‘ಬಿಜೆಪಿ ಪರ ಪ್ರಚಾರ ಮಾಡುವವರ ಖರ್ಚು ಯಾರ ಖಾತೆಗೆ ಸೇರಿಸುತ್ತೀರಾ?’

Update: 2019-04-01 17:24 GMT

ಬೆಂಗಳೂರು, ಎ.1: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಪರವಾಗಿ ಆರೆಸ್ಸೆಸ್, ವಿಎಚ್‌ಪಿ, ಬಜರಂಗದಳದವರು ಪ್ರಚಾರ ಮಾಡುತ್ತಿದ್ದು, ಇದರ ವೆಚ್ಚವನ್ನು ಯಾರ ಖಾತೆಗೆ ಸೇರಿಸಲಾಗುತ್ತಿದೆ ಎಂದು ಸ್ವತಂತ್ರ ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.

ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ವೆಚ್ಚ ವೀಕ್ಷಕರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಸ್ವತಂತ್ರ ಅಭ್ಯರ್ಥಿಗಳು, ಅಧಿಕಾರದಲ್ಲಿರುವವರ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವವರ ಮೇಲೆ ನಿಗಾವಹಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.

ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸ್ವತಂತ್ರವಾಗಿ ಯಾರೂ ಪ್ರಚಾರ ಮಾಡಲು ಅವಕಾಶವಿಲ್ಲ. ಆಯೋಗದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅನುಮತಿಯ ನಂತರ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಡಿಯೋ ಮಾಡಲಾಗುತ್ತದೆ. ಸಂಪೂರ್ಣ ಮಾಹಿತಿ ಪಡೆದು ಹೋಗುತ್ತಾರೆ. ಒಂದು ವೇಳೆ ಅಭ್ಯರ್ಥಿಯ ಅನುಮತಿಯಿಲ್ಲದೆ ಪ್ರಚಾರ ಮಾಡಿದರೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸ್ವತಂತ್ರ ಅಭ್ಯರ್ಥಿಗಳು ಆಯೋಗಕ್ಕೆ ದೂರು ನೀಡಲು ಮುಂದಾದರೆ ದೂರು ಪಡೆಯಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ನಾವು ನೀಡಿರುವ ದೂರುಗಳಿಗೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ನಾಮಪತ್ರ ಸಲ್ಲಿಸಿದ ಬಳಿಕ ಅಧಿಕಾರಿಗಳು ಯಾರೂ ಕೈಗೆ ಸಿಗುತ್ತಿಲ್ಲ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಯಾರೂ ಸ್ಪಂದನ ನೀಡದಿದ್ದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಇನ್ನು ಮುಂದೆ ಯಾವುದೇ ಸಭೆಗೆ ಆಹ್ವಾನಿಸಬೇಡಿ. ನಿಮ್ಮಿಂದ ಏನೂ ಸಾಧ್ಯವಾಗುವುದಿಲ್ಲ ಎಂದು ದೂರಿದರು.

ಚುನಾವಣಾ ವೆಚ್ಚ ವೀಕ್ಷಕ ರಾಕೇಶ್ ಕುಮಾರ್ ಮಾತನಾಡಿ, ಪಾರದರ್ಶಕ ಚುನಾವಣೆ ಪ್ರಕ್ರಿಯೆಯನ್ನು ನಡೆಸಲು ಎಲ್ಲರೂ ಸಹಕಾರ ನೀಡಬೇಕು. ಸರಿಯಾದ ಸಮಯಕ್ಕೆ ಚುನಾವಣಾ ಆಯೋಗ ನಿಗದಿ ಮಾಡಿರುವ ಪಟ್ಟಿಗಳಲ್ಲಿ ವೆಚ್ಚವನ್ನು ಭರ್ತಿ ಮಾಡಿ ನೀಡಬೇಕು. ಎ.4, 8, 12, 16 ರಂದು ನಾಲ್ಕು ಹಂತದಲ್ಲಿ ವೆಚ್ಚದ ಮಾಹಿತಿ ನೀಡಿ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಹಾಯಕ ವೆಚ್ಚ ವೀಕ್ಷಕ ಡಾ.ಟಿ.ಎಸ್.ಹನುಮಂತೇಗೌಡ ಮಾತನಾಡಿ, ಪ್ರತಿಯೊಬ್ಬರಿಗೂ 70 ಲಕ್ಷ ನಿಗದಿ ಮಾಡಿದ್ದು, ಅದನ್ನಷ್ಟೇ ಖರ್ಚು ಮಾಡಬೇಕು. ಅಭ್ಯರ್ಥಿಯು ಚುನಾವಣಾ ವೆಚ್ಚ ನಿರ್ವಹಣೆಗೆ ಪ್ರತ್ಯೇಕ ಖಾತೆಯನ್ನು ತೆಗೆಯಬೇಕು. ಮೂರು ಹಂತದಲ್ಲಿ ದೈನಂದಿನ ವೆಚ್ಚದ ವರದಿ ಸಲ್ಲಿಸಬೇಕು. ಚುನಾವಣೆ ಮುಗಿದ ಬಳಿಕ ಒಂದು ತಿಂಗಳೊಳಗೆ ಪ್ರಮಾಣ ಪತ್ರದೊಂದಿಗೆ ವೆಚ್ಚದ ವಿವರದ ಮಾಹಿತಿ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮತ್ತೊಬ್ಬ ವೆಚ್ಚ ವೀಕ್ಷಕ ಬೈಭರ್ ಬಡೋಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News