ಬೆಂಗಳೂರು ನಗರದ ಗತಕಾಲದ ವೈಭವವನ್ನು ಮರಳಿ ತರುವುದೇ ನನ್ನ ಗುರಿ: ಬಿ.ಕೆ.ಹರಿಪ್ರಸಾದ್

Update: 2019-04-15 12:45 GMT

ಬೆಂಗಳೂರು, ಎ. 15: ಉದ್ಯಾನನಗರಿ ಬೆಂಗಳೂರಿನ ಗತಕಾಲದ ವೈಭವವನ್ನು ಮರಳಿ ತರುವುದು ನನ್ನ ಪ್ರಮುಖ ಗುರಿಯಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಇಂದಿಲ್ಲಿ ಹೇಳಿದ್ದಾರೆ.

ಸೋಮವಾರ ಪದ್ಮನಾಭ ನಗರ, ಬೊಮ್ಮನಹಳ್ಳಿ ಹಾಗೂ ಗೋವಿಂದರಾಜ ನಗರ ಕ್ಷೇತ್ರಗಳಲ್ಲಿ ಕಾರ್ಯಕರ್ತರೊಂದಿಗೆ ಭರ್ಜರಿ ಪ್ರಚಾರ ನಡೆಸಿದರು. ಬೆಳಗ್ಗೆ ಪದ್ಮನಾಭನಗರದ ಚಿಕ್ಕಲ್ಲಸಂದ್ರ ದೇವಸ್ಥಾನದಿಂದ ಪ್ರಾರಂಭವಾದ ರೋಡ್ ಶೋ ಪದ್ಮನಾಭ ನಗರ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಅನಂತರ ಮಧ್ಯಾಹ್ನ ಬೊಮ್ಮನಹಳ್ಳಿ ವೃತ್ತದ ಬಳಿ ಇರುವ ಎಚ್.ಪಿ.ಪವರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಬಹುಜನ ಸಂಘರ್ಷ ಸಮಿತಿಯ ಮುಖಂಡರೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದರು. ಸಂಜೆ ರಾಜಾಜಿನಗರದ 6ನೆ ಬ್ಲಾಕ್‌ನ ಬಿಬಿಎಂಪಿ ಸಮುದಾಯ ಭವನದ ಬಳಿ ಇರುವ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ರೋಡ್‌ಶೋ ಗೋವಿಂದರಾಜನಗರ ಕ್ಷೇತ್ರಗಳಲ್ಲಿ ಸಂಚರಿಸಿತು. ಈ ವೇಳೆ ಮಾತನಾಡಿದ ಹರಿಪ್ರಸಾದ್, ಬೆಂಗಳೂರು ನಗರ ಅದರಲ್ಲೂ ದಕ್ಷಿಣ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ನನ್ನದೆ ಆದ ಕನಸುಗಳಿವೆ. ಇಂದು ಬೆಂಗಳೂರು ನಗರದ ದಕ್ಷಿಣ ಭಾಗ ದೇಶದಲ್ಲಷ್ಟೇ ಅಲ್ಲ, ಪ್ರಪಂಚದಾದ್ಯಂತ ಹೆಸರುವಾಸಿ. ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಯ ಜೊತೆಗೆ ಇನ್ನೂ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಗಮನ ಸೆಳೆದು ಅನುದಾನ ತರುವುದು ನನ್ನ ಜವಾಬ್ದಾರಿಯಾಗಿರಲಿದೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಲಾಲ್‌ಬಾಗ್‌ನಂತಹ ಪಾರ್ಕ್ ನಿರ್ಮಿಸಲು ಅಗತ್ಯ ಜಾಗಗಳಿವೆ. ಈ ರೀತಿಯ ಉದ್ಯಾನವನಗಳನ್ನು ನಿರ್ಮಿಸುವುದರ ಮೂಲಕ ಗಾರ್ಡನ್ ಸಿಟಿ ಎನ್ನುವ ಹೆಸರನ್ನು ತರುವುದು ನನ್ನ ಗುರಿಯಾಗಿರಲಿದೆ ಎಂದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ಮೇಕೆದಾಟು ಬಳಿ ನಿರ್ಮಿಸಲು ಚಿಂತಿಸಲಾಗಿರುವ ಅಣೆಕಟ್ಟಿನಿಂದ ನೀರು ತರುವುದು ಸೂಕ್ತ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರಯತ್ನ ಪಡುವುದಾಗಿ ಅವರು ಭರವಸೆ ನೀಡಿದರು. ಬಿ.ಕೆ.ಹರಿಪ್ರಸಾದ್ ಪರವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಬೈಕ್ ರ್ಯಾಲಿ ನಡೆಸಿ ಎಲ್ಲರ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News