ಪ್ರಧಾನಿ ಬಹಿರಂಗ ಪ್ರಚಾರದಿಂದ ಪ್ರತಿಪಕ್ಷಗಳಲ್ಲಿ ನಡುಕ: ಡಿ.ವಿ.ಸದಾನಂದಗೌಡ

Update: 2019-04-11 18:26 GMT

ಬೆಂಗಳೂರು, ಎ.11: ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಇತ್ತೀಚೆಗೆ ಎರಡು ಕಡೆ ಬಹಿರಂಗ ಪ್ರಚಾರ ನಡೆಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿರುವುದು ಪ್ರತಿಪಕ್ಷಗಳಲ್ಲಿ ನಡುಕು ಹುಟ್ಟಿಸಿದೆ ಎಂದು ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಹೇಳಿದರು.

ಇಂದು ಬೆಳಗ್ಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ನಂದೀಶ್ ರೆಡ್ಡಿ, ಚಿತ್ರನಟಿ ಶೃತಿ, ಸ್ಥಳೀಯ ಬಿಬಿಎಂಪಿ ಸದಸ್ಯರು, ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸುತ್ತಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನರೇಂದ್ರ ಮೋದಿ ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಪಕ್ಷದ ಪರ ಪ್ರಚಾರ ನಡೆಸಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. 28 ಕ್ಷೇತ್ರಗಳಲ್ಲೂ ಮೋದಿ ಅವರ ಸಂದೇಶ ಸಂಚಲನ ಸೃಷ್ಟಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಐದು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ಆಡಳಿತ ನೀಡಿದ ಕೀರ್ತಿ ನರೇಂದ್ರಮೋದಿ ಮತ್ತು ನಮ್ಮ ಪಕ್ಷಕ್ಕೆ ಸಲ್ಲುತ್ತದೆ. ಹಿಂದಿನ ಯುಪಿಎ ಅವಧಿಯಲ್ಲಿ ಆಕಾಶದಿಂದ ನೆಲದವರೆಗೂ ಹಗರಣಗಳ ಸರಮಾಲೆಯೇ ಸೃಷ್ಟಿಯಾಗಿತ್ತು. ಇದರಿಂದ ವಿಶ್ವದಲ್ಲಿ ಭಾರತದ ಮುಕುಟಕ್ಕೆ ಕಳಂಕ ಬಂದಿತ್ತು ಎಂದು ಸದಾನಂದಗೌಡ ವಿಷಾದ ವ್ಯಕ್ತಪಡಿಸಿದರು.

ಮೋದಿ ಪ್ರಧಾನಿಯಾದ ಮೇಲೆ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದರು. ಇಂದು ಅಮೆರಿಕ, ಚೀನಾ, ಜಪಾನ್ ಸೇರಿದಂತೆ ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮೋದಿ ಅವರ ಜನಪ್ರಿಯತೆಯನ್ನು ಸಹಿಸದೆ ವಿರೋಧ ಪಕ್ಷಗಳು ವಿನಾಕಾರಣ ಸುಳ್ಳು ಆರೋಪ ಮಾಡುತ್ತಿವೆ. ಇತಿಹಾಸದಲ್ಲೇ ದೇಶವೇ ನನ್ನ ಕುಟುಂಬ ಎಂದ ಮೊದಲ ಪ್ರಧಾನಿ ಎಂದರೆ ನರೇಂದ್ರಮೋದಿ ಎಂದು ಸದಾನಂದಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ಸಂಸದನಾದ ಮೇಲೆ ಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಬೇರೆಯವರ ರೀತಿ ಮಾಡದೇ ಇರುವ ಕೆಲಸಗಳಿಗೆ ಪುಕ್ಕಟೆ ಪ್ರಚಾರ ಪಡೆಯುವ ಅಗತ್ಯ ನನಗಿಲ್ಲ. ನಾನು ಮಾಡಿರುವ ಕೆಲಸಗಳು ಮತದಾರರಿಗೆ ತಿಳಿದಿದೆ. ಈ ಬಾರಿ ಯಾರು ಎಷ್ಟೇ ಅಪಪ್ರಚಾರ ನಡೆಸಿದರೂ ನನ್ನನ್ನು ಆಯ್ಕೆ ಮಾಡುವುದರಲ್ಲಿ ಯಾವುದೇ ಸಂಶಯ ಬೇಡ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದನಾಗುವ ಬದಲು ಕ್ಷೇತ್ರದಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಸಮಸ್ಯೆಗಳಿತ್ತು. ಕುಡಿಯುವ ನೀರು, ಸಮುದಾಯ ಭವನಗಳ ನಿರ್ಮಾಣ, ಶೌಚಾಲಯ, ಅಗತ್ಯವಿರುವ ಕಡೆ ರಸ್ತೆಗಳ ಅಗಲೀಕರಣ, ಮಹಿಳೆಯರ ಸಬಲೀಕರಣ, ಬಡವರಿಗೆ ನಿವೇಶನ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಸದಾನಂದಗೌಡ ಹೇಳಿದರು.

ಯಾರು ಏನೇ ಅಪಪ್ರಚಾರ ಟೀಕೆ ಮಾಡಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜನ ಪ್ರಬುದ್ಧರಾಗಿದ್ದು, 2ನೇ ಬಾರಿಗೆ ನನ್ನನ್ನು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಲಿದ್ದಾರೆ ಎಂದು ಸದಾಂದಗೌಡ ವಿಶ್ವಾಸ ವ್ಯಕ್ತಪಡಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News