ಯುವ ಜನತೆ ಬಳಕೆಯ ವಸ್ತುವಾಗಬಾರದು: ಆಹಾರ ತಜ್ಞ ಡಾ.ಕೆ.ಸಿ.ರಘು
ಬೆಂಗಳೂರು, ಮಾ.12: ಯುವಜನತೆ ಸ್ವಾರ್ಥ ಹಿತಾಸಕ್ತಿಗಳ ಕೈಯಲ್ಲಿ ಬಳಕೆಯ ವಸ್ತುವಾಗದೆ, ಉತ್ತಮ ಆರೋಗ್ಯ, ಉನ್ನತ ಶಿಕ್ಷಣವನ್ನು ಪಡೆಯುವ ಮೂಲಕ ತಮ್ಮ ಸುತ್ತಮುತ್ತಲ ಪರಿಸರ, ರಾಜ್ಯ ಹಾಗೂ ದೇಶವನ್ನು ಅಭಿವೃದ್ದಿಯ ಕಡೆಗೆ ಕೊಂಡೊಯ್ಯಬೇಕು ಎಂದು ಆಹಾರ ತಜ್ಞ ಡಾ.ಕೆ.ಸಿ.ರಘು ತಿಳಿಸಿದರು.
ಮಂಗಳವಾರ ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್, ಗಾಂಧಿ ಮತ್ತು ವಿವೇಕಾನಂದರ ಅಧ್ಯಯನ ಕೇಂದ್ರ ಹಾಗೂ ಅಪಾಂಜಿ ಕನ್ನಡ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ‘ರಾಷ್ಟ್ರ ನಿರ್ಮಾಣದಲ್ಲಿ ನನ್ನ ಪಾತ್ರ’ ಕುರಿತು ಅವರು ಮಾತನಾಡಿದರು.
ನಮ್ಮ ದೇಶ ಜನಸಂಖ್ಯೆಯಲ್ಲಿ ಪ್ರಪಂಚದಲ್ಲೇ ಎರಡನೇ ಸ್ಥಾನದಲ್ಲಿದೆ. ಅಗಾಧವಾದ ನೈಸರ್ಗಿಕ ಸಂಪನ್ಮೂಲವಿದೆ. ಇಷ್ಟಾಗಿಯು ಬಹುತೇಕ ಕ್ಷೇತ್ರಗಳಲ್ಲಿ ಭಾರತ ಹಿಂದುಳಿದಿರುವುದರ ಕುರಿತು ಯುವ ಜನತೆ ಚಿಂತಿಸಬೇಕು. ಹಾಗೂ ವಿದ್ಯಾರ್ಥಿಗಳು ಓದಿನ ಜೊತೆಗೆ ಉತ್ತಮ ಮೌಲ್ಯಗಳನ್ನು ಹೊಂದುವ ಮೂಲಕ ಸಮಾಜಪರವಾದ ಜೀವನವನ್ನು ನಡೆಸಬೇಕು ಎಂದು ಅವರು ಹೇಳಿದರು.
ಭಾರತದಲ್ಲಿ ಇವತ್ತಿಗೂ ಮೂಲಭೂತ ಸಮಸ್ಯೆಗಳು ಈಡೇರಿಲ್ಲ. ಒಂದು ವರ್ಷದ ಒಳಗಿನ ಮಗುವಿನ ಸಾವಿನ ಪ್ರಮಾಣವನ್ನು ತಗ್ಗಿಸಲು ಇನ್ನೂ ಸಾಧ್ಯವಾಗಿಲ್ಲ. ಇದರ ಜೊತೆಗೆ ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಹಾಗೂ ಮಾನವನ ಜೀವಿತಾವಧಿಯ ಪ್ರಮಾಣವು ಅಂತರ್ರಾಷ್ಟ್ರೀಯ ಸರಾಸರಿ ಪ್ರಮಾಣಕ್ಕಿಂತ ಕಡಿಮೆಯಿದೆ. ಅದರಲ್ಲೂ ದಲಿತರು ಹಾಗೂ ಬಡವರ ಜೀವಿತಾವಧಿಯು ಕೇವಲ 50ರಿಂದ 55ವರ್ಷಗಳು. ಇದೆಲ್ಲವೂ ಸುಧಾರಣೆಯಾಗದೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯವೆಂದು ಅವರು ಹೇಳಿದರು.
