ಮಾನವೀಯತೆ ಮೆರೆದ ಚಿತ್ರಗಳು

Update: 2019-04-20 18:00 GMT

ಭಾಗ-14

2002ರ ಗುಜರಾತಿನ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಜಗತ್ತಿನ ಪ್ರಧಾನ ಸುದ್ದಿಪತ್ರಿಕೆಗಳಲ್ಲಿ ನೂರಾರು ಚಿತ್ರಗಳು ಪ್ರಕಟಗೊಂಡವು. ಆದರೆ ಎರಡು ಚಿತ್ರಗಳು ಮಾತ್ರ ಗೋಧ್ರಾ ನರಮೇಧದ ಮುಖವಾಣಿಯಾಗಿ ಅಮರಗೊಂಡವು. ಈ ಎರಡೂ ಚಿತ್ರಗಳು ಬೇರೆ ಬೇರೆ ಪತ್ರಿಕೆಗಳ ಮುಖಪುಟಗಳಾಗಿ ರಾರಾಜಿಸಿದವು. ಒಂದು ಚಿತ್ರದಲ್ಲಿ ವ್ಯಕ್ತಿಯೊಬ್ಬನ ಮುಖದಲ್ಲಿ ದು:ಖವೇ ಮಡುಗಟ್ಟಿ ನಿಂತಿದ್ದರೆ ಮತ್ತೊಂದರಲ್ಲಿ ಹಿಂಸೆಯೇ ಮೈವೆತ್ತಿ ನಿಂತಂತಿದೆ. ತನ್ನವರ ಪ್ರಾಣಭಿಕ್ಷೆಗಾಗಿ ಎರಡೂ ಕೈ ಜೋಡಿಸಿ ಬೇಡಿಕೊಳ್ಳುವ ಚಿತ್ರ ನೋಡುಗರ ಮನದಲ್ಲಿ ಕರುಣೆ ಮೂಡಿಸಿದರೆ ಮಗದೊಂದು ಚಿತ್ರದಲ್ಲಿರುವ ವ್ಯಕ್ತಿ ಒಂದು ಕೈಯಲ್ಲಿ ಕಬ್ಬಿಣದ ಸಲಾಕೆಯನ್ನು ಇನ್ನೊಂದು ಕೈಯನ್ನು ಮುಷ್ಟಿಬಿಗಿಹಿಡಿದು ಸಂಹಾರಕ್ಕೆ ಸನ್ನದ್ಧನಾಗಿರುವುದನ್ನು ತೋರಿಸುತ್ತದೆ.

ಇಲ್ಲಿ ನಮ್ಮ ಉದ್ದೇಶ ರಾಜಕಾರಣವನ್ನೋ ಗುಜರಾತಿನ ಕೋಮುದಂಗೆಯ ಹಿನ್ನೆಲೆಯನ್ನೋ ಕೆದಕುವುದಲ್ಲ. ಬದಲಿಗೆ ಈ ಎರಡೂ ಚಿತ್ರಗಳ ಮೂಲಕ ಈ ಇಬ್ಬರಲ್ಲಿ ಆದ ಬದಲಾವಣೆಯನ್ನು ಮಾನವೀಯ ನೆಲೆಯಲ್ಲಿ ನೋಡುವುದಾಗಿದೆ. ಆಕಸ್ಮಿಕವಾಗಿ ಬಲಿಪಶುಗಳಾದ ಈ ಇಬ್ಬರೂ ಕಾಲ ಸರಿದಂತೆ ತಮ್ಮಿಳಗೆ ಆದ ಪರಿವರ್ತನೆಯನ್ನು ವಿವರಿಸುವುದಾಗಿದೆ. 2002ರ ಸಂದರ್ಭದಲ್ಲಿ ಅತಿ ಹೆಚ್ಚು ಬಿಂಬಿಸಲಾದ ಈ ಎರಡೂ ಚಿತ್ರಗಳ ಆ ಮುಖಗಳು ಹಾಗೆಯೇ ಉಳಿದುಕೊಳ್ಳಲಿಲ್ಲ. ಆ ಮುಖಗಳ ಹಿಂದಿರುವ ಮನಸ್ಥಿತಿ ಮತ್ತು ಕಾಲಾಂತರದಲ್ಲಿ ಅವರ ಮನಸ್ಸು ಗಳಲ್ಲಿ ಮನೆಮಾಡಿದ ಮಾನವೀಯತೆ ಇದೆಯಲ್ಲ ಅದು ತನ್ನದೇ ಆದ ರೋಚಕತೆ ಹೊಂದಿದೆ. ಚಿತ್ರಗಳು ಮಾಡುವ ಪರಿಣಾಮ ಗಳು ಸಾಮಾನ್ಯದಲ್ಲ ಎಂದು ಹೇಳುವುದೇ ನಮಗಿಲ್ಲಿ ಮುಖ್ಯ.

