ಚಪ್ಪಲಿ ಪ್ರದರ್ಶಿಸಿ ವಾಟಾಳ್ ನಾಗರಾಜ್ ಪ್ರಚಾರಕ್ಕೆ ಚಾಲನೆ
Update: 2019-04-03 18:26 GMT
ಬೆಂಗಳೂರು, ಎ.3: ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ನಗರದ ಲಾಲ್ಬಾಗ್ ಮುಖ್ಯದ್ವಾರದಿಂದ ತೆರೆದ ಜೀಪಿನಲ್ಲಿ ಪ್ರಚಾರ ಆರಂಭಿಸಿದರು.
ತಮ್ಮ ಗುರುತಾದ ಚಪ್ಪಲಿಯನ್ನು ಪ್ರದರ್ಶಿಸುವ ಮೂಲಕ ತಮಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಆಧಾರದ ಮೇಲೆ ಪ್ರಾಮಾಣಿಕವಾಗಿ ಚುನಾವಣೆ ನಡೆಯಬೇಕು, ಚುನಾವಣೆಯಲ್ಲಿ ಯಾವುದೇ ಲೋಪಗಳಿಲ್ಲದಂತೆ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು ಎಂಬುದು ತಮ್ಮ ಬಯಕೆ. ಈ ಬಗ್ಗೆ ಅರಿವು ಮೂಡಿಸುವುದು ನನ್ನ ಕರ್ತವ್ಯವಾಗಿದೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.
ಲಾಲ್ಬಾಗ್ ಮುಖ್ಯ ದ್ವಾರದಿಂದ ಟೀಚರ್ಸ್ ಕಾಲೇಜು, ಸೌತ್ ಎಂಡ್, ಜಯನಗರ ಮೂರನೇ ಬ್ಲಾಕ್, 4 ನೇ ಬ್ಲಾಕ್, 9ನೇ ಬ್ಲಾಕ್ ಹಾಗೂ ರಾಗಿಗುಡ್ಡದ ಮೂಲಕ ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದರು.