ಕಾಡು ಉಳಿದರೆ ಮಾತ್ರ ನಾಡು ಉಳಿದೀತು...

Update: 2019-03-20 19:01 GMT

ವನಮಹೋತ್ಸವ

ಭಾರತ ದೇಶದ ಜನತೆಗೆ ಅರಣ್ಯಗಳ ಗಿಡ ಮರಗಳ ಆವಶ್ಯಕತೆ, ಉಪಯೋಗ ಇವುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಂತೆ ಮಾಡಲು, ಅರಣ್ಯ ಸಂಪತ್ತನ್ನು ಕ್ರಮ ಬದ್ಧವಾಗಿ ವರ್ಧಿಸಲು ‘ವನಮಹೋತ್ಸವ’ ಎಂಬ ರಾಷ್ಟ್ರೀಯ ಸಪ್ತಾಹವನ್ನು 1950ರಿಂದ ಆಚರಿಸಲಾಗುತ್ತಿದೆ. ಈ ಆಚರಣೆಯ ಆಶಯದಂತೆ ‘‘ಮನೆಗೊಂದು ಮರ, ಊರಿಗೊಂದು ವನ ಬೆಳೆಸಿದರೆ ಕಾಡು ಬೆಳೆದು, ನಾಡು ಉಳಿದೀತು.

ನಿಸರ್ಗದ ಅತ್ಯಮೂಲ್ಯವಾದ ಕೊಡುಗೆ ಅರಣ್ಯ. ಮಾನವ, ಕಾಡು ಪ್ರಾಣಿಗಳ ಹಾಗೂ ಪಕ್ಷಿಗಳ ಅಳಿವು-ಉಳಿವು ಅರಣ್ಯದ ಅಸ್ತಿತ್ವದ ಮೇಲೆ ಅವಲಂಬಿತವಾಗಿದೆ. ಅರಣ್ಯ ನಾಶದಿಂದಾಗಿ ಮಾನವ ಕುಲಕ್ಕೆ ವಿಪತ್ತು ಬರುವುದರಲ್ಲಿ ಯಾವ ಸಂದೇಹವೂ ಇಲ್ಲ. ಮಾನವನ ಅವ್ಯಾಹತ ಹಸ್ತಕ್ಷೇಪದಿಂದಾಗಿ ಅರಣ್ಯ ನಾಶವಾಗುತ್ತಿದೆ. ವಿಶ್ವದ್ಯಾದಂತ ಪ್ರತಿ ವರ್ಷವೂ 5,000 ಜಾತಿ ಸಸ್ಯಗಳು ಹಾಗೂ ಪಕ್ಷಿಗಳು ಕಣ್ಮರೆಯಾಗುತ್ತಿವೆ. ಭಾರತ ದೇಶದಲ್ಲಿರಬೇಕಾದ ಅರಣ್ಯವು ಶೇ. 33 ಭಾಗ. ಆದರೆ ಉಪಗ್ರಹಗಳಿಂದ ಪಡೆದ ಮಾಹಿತಿ ಪ್ರಕಾರ ಈಗ ಇರುವುದು ಶೇ.10 ಭಾಗ ಎಂದು ತಿಳಿದು ಬಂದಿದೆ. ಕಾಡು ಪ್ರಾಣಿಗಳ, ಪಕ್ಷಿಗಳ ಸಂಖ್ಯೆ ಕಳೆದ 40 ವರ್ಷಗಳಲ್ಲಿ ಅರ್ಧದಷ್ಟು ಕಣ್ಮರೆಯಾಗಿದೆ ಎಂದು ಲಿವಿಂಗ್ ಪ್ಲಾನೆಟ್ 2017ರ ವರದಿಯಲ್ಲಿ ಪ್ರಕಟವಾಗಿದೆ. ಕಾಡು ಪ್ರಾಣಿಗಳು ವನದೇವತೆಯ ಆಭರಣಗಳು. ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆ

