ಲೋಕಸಭೆ ಚುನಾವಣೆ: ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ
ಬೆಂಗಳೂರು, ಎ. 17: ‘ಪ್ರಜಾಪ್ರಭುತ್ವದ ಹಬ್ಬ’ ಎಂದು ಪರಿಗಣಿಸಲಾಗಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕಾ ಛಾಯಾಗ್ರಹಕರಿಗಾಗಿ (ಹವ್ಯಾಸಿ ಸೇರಿದಂತೆ) ಚುನಾವಣಾ ಆಯೋಗ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ.
ಎ.18 ಮತ್ತು ಎ.23ರಂದು ಕ್ಲಿಕ್ಕಿಸಲಾದ ಛಾಯಾಚಿತ್ರಗಳನ್ನು ಕಳುಹಿಸಬೇಕಿದೆ. ಈ ಸ್ಪರ್ಧೆಯು ಕೇವಲ ಕಾರ್ಯನಿರತ-ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕರಿಗಾಗಿ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ತಿಳಿಸಲಾಗಿದೆ.
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮತದಾನ ದಿನದ ಸಂಭ್ರಮ, ಮತದಾನ ಪ್ರೋತ್ಸಾಹಿಸಲು ಸ್ಪರ್ಧೆ ಆಯೋಜಿಸಲಾಗಿದೆ. ಯಾವುದೇ ರಾಜಕೀಯ ಪಕ್ಷಗಳ ಚಿನ್ಹೆ, ಅಭ್ಯರ್ಥಿಗಳ ಪ್ರಚಾರ ಹೊಂದಿರಬಾರದು. ಛಾಯಾಗ್ರಾಹಕರು 5 ಛಾಯಾಚಿತ್ರ ಕಳುಹಿಸಬಹುದು. ಸ್ಪರ್ಧಿಸುವ ಛಾಯಾಗ್ರಾಹಕರು ಅಥವಾ ಹವ್ಯಾಸಿ ಛಾಯಾಗ್ರಾಹಕರು ಗುರುತಿನ ಚೀಟಿಯೊಂದಿಗೆ ಫೋಟೋ ಕಳುಹಿಸಬೇಕು. ಚಿತ್ರಗಳಲ್ಲಿ ಯಾವುದೇ ವಾಟರ್ ಮಾರ್ಕ್, ಲೋಗೋ ಅಥವಾ ಕಾಪಿರೈಟ್ ಇರಕೂಡದು. ಇ-ಮೇಲ್ ಮೂಲಕ ಮಾತ್ರ ಛಾಯಾಚಿತ್ರ ಕಳುಹಿಸಬಹುದು.
ಎಲ್ಲ ಚಿತ್ರಗಳೂ 20 ಮೆಗಾಬೈಟ್ ಅಥವಾ ಸಣ್ಣದಾಗಿದ್ದು ಜೆಪಿಇಜಿ ಅಥವಾ ಜೆಪಿಜಿ ಮಾದರಿಯಲ್ಲಿರಬೇಕು. ಸ್ಪರ್ಧೆಗೆ ಕಳುಹಿಸುವ ಎಲ್ಲ ಚಿತ್ರಗಳು ಮೇಲ್ಕಾಣಿಸಿದ ದಿನಗಳಲ್ಲಿ ಕ್ಲಿಕ್ಕಿಸಿರಬೇಕು. ತೀರ್ಪುಗಾರರ ನಿರ್ಧಾರವೇ ಅಂತಿಮ. ಸಂಪರ್ಕ ವಿಳಾಸ, ಪೂರ್ಣ ಹೆಸರು, ವಿಳಾಸ, ಫೋನ್/ಮೊಬೈಲ್ ಸಂಖ್ಯೆ, ಇಮೇಲ್ ಐಡಿಯೊಂದಿಗೆ ಕಳುಹಿಸಬೇಕು.
ಚಿತ್ರ ಶೀರ್ಷಿಕೆಗಳೊಂದಿಗೆ ಮತ್ತು ಸ್ಪರ್ಧಿಗಳ ಗುರುತಿನ ಚೀಟಿ ಮತ್ತು ಸಂಪರ್ಕ ವಿಳಾಸದೊಂದಿಗೆ ಆಯೋಗದ ಇಮೇಲ್ karloksabha.pro@gmail. Com ಗೆ ಕಳುಹಿಸಿಕೊಡಬೇಕು. ಸ್ಪರ್ಧೆಗೆ ಪ್ರವೇಶಾತಿ ಕಳುಹಿಸಲು ಎ.28ರ ಸಂಜೆ 5ಗಂಟೆ ಅಂತಿಮ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.