ಸೌಹಾರ್ದ, ಸಹಬಾಳ್ವೆ ಆಶಯದ ಪ್ರಕಾಶ್ ರಾಜ್ ಪ್ರಣಾಳಿಕೆಯಲ್ಲಿ ಏನೇನಿದೆ?

Update: 2019-04-12 14:54 GMT

ಬೆಂಗಳೂರು, ಎ.12: ಸೌಹಾರ್ದ, ಸಹಬಾಳ್ವೆ ಆಶಯ, ಸಾಮಾಜಿಕ ನ್ಯಾಯದ ಪಾಲನೆ ಹಾಗೂ ನ್ಯಾಯಯುತ ಬೆಂಗಳೂರು ನಿರ್ಮಾಣದ ಭರವಸೆಯನ್ನು ಒಳಗೊಂಡ ಪ್ರಣಾಳಿಕೆಯನ್ನು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಬಿಡುಗಡೆ ಮಾಡಿದರು.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಲ್ಲಿ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶವನ್ನು ಮುನ್ನಡೆಸಬೇಕಾದ ಸರಕಾರದಲ್ಲಿ ಹಾಗೂ ಸಮಾಜದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಿದೆ ಮತ್ತು ದ್ವೇಷದ, ಅಸಹನೆಯ ವಾತಾವರಣ ಹೆಚ್ಚುತ್ತಿದೆ ಎನಿಸಿದಾಗ ತಳಮಳಗೊಂಡವನು ನಾನು. ಈಗ ಅನಿರೀಕ್ಷಿತವಾಗಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಜನರಪರ ಧ್ವನಿಯಾಗಲು ಬಯಸುತ್ತಿದ್ದೇನೆ ಎಂದು ತಿಳಿಸಿದರು.

ರಾಜಕರಣವು ದುಷ್ಟರ ತಾಣವೆಂದೂ, ಜನಸಾಮಾನ್ಯರು ರಾಜಕಾರಣಿಗಳನ್ನು ಬಯ್ಯುತ್ತಾ, ಅದರಿಂದ ದೂರವೇ ಉಳಿಯಬೇಕೆಂದೂ ತಿಳಿದಿರುವುದು ಸ್ಥಾಪಿತ ಶಕ್ತಿಗಳಿಗೆ ಹಿತವನ್ನುಂಟು ಮಾಡಿದೆ. ಅದನ್ನು ಬದಲಿಸಬೇಕೆಂದು ಮತ್ತು ಬದಲಿಸಲು ಸಾಧ್ಯವೆಂದು ದಿನೇ ದಿನೇ ನನಗೆ ಖಚಿತವಾಗುತ್ತಿದೆ. ಈ ಪಯಣದಲ್ಲಿ ನಾನು ಒಂಟಿಯಾಗಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸಂಘಟನೆ ಹಾಗೂ ಪಕ್ಷಗಳ ಗಡಿಗಳನ್ನು ದಾಟಿ ಸಾವಿರಾರು ಜನ ಈ ದಾರಿಯಲ್ಲಿ ಜೊತೆಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸರಕಾರಿ ಶಾಲೆಗಳನ್ನು ಬಲಪಡಿಸುವುದು, ಕೆರೆಗಳ ಪುನರ್ಜೀವನ, ಹಸಿರು ಹೊದಿಕೆ ಹೆಚ್ಚಿಸುವುದು, ಕಸ-ಪಾರ್ಕ್‌ಗಳ ನಿರ್ವಹಣೆ, ಭ್ರಷ್ಟಾಚಾರ ನಿಗ್ರಹ, ಸಾಮಾನ್ಯ ನಾಗರಿಕ ಸಂಹಿತೆ ವಿರೋಧ ಮತ್ತು ದೂರು ನೀಡಲು ಮುಂದೆ ಬರುವ ಧೈರ್ಯದಿಂದ ಮಾತ್ರ ಸಾಧ್ಯ. ಇದನ್ನೆಲ್ಲ ಮಾಡಬಯಸುವ ನಾಗರಿಕರಿಗೆ ಒತ್ತಾಸೆಯಾಗಿ ಜನಪ್ರತಿನಿಧಿಗಳು ನಿಂತರೆ ಅದ್ಭುತವನ್ನೇ ಸಾಧಿಸಬಹುದು. ಅದನ್ನು ನಾನು ಮಾಡಿ ತೋರಿಸಲು ಬಯಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂವಿಧಾನದಲ್ಲಿ ಆರೋಗ್ಯದ ಹಕ್ಕು: ಸಂವಿಧಾನದಲ್ಲಿ ಆರೋಗ್ಯದ ಹಕ್ಕನ್ನೂ ಒಂದು ಮೂಲಭೂತ ಹಕ್ಕನ್ನಾಗಿ ಮಾಡುವುದಕ್ಕಾಗಿ ಒಂದು ತಿದ್ದುಪಡಿಯನ್ನು ತರುವ ಕೆಲಸ ಇಲ್ಲಿಯವರೆಗೂ ಆಗಿಲ್ಲ. ಗುಣಮಟ್ಟದ ಆರೋಗ್ಯ ಸೇವೆಯ ಲಭ್ಯತೆಯನ್ನು ಒಂದು ಮೂಲಭೂತ ಹಕ್ಕನ್ನಾಗಿ ಮಾಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಆಶ್ವಾಸನೆ ನೀಡಿದರು.

ನನ್ನ ಪ್ರಣಾಳಿಕೆ ದೇಶದ ಪ್ರಮುಖ ನಗರಗಳ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವಂತಿದೆ. ಅಲ್ಲದೆ, ಹತ್ತು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿರುವ ಎಲ್ಲರಿಗೂ ಕೈಗೆಟುಕುವ ದರದ ವಸತಿ ವ್ಯವಸ್ಥೆಯನ್ನು ಮಾಡಲು ವಿಶೇಷ ಯೋಜನೆ ರೂಪಿಸಲಾಗುತ್ತದೆ.

ಪ್ರಣಾಳಿಕೆಯ ಅಂಶಗಳು

* ಮಹಿಳಾ ಹಾಗೂ ಹಿರಿಯ ನಾಗರಿಕ ಸಮಸ್ಯೆಗಳಿಗೆ ಪರಿಹಾರ

* ಕಸ ಮತ್ತು ಮಾಲಿನ್ಯದ ಸಮಸ್ಯೆಗೆ ರಚನಾತ್ಮಕ ಪರಿಹಾರ

* ರಾಜಧಾನಿಯ ಉದ್ಯಾನ ಹಾಗೂ ಕೆರೆಗಳ ಪುನಶ್ಚೇತನ

* ಸಾರ್ವತ್ರಿಕ ಆರೋಗ್ಯ ಸೇವೆ

* ನೀರು ಮತ್ತು ನಗರ ನೈರ್ಮಲ್ಯ

* ಆಧುನಿಕ ಮತ್ತು ಕೈಗೆಟುಕುವ ಸಂಚಾರ ವ್ಯವಸ್ಥೆ

* ಅಸಂಘಟಿತ ವಲಯದ ಕಾರ್ಮಿಕರೆಡೆ ಗಮನ

* ಮಕ್ಕಳ ಅಭಿವೃದ್ಧಿ; ಎಲ್ಲರಿಗೂ ಸಮಾನ ಶಿಕ್ಷಣ

* ಕ್ರೀಡೆ, ಕಲೆ ಹಾಗೂ ಸಂಸ್ಕೃತಿಗೆ ಹೆಚ್ಚು ಒತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News