ಮರ ಬೆಳೆಸಿ, ಮಣ್ಣು ನೀರನ್ನು ಸಂರಕ್ಷಿಸಿ

ಅರಣ್ಯಗಳು ಮಣ್ಣನ್ನು ಸಂರಕ್ಷಿಸುವ ಹೊದಿಕೆಯಂತೆ. ತೇವ ಉಷ್ಣತೆಗಳನ್ನು ನಿಯಂತ್ರಣದಲ್ಲಿಟ್ಟು ಹವಾಮಾನದ ಮೇಲೂ ಪ್ರಭಾವ ಬೀರುತ್ತವೆ. ನಾಗರಿಕತೆ ಬೆಳೆದಂತೆ ಅರಣ್ಯಗಳ ನಾಶ ಹೆಚ್ಚಾಯಿತು. ನಾಗರಿಕರಲ್ಲಿ ಅರಣ್ಯದ ಮಹತ್ವ ತಿಳಿವಳಿಕೆ ನೀಡಲು 21 ಮಾರ್ಚ್ 1971ರಲ್ಲಿ “The Conference of the food and Agriculture organization”. ವಿಶ್ವ ಅರಣ್ಯ ದಿನ ಆಚರಿಸಲು ಕರೆ ನೀಡಿತು. ವಿಶ್ವ ಅರಣ್ಯ ದಿನ 2019ರ ವಿಷಯ “Forests and Educations”. ಭೌಗೋಳಿಕ ಸ್ಥಿತಿ, ಮಣ್ಣು ಮತ್ತು ಋತು ಬೇಧ ಮೊದಲಾದ ಕಾರಣಗಳಿಂದ ಉಂಟಾಗುವ ಹವೆ ವಾಯುಗುಣಗಳು ಅರಣ್ಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ.

ಪ್ರಪಂಚದ ಅರಣ್ಯಗಳನ್ನು ಮುಖ್ಯವಾಗಿ ಮೂರು ವರ್ಗಗಳನ್ನಾಗಿ ವಿಂಗಡಿಸಬಹುದು. ಶಂಕು ವೃಕ್ಷ ಅರಣ್ಯಗಳು, ಸಮಶೀತೋಷ್ಣವಲಯ ಅರಣ್ಯಗಳು ಮತ್ತು ಉಷ್ಣ ವಲಯದಲ್ಲಿ ಹಬ್ಬಿರುವ ಅರಣ್ಯಗಳು.

1)ಶಂಕು ವೃಕ್ಷಗಳ ಅರಣ್ಯಗಳು:

ಶಂಕುವಿನ ಆಕಾರದ ಕಾಯಿ ಬಿಡುವ ಮರಗಳು. ಇವು ತುಂದ್ರಾ ಪ್ರದೇಶದಿಂದ ದಕ್ಷಿಣಕ್ಕಿರುವ ತಂಪುಹವೆ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ, ಫರ್, ಪೈನ್ ಮರಗಳು ಇಂಥ ಅರಣ್ಯಗಳಲ್ಲಿರುತ್ತವೆ.

2) ಸಮಶೀತೋಷ್ಣವಲಯದ ಅರಣ್ಯಗಳು

ಸಮಶೀತೋಷ್ಣವಲಯದಲ್ಲಿರುವ ಅರಣ್ಯಗಳು ಕಾಲಕಾಲಕ್ಕೆ ಎಲೆ ಉದುರುವ ಮರಗಳ ಅರಣ್ಯ. ಓಕ್, ಎಲ್ಮ್, ದೇವದಾರ ಮೊದಲಾದ ಮರಗಳು.

3) ಉಷ್ಣ ವಲಯದಲ್ಲಿ ಹಬ್ಬಿರುವ ಕಾಡುಗಳು

ಉಷ್ಣವಲಯದಲ್ಲಿ ಹಬ್ಬಿರುವ ಕಾಲಕಾಲಕ್ಕೆ ಎಲೆ ಉದುರುವ ಮರಗಳ ಅರಣ್ಯ. ಭಾರತ, ಮ್ಯಾನ್ಮಾರ್‌ಗಳಲ್ಲಿ ಇಂಥ ಅರಣ್ಯಗಳನ್ನು ಕಾಣುತ್ತೇವೆ.

