ಬಡವರಪರ ಯೋಜನೆಗಳನ್ನು ಗೇಲಿ ಮಾಡುವುದೇ ಬಿಜೆಪಿ ಕೆಲಸ: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು, ಎ.3: ಬಿಜೆಪಿಗೆ ಬಡವರ ಪರವಾದ ಯೋಜನೆಗಳನ್ನು ಗೇಲಿ ಮಾಡುವುದೆ ಕೆಲಸ. ಇಂತವರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವೆಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಬುಧವಾರ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಈಡೇರಿಸುವುದು ನಮ್ಮ ಆದ್ಯತೆಯಾಗಲಿದೆ. ಅದು ಅಸಾಧ್ಯವಾದರು ಸಾಧಿಸಿ ತೋರಿಸಲಿದ್ದೇವೆಂದು ತಿಳಿಸಿದರು.
ಕಾಂಗ್ರೆಸ್ ಯಾವತ್ತೂ ಭಾವನೆಗಳೊಂದಿಗೆ ಚೆಲ್ಲಾಟವಾಡುವುದಿಲ್ಲ. ವಾಸ್ತವದ ರಾಜಕಾರಣ ಮಾಡಿಕೊಂಡು ಬಂದಿದೆ. ಸ್ವಾತಂತ್ರ ನಂತರ ಅಸಾಧ್ಯವಾದುದನ್ನು ಸಾಧಿಸಿ ದೇಶವನ್ನು ಅಭಿವೃದ್ದಿಗೊಳಿಸಿದೆ. ಆದರೆ, ಬಿಜೆಪಿ ಕೇವಲ ಜನರಲ್ಲಿ ಕೋಮುಭಾವನೆ ಸೃಷ್ಟಿಸಿ ಸ್ವಾರ್ಥ ರಾಜಕಾರಣ ಮಾಡುತ್ತಿದೆ. ಹೀಗಾಗಿ ಜನತೆಗೆ ಯಾರಿಗೆ ಮತ ಹಾಕಬೇಕೆಂದು ಗೊತ್ತಿದೆ ಎಂದು ಅವರು ಹೇಳಿದರು.