ನಿರುದ್ಯೋಗ ಕಾಂಗ್ರೆಸ್ ಚುನಾವಣಾ ಪ್ರಚಾರದ ಪ್ರಮುಖ ವಿಷಯ: ಸ್ಯಾಮ್ ಪಿತ್ರೋಡ

Update: 2019-03-24 18:35 GMT

ಹೊಸದಿಲ್ಲಿ, ಮಾ. 24: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದೇ ಕಾಂಗ್ರೆಸ್ ಚುನಾವಣಾ ಪ್ರಚಾರದ ಪ್ರಮುಖ ವಿಷಯ ಎಂದು ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿ ಸದಸ್ಯ ಸ್ಯಾಮ್ ಪಿತ್ರೋಡ ಹೇಳಿದ್ದಾರೆ.

 ಬಹು ದೀರ್ಘ ಕಾಲದಿಂದ ಗಾಂಧಿ ಕುಟುಂಬದ ಸಲಹೆಗಾರರಾಗಿರುವ ಹಾಗೂ ಸಾಗರೋತ್ತರ ಕಾಂಗ್ರೆಸ್‌ನ ವರಿಷ್ಠರಾಗಿರುವ ಪಿತ್ರೋಡ ಕೃಷಿ ಬಿಕ್ಕಟ್ಟು ಕೂಡ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆ. ಇದನ್ನು ಪರಿಹರಿಸುವ ಅಗತ್ಯ ಇದೆ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತಮ ಪ್ರಭಾವ ಬೀರಲಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದರು. ಚುನಾವಣಾ ಪ್ರಚಾರದಲ್ಲಿ ಯಾವ ಪ್ರಮುಖ ವಿಷಯದ ಬಗ್ಗೆ ಕಾಂಗ್ರೆಸ್ ಗಮನ ಕೇಂದ್ರೀಕರಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉದ್ಯೋಗ, ಉದ್ಯೋಗ, ಉದ್ಯೋಗ ಎಂದರು.

 ದೇಶ ನಿರುದ್ಯೋಗದ ಬಿಕ್ಕಟ್ಟು ಎದುರಿಸುತ್ತಿದೆ. ನಾವು ಹೊಸ ಉದ್ಯೋಗ ಸೃಷ್ಟಿಸುತ್ತಿಲ್ಲ. ಈಗಾಗಲೇ ಉದ್ಯೋಗಗಳನ್ನು ನಾಶ ಮಾಡಿದ್ದೇವೆ. ಆದುದರಿಂದ ಹೊಸ ಉದ್ಯೋಗವನ್ನು ಸೃಷ್ಟಿಸುವುದು ನಮ್ಮೆದುರು ಇರುವ ಸವಾಲು ಎಂದು ಅವರು ಹೇಳಿದರು.

ನಗದು ನಿಷೇಧ ಹಾಗೂ ಜಿಎಸ್‌ಟಿಯಂತಹ ಅಂಶಗಳು ದೇಶದಲ್ಲಿ ಉದ್ಯೋಗ ಇಳಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News