ಅರಣ್ಯದಿಂದಾಗುವ ಲಾಭಗಳು

ಅರಣ್ಯಗಳು ಮಳೆಬೀಳಲು ಸಹಾಯಕವಾಗಿವೆ, ಗಾಳಿಯ ಹೊಡೆತ, ನೀರಿನ ಕೊರತೆಗಳಿಂದ ರಕ್ಷಿಸಿ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಂಡು ನೆಲದಲ್ಲಿ ನೀರಿನ ತೇವ ನೆಲೆಸುವಂತೆ ಮಾಡುತ್ತವೆ. ಅರಣ್ಯಗಳು ಸುತ್ತಲಿನ ಪ್ರದೇಶದ ಹವಾಗುಣದ ಮೇಲೆ ವಿಶೇಷ ಪ್ರಭಾವ ಬೀರುತ್ತವೆ. ಕಾರಣಾಂತರಗಳಿಂದ ನೆಲದಲ್ಲಿ ಹುದುಗಿಹೋದ ಅರಣ್ಯಗಳು ಕಾಲಾಂತರದಲ್ಲಿ ಕಲ್ಲಿದ್ದಲು, ಕಲ್ಲೆಣ್ಣೆಗಳಂಥ ಇಂಧನಗಳಾಗಿ ಮಾರ್ಪಡುತ್ತವೆ. ಅರಣ್ಯವನ್ನು ರಕ್ಷಿಸಿದರೆ, ಅರಣ್ಯವು ನಮ್ಮನ್ನು ರಕ್ಷಿಸುತ್ತದೆ.

‘‘ರೋಗವಿಲ್ಲದ ಮಾನವನಿಲ್ಲ, ಔಷಧ ಗುಣವಿಲ್ಲದ ಸಸ್ಯವಿಲ್ಲ’’ ಎಂಬ ಗಾದೆಯಂತೆ ಹಲವಾರು ಅರಣ್ಯ ಸಸ್ಯಗಳು ಔಷಧಿಗಳಿಗೆ ಬಳಕೆಯಾಗುತ್ತವೆ. ಹಲವಾರು ವಿಧದ ಸಸ್ಯ ಜನ್ಯ ತೈಲಗಳು ಅರಣ್ಯ ಮೂಲದಿಂದ ದೊರೆಯುತ್ತವೆ. ಕಾಗದ, ಗಂಧದ ಎಣ್ಣೆ, ಅರಗು, ಕರ್ಪೂರದಂಥ ದ್ರವ್ಯಗಳಿಗೆ ಅರಣ್ಯಗಳು ಬೇಕು ಜನೋಪಯೋಗಿಯಾದ ಬಿದಿರು, ಮರಮಟ್ಟು, ಗೊಂದುರಾಳ, ಸಂಬಾರ ಪದಾರ್ಥಗಳಂಥ ಅವಶ್ಯ ವಸ್ತುಗಳು ಅರಣ್ಯದಲ್ಲಿ ಉತ್ಪತ್ತಿಯಾಗುತ್ತವೆ. ಚರ್ಮ, ದಂತ, ಮಾಂಸ ಮೊದಲಾದ ವಸ್ತುಗಳು ಅರಣ್ಯವಾಸಿಗಳಾದ ಪ್ರಾಣಿಗಳಿಂದ ದೊರಕುತ್ತದೆ.