ಕೈ ಜೋಡಿಸುತ್ತಿರುವ ಆ ವ್ಯಕ್ತಿ ಅಹಮದಾಬಾದಿನ ಒಬ್ಬ ಸಾಮಾನ್ಯ ದರ್ಜಿ. ಆರ್ಕೋ ದತ್ತಾ ಎಂಬ ಜರ್ನಲಿಸ್ಟ್ ತೆಗೆದ ಈ ಚಿತ್ರ ರಾಯಿಟರ್ಸ್‌ ಮೂಲಕ ಪ್ರಕಟಗೊಂಡು ಜನಸಾಮಾನ್ಯರ ಸ್ಥಿತಿ ದಂಗೆಯ ಸಂದರ್ಭದಲ್ಲಿ ಎಷ್ಟು ದಯನೀಯವಾಗುತ್ತದೆ ಎಂಬುದನ್ನು ಸಮಾಜಕ್ಕೆ ತೋರಿಸುತ್ತದೆ. ಕೈಯಲ್ಲಿ ಕಬ್ಬಿಣದ ಸರಳನ್ನು ಹಿಡಿದ ಅಶೋಕ್ ಮೋಚಿ ಎಂಬಾತನ ಚಿತ್ರ ಸೆರೆ ಹಿಡಿದವರು ಮುಂಬೈ ಮಿರರ್ ಪತ್ರಿಕೆಯ ಛಾಯಾಗ್ರಾಹಕ ಸೆಬಾಸ್ಟಿಯನ್ ಡಿಸೋಜ.

