ಮನೆ ಖಾಲಿ ಮಾಡಲು ಕಾಲಾವಕಾಶ ಕೋರಿ ಯಶ್ ತಾಯಿ ಹೈಕೋರ್ಟ್‌ಗೆ ಅರ್ಜಿ

Update: 2019-03-22 16:06 GMT

ಬೆಂಗಳೂರು, ಮಾ.22: ನಟ ಯಶ್ ಅವರ ಬನಶಂಕರಿಯ ಬಾಡಿಗೆ ಮನೆ ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಯಶ್ ತಾಯಿಯಿಂದ ಮತ್ತೆ ಹೈಕೋರ್ಟ್‌ಗೆ ಮನೆ ಖಾಲಿ ಮಾಡಲು ಕಾಲಾವಕಾಶ ಕೋರಿ ಶುಕ್ರವಾರ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ. ಇನ್ನು ಅರ್ಜಿಯಲ್ಲಿ ಹಾಸನದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಆರು ತಿಂಗಳು ಬೇಕು. ಅಲ್ಲಿಯವರೆಗೆ ಬನಶಂಕರಿಯ ಮನೆಯಲ್ಲೇ ಉಳಿಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದು ಈ ವಾರದಲ್ಲೇ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಹೈಕೋರ್ಟ್ ಆದೇಶದಂತೆ ಇದೇ ತಿಂಗಳ 31ರೊಳಗೆ ಮನೆ ಖಾಲಿ ಮಾಡಬೇಕಿತ್ತು. ಕಳೆದ ಜನವರಿಯಲ್ಲೂ ಬಾಡಿಗೆ ಮನೆಯ 23 ಲಕ್ಷ ಹಣ ಪಾವತಿಸಲು ನಿರ್ಧಾರ ಮಾಡಿದ್ದರು. ಈಗ ಮತ್ತೆ ಹಣ ನೀಡದೇ ಸಮಯ ಕೇಳಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಬನಶಂಕರಿ 3ನೆ ಬ್ಲಾಕ್,6 ನೆ ಕ್ರಾಸ್‌ನ ಎಂ ಮುನಿಪ್ರಸಾದ್ ವನಜಾ ವೈದ್ಯ ದಂಪತಿಯ ಮನೆಯಲ್ಲಿ ಯಶ್ ಕುಟುಂಬ 2010 ಅಕ್ಟೋಬರ್‌ನಿಂದ ವಾಸವಿದ್ದಾರೆ. ಇನ್ನು 40 ಸಾವಿರ ತಿಂಗಳಿಗೆ ಇಲ್ಲಿ ಬಾಡಿಗೆ ಫಿಕ್ಸ್ ಆಗಿತ್ತು. ಆದರೆ 2013ರಿಂದ ಮನೆ ಬಾಡಿಗೆಯನ್ನು ಸಹ ನೀಡಿರಲಿಲ್ಲ. 2015 ರಲ್ಲಿ ಮನೆಯನ್ನು ಖಾಲಿ ಮಾಡಿಕೊಡಲು ವೈದ್ಯ ದಂಪತಿ ಕೇಳಿದ್ದರು. ಆದರೆ ಇದಕ್ಕೆ ಯಶ್ ತಾಯಿ ಪುಷ್ಪಾ ತಗಾದೆ ತೆಗೆದಿದ್ದರು. ಇದಕ್ಕೆ ವೈದ್ಯ ದಂಪತಿ 43ನೆ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿ ಬಾಡಿಗೆ ನೀಡಿಲ್ಲ ಎಂದಿದ್ದರು. ಇದಕ್ಕೆ ಯಶ್ ತಾಯಿ ಪುಷ್ಪಾ ಬಾಡಿಗೆಗೆ ಬಂದಾಗ ಮನೆ ಸಂಪೂರ್ಣ ಆಗಿರಲಿಲ್ಲ. ನಾವೇ 12.5 ಲಕ್ಷ ಖರ್ಚು ಮಾಡಿ ಮಾಡಿಸಿಕೊಂಡಿದ್ದಾಗಿ ಹೇಳಿದ್ದರು. ಇದಕ್ಕೆ ವೈದ್ಯ ದಂಪತಿ ತಮ್ಮ ಮನೆ ಎನ್ನುವ ರೀತಿ ಎಲ್ಲ ನಮ್ಮ ಗಮನಕ್ಕೆ ತರದೇ ಮಾಡಿಸಿದ್ದಾಗಿ ಆರೋಪಿಸಿದ್ದರು. ವಾದ ಪ್ರತಿವಾದ ಆಲಿಸಿದ ಸಿಟಿ ಸಿವಿಲ್ ನ್ಯಾಯಾಲಯ 2018 ಎಪ್ರಿಲ್ 7ರಂದು ತೀರ್ಪು ನೀಡಿತ್ತು. 2013ರಿಂದ ಇಲ್ಲಿಯತನಕ ಪ್ರತಿ ತಿಂಗಳು 40 ಸಾವಿರದಂತೆ ಬಾಡಿಗೆ ಹಣ ನೀಡಲು ತಾಕೀತು ಮಾಡಿತ್ತು. ಜೊತೆಗೆ ಶೆ. 9ರಷ್ಟು ಬಡ್ಡಿಯನ್ನ ಸಹ ನೀಡುವಂತೆ ಸೂಚಿಸಿತ್ತು. ಇದನ್ನ ಪ್ರಶ್ನಿಸಿ ಯಶ್ ತಾಯಿ ಪುಷ್ಪಾಮತ್ತೆ ಹೈಕೋರ್ಟ್ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸಿದ್ದರು.

ಈ ವೇಳೆ ಹೈ ಕೋರ್ಟ್‌ನಲ್ಲಿ ಯಶ್ ತಾಯಿಗೆ ಭಾರಿ ಹಿನ್ನಡೆ ಯಾಗಿತ್ತು. ಹೈಕೋರ್ಟ್ ವಿಭಾಗೀಯ ಪೀಠ ಸೆಪ್ಟಂಬರ್ 5ರಂದು ಅರ್ಜಿಯನ್ನ ವಜಾಗೊಳಿಸಿ ಬಾಡಿಗೆ ಹಣ ಪಾವತಿಸಿದರೆ 2019ರ ಮಾರ್ಚ್ 31ರತನಕ ಮನೆ ವಾಸಕ್ಕೆ ಪರ್ಮಿಷನ್ ಇದೆ ಎಂದು ಹೇಳಿತ್ತು. ಜೊತೆಗೆ ಸಿಟಿ ಸಿವಿಲ್ ಕೋರ್ಟ್ ವಿಧಿಸಿದ್ದ ಬಡ್ಡಿಯನ್ನೂ ಶೇ.9ರಿಂದ ಶೇ.6ಗೆ ಇಳಿಸಿತ್ತು. ಆದರೆ ಮೂರು ತಿಂಗಳ ಬಾಡಿಗೆಯನ್ನ ಇನ್ನೂ ಯಶ್ ತಾಯಿ ಪುಷ್ಪಾ ನೀಡಿಲ್ಲ. ಈಗ ಹೈಕೋರ್ಟ್‌ಗೆ ಮತ್ತೆ ಸಮಯ ಕೇಳಿ ಅರ್ಜಿ ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News