ಅರಣ್ಯ ನಾಶದ ಕಾರಣಗಳು

ಕಾಡ್ಗಿಚ್ಚು, ಪ್ರಾಣಿಗಳು, ಕೀಟಗಳು ಮತ್ತು ರೋಗಗಳು, ನೈಸರ್ಗಿಕ ಕಾರಣಗಳು ಮತ್ತು ಮುಖ್ಯವಾಗಿ ಮನುಷ್ಯ ಅರಣ್ಯನಾಶಕ್ಕೆ ಕಾರಣನಾಗಿದ್ದಾನೆ.ಕಾಡ್ಗಿಚ್ಚು ಮನುಷ್ಯನ ಅಜಾಗರೂಕತೆಯಿಂದ ಅಥವಾ ವಿನಾಶಕಾರಿ ಭಾವನೆಯಿಂದಲೂ ಉಂಟಾಗಬಹುದು ಕಾಡು ಪ್ರಾಣಿಗಳಾದ ಆನೆ, ಕಾಡುಕೋಣ, ಕಾಡು ಹಂದಿ ಮುಂತಾದವುಗಳಿಂದಲೂ ಒಂದಿಷ್ಟು ಅರಣ್ಯ ನಾಶ ಉಂಟಾಗುವುದು. ಮಿಡತೆ ಮುಂತಾದ ಕೀಟಗಳೂ ಅರಣ್ಯಗಳನ್ನು ನಿರ್ಮೂಲ ಮಾಡುತ್ತವೆ. ಸೂಕ್ಷ್ಮಾಣು ಶಿಲೀಂಧ್ರಗಳಿಂದ ಹರಡುವ ರೋಗಗಳು ಅರಣ್ಯಗಳಿಗೆ ಮಾರಕ.

ಇತರ ನೈಸರ್ಗಿಕ ಕಾರಣಗಳು, ಮಳೆ, ಗಾಳಿಯಿಂದ ಸಾಕಷ್ಟು ಕಾಡು ನಾಶ ಸಂಭವಿಸುವುದಿದೆ. ನೆಲ ಜರಿದು ಅರಣ್ಯ ಸ್ವರೂಪ ಬದಲಾಗುತ್ತದೆ. ಇತ್ತೀಚೆಗೆ ಇಂತಹ ಅಪಾಯಗಳಿಂದ ಹೆಚ್ಚಿನ ಅರಣ್ಯಗಳು ನಾಶವಾಗುತ್ತಿವೆ. ಅರಣ್ಯ ನಾಶಕ್ಕೆ ಮುಖ್ಯ ಕಾರಣನಾದ ಮಾನವ ತನ್ನ ತೀರದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅರಣ್ಯನಾಶ ಮಾಡುತ್ತಿದ್ದಾನೆ. ತನಗೆ ಬೇಕಾದ ಕಟ್ಟಿಗೆಗೆ ಕಾಡನ್ನು ನಾಶಮಾಡಿದ್ದಾನೆ. ಕಾಡನ್ನು ಕಡೆದು ನಾಡು ಮಾಡಿದ್ದಾನೆ. ಈಗಾಗಲೇ ಭೂಮಿಯ ವಾತಾವರಣ ಪರಿಸರವನ್ನೆಲ್ಲ ಹಾಳು ಮಾಡಲಾಗಿದೆ. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವ ಪ್ರಕರಣಗಳು ಎಲ್ಲರಿಗೂ ತಿಳಿದದ್ದೇ. ಈ ಒತ್ತುವರಿಗೆ ಸಮಾಜದಲ್ಲಿ ಹೆಸರು ಮಾಡಿದವರು, ಗಣ್ಯರು ಮತ್ತು ಜನಪ್ರತಿನಿಧಿಗಳ ನೆರವಿನ ಹಸ್ತ ಇರುವುದೂ ಎಲ್ಲರಿಗೂ ಗೊತ್ತಿರುವ ವಿಷಯವೇ. ಇಂತಹ ಒತ್ತುವರಿಗಳಿಂದಾಗಿಯೂ ಗಿಡಮರಗಳ ಸಂಖ್ಯೆ ಕಡಿಮೆಯಾಗುತ್ತದೆ. ಪರಿಣಾಮ ಪರಿಸರ ಮತ್ತು ಜೀವವೈವಿಧ್ಯಕ್ಕೆ ದೊಡ್ಡ ಏಟು ಬೀಳುತ್ತದೆ. ಒತ್ತುವರಿ ಹಿನ್ನೆಲೆಯಲ್ಲಿ ಗಿಡಮರಗಳನ್ನು ನಿರ್ದಯವಾಗಿ ಕಡಿಯಲಾಗುತ್ತದೆ. ಈ ನಿಟ್ಟಿನಲ್ಲಿ ಕಾಡು ರಕ್ಷಿಸಲು ಅರಣ್ಯ ಇಲಾಖೆ ಮುಂದಾಗಬೇಕು.

