ಸದಾನಂದಗೌಡ ಸ್ವಂತ ಸಾಧನೆ ಮೇಲೆ ಮತ ಕೇಳಲಿ: ಡಾ.ಜಿ.ಪರಮೇಶ್ವರ್

Update: 2019-04-08 13:54 GMT

ಬೆಂಗಳೂರು, ಎ.8: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ, ತಾವು ಮಾಡಿದ ಸಣ್ಣ ಕಾರ್ಯಕ್ರಮವನ್ನು ತೋರಿಸಿ ಮತಹಾಕಿ ಎಂದು ಪ್ರಚಾರ ಮಾಡಲಿ. ಅದನ್ನು ಬಿಟ್ಟು, ಮೋದಿಗೆ ಮತ ಹಾಕಿ ಎಂದು ಕೇಳುವ ನಿಮಗೆ ಜನರೇಕೆ ಮತ ಹಾಕಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.

ಸೋಮವಾರ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಪರವಾಗಿ ಅವರು ಮತಯಾಚನೆ ಮಾಡಿದರು.

ರೈತರ ಸಂಕಷ್ಟ ದೂರ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಕೇಂದ್ರ ಸರಕಾರ ಐದು ವರ್ಷದಲ್ಲಿ ಸಣ್ಣ ಯೋಜನೆಯನ್ನೂ ರೈತರಿಗೆ ನೀಡಿಲ್ಲ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಾಲಮನ್ನಾ ಮಾಡಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಕೆ ಶಿಕ್ಷಣ ನೀಡಿಲ್ಲ. ಇದು ಬಿಜೆಪಿ ಸರಕಾರದ ಸಾಧನೆ ಎಂದು ಅವರು ಟೀಕಿಸಿದರು.

ಜಿಎಸ್ಟಿ ಜಾರಿಗೆ ತರುವ ಸಂದರ್ಭದಲ್ಲಿ ಕರ್ನಾಟಕದ ಪರವಾಗಿ ಕೃಷ್ಣಭೈರೇಗೌಡ ಸಲಹೆ, ಸೂಚನೆ ನೀಡಿದ್ದರು. ಆದರೆ, ಇಂದು ಜಿಎಸ್ಟಿ ಬಡವರ ವಿರೋಧಿಯಾಗಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡವರು ಅಂಗಡಿಯನ್ನೇ ಮುಚ್ಚುವ ಸ್ಥಿತಿಗೆ ಕೇಂದ್ರ ಸರಕಾರ ತಂದಿದೆ ಎಂದು ಪರಮೇಶ್ವರ್ ವಾಗ್ದಾಳಿ ನಡೆಸಿದರು.

ಮೋದಿ ಸರಕಾರದಲ್ಲಿ ಬರೋಬ್ಬರಿ 14 ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಿಸಲಾಗಿದೆ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದರೂ, ಇಂಧನದ ಬೆಲೆ ಕಡಿಮೆ ಮಾಡಿಲ್ಲ. ಬ್ಯಾರೆಲ್ ಬೆಲೆ ಕಡಿಮೆಯಾಗಿದ್ದರಿಂದ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಉಳಿತಾಯವಾಗಿದೆ, ಆ ಹಣವೆಲ್ಲಾ ಎಲ್ಲಿ ಎಂದು ಅವರು ಪ್ರಶ್ನಿಸಿದರು.

ಸದಾನಂದ ಗೌಡ ಈ ಕ್ಷೇತ್ರದಲ್ಲಿ ತಮ್ಮ ಮುಖವನ್ನೇ ತೋರಿಸಿಲ್ಲ. ಈಗ ಮತ ನೀಡಿ ಎಂದು ಬಂದಿದ್ದಾರೆ. ಅದು ಅವರ ಸಾಧನೆ ಮೇಲಲ್ಲಾ, ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ ಎಂದು ಪರಮೇಶ್ವರ್ ವ್ಯಂಗ್ಯವಾಡಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಝಮೀರ್ ಅಹ್ಮದ್ ಖಾನ್, ಅಭ್ಯರ್ಥಿ ಕೃಷ್ಣಭೈರೇಗೌಡ, ಶಾಸಕರಾದ ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News