ಮಾಜಿ ಸಚಿವ ರಾಮದಾಸ್ ಆತ್ಮಹತ್ಯೆ ಯತ್ನ ಪ್ರಕರಣ: ಪ್ರಕರಣದಿಂದ ಮುಕ್ತಗೊಳಿಸಿದ ನ್ಯಾಯಾಲಯ

Update: 2019-04-01 17:03 GMT

ಬೆಂಗಳೂರು, ಎ.1: ಮಾಜಿ ಸಚಿವ ರಾಮದಾಸ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣದಿಂದ ರಾಮದಾಸ್‌ರನ್ನು ಮುಕ್ತಗೊಳಿಸಿ ಆದೇಶಿಸಿದೆ.

ಈ ಪ್ರಕರಣದಿಂದ ತಮ್ಮನ್ನು ಮುಕ್ತಗೊಳಿಸಬೇಕೆಂದು ಕೋರಿ ರಾಮದಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದರ್ ಅವರಿದ್ದ ಪೀಠದಲ್ಲಿ ನಡೆಯಿತು. ಸೂಕ್ತ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ನ್ಯಾಯಪೀಠವು ರಾಮದಾಸ್ ಅವರನ್ನು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪದಿಂದ ಮುಕ್ತಗೊಳಿಸಿತು.

ಚಿಕ್ಕಮಗಳೂರು ಮೂಲದ ಮಹಿಳೆ ಪ್ರೇಮಕುಮಾರಿ ಎಂಬುವವರು ಮಾಜಿ ಸಚಿವ ರಾಮದಾಸ್ ಅವರು ತಮ್ಮನ್ನು ಮದುವೆಯಾಗುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಸುದ್ದಿಗಾರರ ಬಳಿ ಹೇಳಿಕೆಯನ್ನು ನೀಡುತ್ತಿದ್ದಂತೆಯೇ ರಾಮದಾಸ್ ಅವರು ಅತಿಥಿ ಗೃಹವೊಂದಕ್ಕೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಮನೆಯವರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಮದಾಸ್ ವಿರುದ್ಧ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News