ಇಲ್ಲಿ ಗಮನಿಸಬೇಕಾದ ವಿಚಾರವೊಂದಿದೆ. 2002 ರಲ್ಲಿ ನಡೆದ ಈ ಕೋಮುಗಲಭೆಯ ಕುರಿತು 2012 ರಲ್ಲಿ ಅಂದರೆ ಒಂದು ದಶಕದ ನಂತರ ಕೇರಳದ ಕಣ್ಣೂರಿನಲ್ಲಿ ನರಸಂಹಾರದ ಒಂದು ದಶಕ ಎಂಬ ಸೆಮಿನಾರ್ ಆಯೋಜಿಸಲಾಗಿರುತ್ತದೆ. ಹತ್ತು ವರ್ಷಗಳ ಹಿಂದಿನ ಆ ಎರಡು ಮುಖಚಿತ್ರಗಳು 2012 ರಲ್ಲಿ ಮಾನವೀಯತೆಯ ಮಹತ್ವವನ್ನು ಸಾರುವಂತೆ ಬದಲಾಗುತ್ತದೆ ಎಂದರೆ ಎಷ್ಟೊಂದು ದೊಡ್ಡ ವಿಚಾರವಲ್ಲವೇ. ಕುತೂಹಲದ ಸಂಗತಿಯೆಂದರೆ ಈ ಇಬ್ಬರೂ ಮೂಲತ: ಗುಜರಾತಿನ ಪ್ರಜೆಗಳಾದರೂ ಪರಸ್ಪರ ಮೊದಲ ಸಲ ಭೇಟಿಯಾದದ್ದು ದೂರದ ಕೇರಳದಲ್ಲಿ. ಯಾವುದೋ ಕಾಲದ ಚಿತ್ರದಲ್ಲಿರುವ ವ್ಯಕ್ತಿಗಳು ಇನ್ನಾವುದೋ ಕಾಲದಲ್ಲಿ ಯಾವುದೇ ಹಗೆಯಾಗಲಿ, ದ್ವೇಷವಾಗಲಿ, ಸಣ್ಣ ಕಹಿಯಾಗಲಿ ಉಳಿಸಿಕೊಳ್ಳದೇ ಸ್ನೇಹಿತರಾಗುತ್ತಾರೆಂದರೆ ಹೇಗಿರುತ್ತದೆಯಲ್ಲ.ಭಾರತದ ನಿಜವಾದ ವೌಲ್ಯವಿರುವುದು ಪರಸ್ಪರರನ್ನು ಪ್ರೀತಿಸುವುದರಲ್ಲಿಯೇ ವಿನಹ ದ್ವೇಷಿಸುವುದರಲ್ಲಿ ಅಲ್ಲ.ಕೇರಳದ ಈ ವೇದಿಕೆಯಲ್ಲಿ ಈ ಇಬ್ಬರೂ ಕೂಡಿ ಹಿಂದಿ ಬಾರದ ಕೇರಳಿಗರ ಎದುರು ಸೌಹಾರ್ದತೆ ಸಾರುವ ಹಳೆಯ ಹಿಂದಿ ಚಿತ್ರಗೀತೆ ‘‘ಹೈ ಪ್ರೀತ್ ಜಹಾಂ ಕೀ ರೀತ್ ಸದಾ...’’ಎಂದು ಹಾಡುತ್ತಾ ವೈಮನಸ್ಯವನ್ನು ಮರೆಯುತ್ತಾರೆ.ಮಾನವೀಯತೆಯನ್ನು ಮರೆಯುತ್ತಾರೆ.

ಕಣ್ಣೂರಿನಲ್ಲಿ ತನ್ನ ಕುರಿತ ಪುಸ್ತಕವೊಂದರ ಬಿಡುಗಡೆ ಮಾಡುತ್ತ ಅನ್ಸಾರಿ ‘ಈ ಹಿಂದೆಯೂ ಪುಣೆಯ ನಿವೃತ್ತ ಸೇನಾಧಿಕಾರಿ ಆನಂದ್ ಶ್ರಾಫ್ ಅಲ್ಲದೇ ಅನೇಕ ಮಂದಿ ನನ್ನಲ್ಲಿ ಕ್ಷಮೆ ಕೋರಿದ್ದಾರೆ.ಇಂದು ಸೋದರ ಆಶೋಕ್ ಮೋಚಿ ಕೂಡ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು ನನ್ನಲ್ಲಿ ನೈತಿಕ ಸ್ಥೈರ್ಯ ತುಂಬಿದೆ;ಇದು ಮನವೀಯತೆಯ ಹೊಸ ಅಧ್ಯಾಯವೊಂದನ್ನು ಆರಂಭಿಸಿದೆ’ ಎನ್ನುತ್ತಾನೆ. ‘ದಂಗೆಯ ನಂತರದ ಈ ದಶಕದಲ್ಲಿ ನನಗೆ ಮನವೀಯತೆಗೂ ಮಿಗಿಲಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬ ಅರಿವಾಗಿದೆ’ ಎಂದು ಅಶೋಕ್ ಮೋಚಿ ನುಡಿಯುತ್ತಾನೆ. ಅಸಹಾಯಕತೆ ಮತ್ತು ಕ್ರೌರ್ಯವನ್ನು ಹೊದ್ದ ಆ ಎರಡು ಮುಖಗಳು ಕೊನೆಗೆ ಮಾನವೀಯತೆಯ ಸಾಗರ ಸೇರಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News