ದೇಶದಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು: ನಂದನ್ ನೀಲೆಕಣಿ

Update: 2019-04-22 16:51 GMT

ಬೆಂಗಳೂರು, ಎ.22: ನೋಟು ಅಮಾನ್ಯೀಕರಣದ ಬಳಿಕ ದೇಶದಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ಸಿಗುತ್ತಿದೆ ಎಂದು ಇನ್ಫೋಸಿಸ್ ಟೆಕ್ನಾಲಜೀಸ್‌ನ ಅಧ್ಯಕ್ಷ ನಂದನ್ ನೀಲೆಕಣಿ ಹೇಳಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಎಫ್‌ಐಸಿಸಿಐ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೋಟು ಅಮಾನ್ಯೀಕರಣಕ್ಕೂ ಹಿಂದಿನ ತಿಂಗಳು ನೂರು ಸಾವಿರ ಕೋಟಿ ನಗದು ರಹಿತ ಹಣಕಾಸು ವ್ಯವಹಾರ ನಡೆದಿತ್ತು. ಆದರೆ, ನೋಟ್ ಬ್ಯಾನ್ ನಂತರದ ತಿಂಗಳು ಸುಮಾರು ನೂರಾರು ಮಿಲಿಯನ್ ನಗದು ರಹಿತ ವ್ಯವಹಾರ ನಡೆದಿದೆ ಎಂದರು.

ದೇಶದಲ್ಲಿ ಇದುವರೆಗೂ ಸುಮಾರು 1.2 ಬಿಲಿಯನ್ ಜನರಿಗೆ ಆಧಾರ್ ಕಾರ್ಡ್ ನೀಡಲಾಗಿದೆ. ಈಗ ಹೊಸದಾಗಿ ಇ-ಆಧಾರ್ ಜಾರಿಗೆ ಬಂದಿದ್ದು, ಬ್ಯಾಂಕಿಂಗ್ ಕೆಲಸಗಳು ಸುಲಭವಾಗಿ ನಡೆಯುತ್ತಿವೆ. ಈ ಮೊದಲು ಕಾಗದದ ರೂಪದಲ್ಲಿದ್ದ ಆಧಾರ್ ಕಾರ್ಡ್ ಇಕೆವೈಸಿ ಆಗಿದೆ. ಇದನ್ನು ಬಳಕೆ ಮಾಡುವುದರಿಂದ ಬ್ಯಾಂಕಿಂಗ್ ಕೆಲಸ ಸುಲಭವಾಗಲಿದೆ. ಒಂದು ಬಿಲಿಯನ್ ಬ್ಯಾಂಕ್ ಖಾತೆಗಳಲ್ಲಿ 600 ಮಿಲಿಯನ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ. ಇದರಿಂದ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳು ಪಡೆಯಲು ಸಹಕಾರಿಯಾಗಲಿದೆ ಎಂದು ನುಡಿದರು.

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಉದ್ಯಮ ಕ್ಷೇತ್ರದ ಪ್ರಗತಿ ಆಗಬೇಕಾಗಿದ್ದರೆ ದೇಶದ ಭದ್ರತೆ ಹಾಗೂ ಉತ್ತಮ ಆಡಳಿತ ಅತ್ಯಂತ ಅನಿವಾರ್ಯ. 2009-12ರ ಅವಧಿಯಲ್ಲಿ ಕೆಟ್ಟ ಆಡಳಿತ ಕೇಕೆ ಹಾಕುತ್ತಿತ್ತು. ಹೀಗಾಗಿಯೇ 2-ಜಿ, ಕಾಮನ್‌ವೆಲ್ತ್ ಗೇಮ್‌ನಂತಹ ಹಲವು ಪ್ರಕರಣ ವರದಿಯಾದವು. 2008ರ ಮುಂಬೈ ದಾಳಿಯಿಂದಲೂ ದೇಶದ ಆರ್ಥಿಕತೆ ಮೇಲೆ ಪೆಟ್ಟು ಬಿತ್ತು ಎಂದು ಹೇಳಿದರು.

ರಾಷ್ಟ್ರೀಯತೆ ಹಾಗೂ ದೇಶಭಕ್ತಿಯನ್ನು ವಿವಾದದ ಸರಕಾಗಿ ಬಿಂಬಿಸುತ್ತಿರುವವರ ಬಗ್ಗೆಯೂ ಕಿಡಿ ಕಾರಿದ್ದಾರೆ. ಕೆಲವರು ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ದಾಳಿ ಯಶಸ್ಸಿಗೆ ಪ್ರಧಾನಮಂತ್ರಿ ನರೇಂದ್ರಮೋದಿಗೆ ಏಕೆ ಶ್ರೇಯಸ್ಸು ಕೊಡಬೇಕು ಎಂದು ಪ್ರಶ್ನೆ ಮಾಡುತ್ತಾರೆ. ಇಂತಹ ಸವಾಲಿನ ದೃಢ ನಿರ್ಧಾರ ತೆಗೆದುಕೊಳ್ಳಲು ರಾಜಕೀಯ ಇಚ್ಛಾಶಕ್ತಿ ಬೇಕು ಎಂಬುದನ್ನು ಅರಿಯಬೇಕು ಎಂದರು.

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಮಾತನಾಡಿ, ದೇಶದಲ್ಲಿ ಅಂದಾಜು 50 ಬಿಲಿಯನ್ ಡಾಲರ್‌ಗಳಷ್ಟು ಜೈವಿಕ ವಹಿವಾಟು ನಡೆಯುತ್ತದೆ. ಅದನ್ನು ಮುಂದಿನ 2025 ರ ವೇಳೆಗೆ 100 ಬಿಲಿಯನ್ ಡಾಲರ್, 2023 ರ ವೇಳೆಗೆ 300 ಬಿಲಿಯನ್ ಡಾಲರ್‌ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ಅಲ್ಲದೆ, ಅದಕ್ಕೆ ಅಗತ್ಯವಾದ ಎಲ್ಲ ರೀತಿಯ ಸಂಪನ್ಮೂಲಗಳೂ ನಮ್ಮಲ್ಲಿವೆ. ಆದರೆ, ವಿಶ್ವಮಟ್ಟದಲ್ಲಿ ಸ್ಪರ್ಧೆ ಮಾಡಲು ಅಗತ್ಯವಾದ ಸಂಶೋಧನೆಗಳ ಕೊರತೆ ಕಾಡುತ್ತಿದೆ. ಬಜೆಟ್‌ನಲ್ಲಿ ಶೇ.0.8 ರಷ್ಟು ಹಣವನ್ನು ಸಂಶೋಧನೆಗೆ ಮೀಸಲಿಡುತ್ತಿದ್ದಾರೆ. ಅದನ್ನು ಹೆಚ್ಚಿಸಿ ಶೇ.2 ರಷ್ಟು ಸಂಶೋಧನೆಗೆ ಹಣವಿಟ್ಟರೆ, ಹೆಚ್ಚಿನ ಸಂಶೋಧನೆಗಳು ನಡೆಯುತ್ತವೆ. ನಾವು ಹಲವು ಅದ್ಭುತಗಳನ್ನು ಸೃಷ್ಟಿ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News