ಅರಣ್ಯ ನಾಶದ ಪರಿಣಾಮ: ಪ್ರಪಂಚದೆಲ್ಲೆಡೆ ಎಲ್ಲಡೆ ಅರಣ್ಯ ನಾಶದ ಪ್ರಮಾಣ ಹೆಚ್ಚಾಗಿರುವುದರಿಂದ ಭೂಮಿಯ ಮೇಲೆ ಇಂಗಾಲದ ಪ್ರಮಾಣ ಹೆಚ್ಚಾಗಿದೆ. ಅದರಿಂದ ನಾವು ಹಸಿರುಮನೆ ಪರಿಣಾಮವನ್ನು ಎದುರಿಸುತ್ತಿದ್ದೇವೆ. ಮನುಷ್ಯನಿಗೆ ಜೀವಿಸಲು ಮುಖ್ಯವಾಗಿ ಬೇಕಾದದ್ದು ಆಮ್ಲಜನಕ. ಅರಣ್ಯಗಳು ಆಮ್ಲಜನಕದ ಕಣಜಗಳಾಗಿವೆ. ಬರಿದಾಗುವ ಕಾಡುಗಳು, ಭೂತಾಪ ಏರಿಕೆಗೆ ಕಾರಣವಾಗುತ್ತದೆ. ಅತಿಯಾದ ಚಳಿ, ಅತಿಯಾದ ಶಾಖ, ಚಂಡಮಾರುತಗಳ ಹೆಚ್ಚಳ ಮತ್ತು ಇಂಗಾಲ ಇತ್ಯಾದಿ ವಾಯುಗಳ ಹೊರಸೂಸುವಿಕೆ ಹೆಚ್ಚಳದಿಂದ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಇದರಿಂದಾಗಿ ನಗರಗಳಲ್ಲಿ ಉಸಿರಾಡಲು ಶುದ್ಧ ಗಾಳಿ ಸಿಗುವುದೇ ಕಷ್ಟವಾಗುತ್ತದೆ.

ಅರಣ್ಯ ಕಾಯ್ದೆಗಳು:

ಸರಕಾರ ಅರಣ್ಯ ಎಂದು ಕಾಯ್ದಿರಿಸುವ ಪ್ರದೇಶಗಳ ರಕ್ಷಣೆಗಾಗಿ ಅರಣ್ಯ ಕಾಯ್ದೆ ರೂಪಿಸಲಾಗಿದೆ. ಅರಣ್ಯಕ್ಕೆ ಸೇರಿದ ಭೂಮಿಯ ಒಡೆತನ ಯಾರದ್ದಾಗಿದ್ದರೂ ಕಾಯ್ದೆಗಳಿಗೆ ಸರ್ವವ್ಯಾಪ್ತಿಯಿದ್ದೇ ಇದೆ. ಅರಣ್ಯ ರಾಷ್ಟ್ರದ ಸಂಪತ್ತಾಗಿದೆ. ಅದರ ಏಳಿಗೆ-ನಾಶ ದೇಶದ ಏಳಿಗೆ-ವಿನಾಶಕ್ಕೆ ನಿಕಟವಾಗಿ ಹೊಂದಿಕೊಂಡಿದೆ.

Writer - ಜಗದೀಶ ವಡ್ಡಿನ, ಕಾರವಾರ

contributor

Editor - ಜಗದೀಶ ವಡ್ಡಿನ, ಕಾರವಾರ

contributor

Similar News