾಲಕ ಎನ್.ರಾಜಣ್ಣ, ರಾಷ್ಟ್ರೀಯ ಸಮಿತಿ ಸದಸ್ಯ ನಾಗರಾಜ ನಂಜುಂಡಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News