ಭಾರತದಲ್ಲಿ ಇಂದಿಗೂ ಜಾತಿ, ಲಿಂಗ, ಭಾಷೆ ಹಾಗೂ ಬಣ್ಣದಿಂದ ಮೇಲು, ಕೀಳಿನಿಂದ ನೋಡಲಾಗುತ್ತಿದೆ. ಕೆಲವು ಸ್ವ ಹಿತಾಸಕ್ತಿಗಳು ಇಂತಹ ಭಾವನೆಗಳನ್ನು ಯುವ ಜನತೆಗೆ ತುಂಬಿಸುವ ಮೂಲಕ ಪರಸ್ಪರ ಅಸಹನೆ, ದ್ವೇಷದ ಭಾವನೆ ಬಿತ್ತಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಇಂತಹ ಸಣ್ಣ ಮಟ್ಟದ ಚಿಂತನೆಗಳಿಗೆ ಮಾರು ಹೋಗದೆ ಸ್ನೇಹ, ಪ್ರೀತಿ, ವಿಶ್ವಾಸದ ಮೂಲಕ ಒಟ್ಟಾಗಿ ದೇಶವನ್ನು ಕಟ್ಟಬೇಕಾಗಿದೆ ಎಂದು ಅವರು ಹೇಳಿದರು.
ದೇಶದಲ್ಲಿ ದಿನ ಕಳೆದಂತೆ ಸಂಪತ್ತಿನ ಅಸಮಾನತೆ ಹೆಚ್ಚಾಗುತ್ತಿದೆ. ಕೇವಲ ಶೇ.1ರಷ್ಟ್ರಿರುವ ಬಂಡವಾಳಶಾಹಿಗಳ ಹಿಡಿತದಲ್ಲಿ ದೇಶದ ಶೇ.60ರಷ್ಟು ಸಂಪತ್ತಿದೆ. ಇದರಿಂದ ಜನಸಾಮಾನ್ಯರ ತಲಾ ಆದಾಯವು ತೀರ ಕಡಿಮೆಯಾಗುತ್ತಿದೆ. ದೇಶದ ಬಹುತೇಕ ಜನತೆ ತಮ್ಮ ದುಡಿಮೆಯ ಬಹುಪಾಲು ಹಣವನ್ನು ಮಕ್ಕಳ ಶಿಕ್ಷಣಕ್ಕೆ ಹಾಗೂ ಆರೋಗ್ಯಕ್ಕೆ ವ್ಯಯ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ನಮ್ಮ ಸರಕಾರಗಳು ಜನಪರವಾದ ನೀತಿಗಳನ್ನು ಜಾರಿಗೆ ತರಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಕನ್ನಡ ಉಪನ್ಯಾಸಕ ಎಸ್.ರಾಮಲಿಂಗೇಶ್ವರ ಮಾತನಾಡಿ, ನಮ್ಮ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಬುದ್ಧ, ಬಸವಣ್ಣನ ಚಿಂತನೆಗಳು ಆದರ್ಶಗಳಾಗಬೇಕೆ ವಿನಃ ಜನವಿರೋಧಿ, ಪರಿಸರ ವಿರೋಧಿ ಜಾಹಿರಾತುಗಳಲ್ಲಿ ಭಾಗವಹಿಸುವ ಸಿನೆಮಾ ನಟ, ನಟಿಯರು ಹಾಗೂ ಕ್ರೀಡಾಪಟುಗಳಲ್ಲವೆಂದು ತಿಳಿಸಿದರು.