ಅಂಬೇಡ್ಕರ್ ಮಹಾಪುರುಷರನ್ನು ಮೀರಿ ಬೆಳೆದವರು: ನ್ಯಾ.ಎಸ್.ಎನ್.ಸತ್ಯನಾರಾಯಣ

Update: 2019-04-24 18:29 GMT

ಬೆಂಗಳೂರು, ಎ.24: ಬಡತನ ಹಾಗೂ ದಲಿತ ಜನಾಂಗದಲ್ಲಿ ಜನಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಸೇರಿ ಇನ್ನಿತರ ಮಹಾ ಪುರುಷರನ್ನು ಮೀರಿ ಬೆಳೆದವರು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅಭಿಪ್ರಾಯಪಟ್ಟಿದ್ದಾರೆ. 

ಬುಧವಾರ ಹೈಕೋರ್ಟ್ ಸಭಾಂಗಣ-1ರಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೆ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ಸೇರಿ ಇನ್ನಿತರ ಮಹಾಪುರುಷರು ಮೇಲ್ಜಾತಿಗಳಲ್ಲಿ ಹಾಗೂ ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳಲ್ಲಿ ಜನಿಸಿ ಈ ದೇಶಕ್ಕೆ ಬಹುದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಆದರೆ, ಅಂಬೇಡ್ಕರ್ ಅವರು ಕಡು ಬಡತನ, ದಲಿತ ಜನಾಂಗದಲ್ಲಿ ಜನಿಸಿ, ಆತ್ಮಸ್ಥೈರ್ಯವನ್ನೆ ತಮ್ಮ ಬಲವನ್ನಾಗಿ ಪರಿವರ್ತಿಸಿಕೊಂಡು ಈ ದೇಶಕ್ಕೆ ಸಂವಿಧಾನವನ್ನು ರಚಿಸಿ ಕೊಟ್ಟರು. ಹೀಗಾಗಿಯೆ ಇವರನ್ನು ಮಹಾ ಪುರುಷರನ್ನು ಮೀರಿ ಬೆಳೆದವರು ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.

1891ರಲ್ಲಿ ಜನಿಸಿದ ಅಂಬೇಡ್ಕರ್ ಅವರು ಚುರುಕು ಬುದ್ಧಿವುಳ್ಳವರಾಗಿದ್ದರು. ಆದರೆ, ಆ ಕಾಲದಲ್ಲಿ ದಲಿತ ವರ್ಗ ಸೇರಿ ಇನ್ನಿತರ ಕೆಳ ಜಾತಿಯವರಿಗೆ ಓದಲು ಅವಕಾಶವಿರಲಿಲ್ಲ. ಆದರೆ, ಅಂಬೇಡ್ಕರ್ ಅವರು ತಮ್ಮ ಎಲ್ಲ ಸಮಸ್ಯೆಗಳನ್ನೂ ಮೆಟ್ಟಿ ನಿಂತು ಮಹಿಳೆಯರು, ದಲಿತರು ಸೇರಿ ಇನ್ನಿತರ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಇಡೀ ವಿಶ್ವಕ್ಕೆ ಬೆಳಕಾದರು. ಹೀಗಾಗಿ, ಇವರ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ನಾವೆಲ್ಲರೂ ಆಚರಿಸೋಣ ಎಂದು ಕರೆ ನೀಡಿದರು.

ಹೆಣ್ಣು ಮಕ್ಕಳ ರಕ್ಷಣೆಗಾಗಿ ಹಿಂದು ಕೋಡ್ ಬಿಲ್ ಅನ್ನು ಜಾರಿಗೆ ತರಬೇಕೆಂದು ಅಂಬೇಡ್ಕರ್ ಅವರು ಹೋರಾಟವನ್ನು ನಡೆಸಿದಾಗ ಇವರ ಸಂಪುಟದ ಸಹೋದ್ಯೋಗಿಗಳು ಯಾರೂ ಇವರ ಪರವಾಗಿ ಧ್ವನಿ ಎತ್ತಲಿಲ್ಲ. ಹೀಗಾಗಿ, ಹಿಂದು ಕೋಡ್ ಬಿಲ್ ಲೋಕಸಭೆಯಲ್ಲಿ ಪಾಸಾಗಲಿಲ್ಲ. ಆದರೆ, ಅವರು ಮರಣ ಹೊಂದಿದ ಬಳಿಕ ಹಿಂದು ಕೋಡ್ ಬಿಲ್ ಅನ್ನು ಜಾರಿಗೆ ತರಲಾಯಿತು. ಈ ಎಲ್ಲ ಸಂಗತಿಗಳನ್ನು ನೋಡುತ್ತಿದ್ದರೆ ಅಂಬೇಡ್ಕರ್ ವಿರುದ್ಧ ಅದೆಷ್ಟು ಶಕ್ತಿಗಳು ಕೆಲಸ ಮಾಡುತ್ತಿದ್ದವು ಎನ್ನುವುದು ಈಗ ನಮ್ಮ ಅರಿವಿಗೆ ಬರುತ್ತಿದೆ ಎಂದು ಹೇಳಿದರು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ನೂರಾರು ಜಾತಿ ಹಾಗೂ ಧರ್ಮಗಳಿವೆ. ಆದರೆ, ಅಂಬೇಡ್ಕರ್ ಅವರು ಇವುಗಳೆಲ್ಲವನ್ನೂ ಸಂವಿಧಾನದಲ್ಲಿ ಅಳವಡಿಸಿ ಭಾರತವನ್ನು ಒಂದು ಸುಭದ್ರ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಿದರು ಎಂದು ಹೇಳಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ಅಂಬೇಡ್ಕರ್ ಅವರು ಎಲ್ಲರನ್ನೂ ಒಳಗೊಂಡ ಸಂವಿಧಾನವನ್ನು ಜಾರಿಗೆ ತಂದಿದ್ದಾರೆ. ಸದ್ಯ ನ್ಯಾಯಾಂಗದಲ್ಲಿ ಆರೋಪಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ, ಡಿ.ಸಿ.ಪರಮೇಶ್ವರಯ್ಯ, ಎಚ್.ಆರ್.ಅನಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News