ಫ್ಯಾಶಿಸ್ಟ್ ಶಕ್ತಿಗಳನ್ನು ಬೇರು ಸಮೇತ ಕಿತ್ತು ಹಾಕಬೇಕು: ದಿನೇಶ್ ಗುಂಡೂರಾವ್

Update: 2019-04-09 15:29 GMT

ಬೆಂಗಳೂರು, ಎ.9: ಕೇಂದ್ರ ಸರಕಾರ ದೇಶದಲ್ಲಿನ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ದೇಶದಲ್ಲಿ ಅಧಿಕವಾಗುತ್ತಿರುವ ಫ್ಯಾಶಿಸ್ಟ್ ಶಕ್ತಿಗಳನ್ನು ಬೇರು ಸಮೇತ ಕಿತ್ತು ಹಾಕುಬೇಕಾದ ತುರ್ತು ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಧಿಕಾರದ ದುರಾಸೆಗಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಸಾಂವಿಧಾನಿಕ ಸಂಸ್ಥೆ ಸೇರಿದಂತೆ ರಾಜ್ಯಪಾಲರ ಕಚೇರಿಯನ್ನೇ ದುರುಪಯೋಗ ಮಾಡಿಕೊಳ್ಳುತ್ತಿದೆ. ಹೀಗಾಗಿ, ಬಿಜೆಪಿಯ ದುರಾಡಳಿತವನ್ನು ಕೊನೆಗೊಳಿಸಲು ರಾಜ್ಯದಲ್ಲಿ ಮೈತ್ರಿ ಸರಕಾರ ಹೊಂದಾಣಿಕೆ ಮಾಡಿಕೊಂಡಿದೆ ಎಂದು ತಿಳಿಸಿದರು.

ಯಾವುದೇ ರಾಜಕೀಯ ಪಕ್ಷವಾಗಲಿ ಅನೇಕ ಏಳು ಬೀಳುಗಳನ್ನು ಕಂಡೇ ಕಾಣುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಹೊರತಾಗಿಲ್ಲ. ನೂರು ವರ್ಷಗಳನ್ನು ಪೂರೈಸಿದ ಪಕ್ಷ ಯಾವಾಗಲೂ ಮೊದಲ ಸ್ಥಾನದಲ್ಲೇ ಇರಬೇಕು ಅನ್ನುವುದು ತಪ್ಪು. ಕಾಂಗ್ರೆಸ್ ಇತಿಹಾಸವನ್ನು ಗಮನಿಸಿದಾಗ ಎರಡು ಬಾರಿ ಪಕ್ಷ ಇಬ್ಭಾಗವಾಗಿದೆ. ಆದರೂ ಪಕ್ಷ ಗಟ್ಟಿಯಾಗಿ ನೆಲೆ ನಿಂತಿದೆ. ಇಂದಿರಾ ಗಾಂಧಿಯೂ ಸೋಲು ಅನುಭವಿಸಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲೇ ಇಲ್ಲ ಅನ್ನುವುದು ತಪ್ಪು ಎಂದು ಪಕ್ಷದ ಏಳು ಬೀಳುಗಳನ್ನು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಮೈತ್ರಿಯ ಘಟಬಂಧನ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯಾಗಿಯೇ ಎಲ್ಲ ಚುನಾವಣೆಗಳನ್ನೂ ಎದುರಿಸುತ್ತೇವೆ ಎಂದ ಅವರು, ಚಾಮರಾಜನಗರ, ಮೈಸೂರು, ಬೆಂಗಳೂರು ಉತ್ತರ, ತುಮಕೂರು ಹಾಗೂ ಮಂಡ್ಯದಲ್ಲಿ ಗೆಲ್ಲುತ್ತೇವೆ. ಇದು ಸಾಧ್ಯವಾಗುವುದು ಮೈತ್ರಿ ಸರಕಾರದ ಹೊಂದಾಣಿಕೆಯಿಂದ ಎಂದರು. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷವೂ ಸಂಪೂರ್ಣ ಬೆಂಬಲ ನೀಡಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ಹೇಗೆ ಕ್ರಮ ತೆಗೆದುಕೊಳ್ಳಬೇಕು. ಯಾವಾಗ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಕಾಂಗ್ರೆಸ್ ವರಿಷ್ಠರು ನಿರ್ಧರಿಸುತ್ತಾರೆ ಎಂದರು.

ರಾಹುಲ್ ಗಾಂಧಿ ಸಾಮಾನ್ಯ ಜನರ ಬಗ್ಗೆ ಚಿಂತಿಸುತ್ತಾರೆ. ಕಾಂಗ್ರೆಸ್ ಪಕ್ಷ ಗೆದ್ದರೆ ಬೇರೆ ಕಾರಣದಿಂದ ಎನ್ನುತ್ತಾರೆ. ಸೋತರೆ ರಾಹುಲ್ ಗಾಂಧಿಯ ಸೋಲು ಎಂದು ನವ ಮಾಧ್ಯಮಗಳಲ್ಲಿ ಬಿಜೆಪಿ ಬಣ್ಣಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಗಡ್ಕರಿ ಪ್ರಧಾನಿ ಅಭ್ಯರ್ಥಿ:

ಬಿಜೆಪಿಯಲ್ಲಿ ಒಡಕಿರುವುದೇನೂ ಗೌಪ್ಯವಾಗಿಲ್ಲ. ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಲಾಗುತ್ತಿರುವ ನರೇಂದ್ರ ಮೋದಿ ಪಕ್ಷದಲ್ಲೇ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನವಿದೆ. ಅಲ್ಲದೆ, ನಿತಿನ್ ಗಡ್ಕರಿಯೂ ಪ್ರಧಾನಿ ಅಭ್ಯರ್ಥಿಯ ಮುಂಚೂಣಿಯಲ್ಲಿದ್ದಾರೆ ಎಂದರು.

ಬಿಜೆಪಿ ಅಡವಿಟ್ಟಿತ್ತು: ಬಿಬಿಎಂಪಿ ಉಳಿದಿರುವುದೇ ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಮೈತ್ರಿಯಿಂದಾಗಿ. ಬಿಜೆಪಿ ರಾಜ್ಯದ ರಾಜಧಾನಿಯನ್ನೇ ಅಡಮಾನ ಇಟ್ಟಿತ್ತು. ಅಡಮಾನ ಇಟ್ಟಿದ್ದನ್ನೆಲ್ಲ ಬಿಡಿಸಿದ್ದು ಮೈತ್ರಿ ಸರಕಾರ. ಹೀಗಾಗಿ, ಸಾಮಾಜಿಕ ಕಾಳಜಿಯೊಂದಿಗೆ ರಾಜ್ಯದ ಸ್ಥಳೀಯ ಚುನಾವಣೆಯಲ್ಲೂ ಮೈತ್ರಿ ಮುಂದುವರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರ ನಿರ್ಲಕ್ಷ್ಯ : ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ದಲಿತರಿಗೆ ಅವಕಾಶ ನೀಡಿದೆ. ಆದರೆ, ಬಿಜೆಪಿ ಈ ಸಮುದಾಯಗಳನ್ನೆಲ್ಲ ನಿರ್ಲಕ್ಷ್ಯ ಮಾಡಿದೆ ಎಂದು ತಿಳಿಸಿದರು.

ರಾಜ್ಯಕ್ಕೆ ಅನ್ಯಾಯ: ಬಿಜೆಪಿ ಎಂಪಿಗಳು ರಾಜ್ಯಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ನಿರಂತರವಾಗಿ ತಾರತಮ್ಯವಾಗುತ್ತಿದೆ. ಮಹಾದಾಯಿ ವಿಚಾರ ಇರಬಹುದು ಅಥವಾ ಮಹಾರಾಷ್ಟ್ರಕ್ಕೆ ಹಾಗೂ ನಮ್ಮ ರಾಜ್ಯಕ್ಕೆ ಅನುದಾನ ನೀಡುವ ವಿಚಾರಗಳನ್ನೇ ಗಮನಿಸಿದಾಗ ರಾಜ್ಯಕ್ಕೆ ತೀರಾ ಅನ್ಯಾಯವಾಗಿರುವುದು ಸ್ಪಷ್ಟವಾಗುತ್ತದೆ ಎಂದರು.

ಪ್ರಧಾನಿಯನ್ನು ಪ್ರಶ್ನಿಸುವಂತಿಲ್ಲ: ದೇಶದ ಸಮಸ್ಯೆ ಏನು ಅಂದರೆ ಪ್ರಧಾನ ಮಂತ್ರಿ ನರೇಂದ್ರ ಮಂತ್ರಿಯನ್ನು ಸುದ್ದಿಗೋಷ್ಠಿಯಲ್ಲಿ ಕೂರಿಸಿ ಪ್ರಶ್ನೆ ಮಾಡುವ ಆಗಿಲ್ಲ. ಪ್ರಶ್ನೆ ಮಾಡುವವರೆಲ್ಲಾ ದೇಶದ್ರೋಹಿಗಳಾಗುತ್ತಾರೆ. ಇದು ದೇಶದ ದುರಂತ. ಜಿಎಸ್‌ಟಿಯ ಕಲ್ಪನೆ ಕಾಂಗ್ರೆಸ್ ಪಕ್ಷದ್ದು, ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿ ಆಗಿದಾಗ ಜಿಎಸ್‌ಟಿಯನ್ನು ತೀವ್ರವಾಗಿ ವಿರೋಧಿಸಿದ್ದರು. ಇದಷ್ಟೇ ಅಲ್ಲದೆ ಅಭಿವೃಧಿಯ ಹಲವು ಯೋಜನೆಗಳು ಕಾಂಗ್ರೆಸ್ ಪಕ್ಷದವು, ಬಿಜೆಪಿ ನಕಲು ಮಾಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News